ಲಕ್ಷ್ಮೀ ಹೆಬ್ಬಾಳ್ಕರ್ ಬೆಳೆದು ಬಂದಿರುವುದು ಯಾವ ರೀತಿ ಎಂಬುದು ಗೊತ್ತು?: ರಮೇಶ್ ಜಾರಕಿಹೊಳಿ ಹೇಳಿದ್ದೇನು?
ಬೆಳಗಾವಿ, ಡಿಸೆಂಬರ್ 05: ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಬೋಗಸ್ ವ್ಯಕ್ತಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಕಿಡಿಕಾರಿದ್ದು, ಲಕ್ಷ್ಮೀ ಹೆಬ್ಬಾಳಕರ ಬೆಳೆದು ಬಂದಿರುವುದು ಯಾವ ರೀತಿ ಎಂಬುವುದು ಬೆಳಗಾವಿಯ ಮೂಲೆ ಮೂಲೆಗೂ ಗೊತ್ತಿದೆ ಎಂದು ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ಲಾಟರಿ ಮಂತ್ರಿ, ಲಾಟರಿ ಎಂಎಲ್ಸಿ ಸಧ್ಯದಲ್ಲೆ ಅವರು ಮಾಜಿ ಆಗುತ್ತಾರೆ. ಇನ್ನು ಪೃಥ್ವಿ ಸಿಂಗ್ ಬೆನ್ನಿಗೆ ನೂರಕ್ಕೆ ನೂರು ನಾನು ನಿಲ್ಲುತ್ತೇನೆ. ಒಂದು ವೇಳೆ ಪೃಥ್ವಿ ಸಿಂಗ್ ವೇನಾದರೂ ತಪ್ಪು ಮಾಡಿದ್ದರೆ ನಾನು ಅವನ ವಿರುದ್ಧ ಎಂದರು. ಲ್ಯಾಂಡ್ ಮಾಫಿಯಾ ಜೋರಾಗಿದೆ ಎಂಬ ವಿಚಾರಕ್ಕೆ ಪಾರಿಶ್ವಾಡದಲ್ಲಿ ಮಹಿಳೆಯರೇ ಗೂಂಡಾಗಿರಿ ಮಾಡುತ್ತಿದ್ದಾರೆ. ಬೇಲಿ ಹಚ್ಚಿ ರಸ್ತೆ ಬಂದ್ ಮಾಡಿ, ಹೊಲ ಕಬ್ಜಾ ಮಾಡಿಕೊಳ್ಳುತ್ತಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಿಜವಾಗಿ ಯಾರಿಗಾದರೂ ಅನ್ಯಾಯವಾದರೆ ಅವರ ಪರವಾಗಿ ನಾನು ನಿಲ್ಲುತ್ತೇನೆ ಎಂದರು.

ಜಾರಕಿಹೊಳಿ ಕುಟುಂಬ ಯಾವತ್ತೂ ಚಿಲ್ಲರೆ ರಾಜಕಾರಣ ಮಾಡಿಲ್ಲ, ಪೃಥ್ವಿಸಿಂಗ್ ಪ್ರಕರಣದಲ್ಲಿ ನ್ಯಾಯ ಸಿಗುವ ನಿರೀಕ್ಷೆ ತನಗಿಲ್ಲ, ಅದನ್ನು ನ್ಯಾಯಾಲಯದಿಂದ ಪಡೆಯುವ ಪ್ರಯತ್ನ ಮಾಡುವುದರ ಜೊತೆಗೆ ಸಿಬಿಐ ತನಿಖೆಗೆ ಆಗ್ರಹಿಸುವುದಾಗಿ ಹೇಳಿದರು. ಇನ್ನೂ ಪೃಥ್ವಿಸಿಂಗ್ ಮೇಲೆ ನಡೆದಿರುವ ಹಲ್ಲೆಗೆ ಸಂಬಂಧಿಸಿದಂತೆ, ಪೊಲೀಸರು ತನಿಖೆ ನಡೆಸಲಿ ಅವರಿಗೆ ಒಂದಷ್ಟು ಸಮಾಯಾವಕಾಶ ನೀಡುವ ಅವಶ್ಯಕತೆಯಿದೆ ಎಂದು ಹೇಳಿದರು.
ಪೊಲೀಸರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಪೊಲೀಸರಿಗೆ ನಾನು ಎಚ್ಚರಿಕೆ ಕೊಡುತ್ತೇನೆ. ಅಪರಾಧದ ನಿಜಸಂಗತಿ ಹೊರಗೆ ಬರಬೇಕು. ತಪ್ಪು ಮಾಡಿದವರ ಮೇಲೆ ತೀವ್ರ ಕ್ರಮ ಆಗಬೇಕು. ಪೊಲೀಸರು ದಾರಿ ತಪ್ಪಿಸುವ ಕೆಲಸ ಮಾಡಿದರೆ ಪೊಲೀಸರ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಮೊರೆ ಹೋಗುತ್ತೇವೆ. ಹಲ್ಲೆ ಪ್ರಕರಣ ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಸ್ಥಳೀಯವಾಗಿ ತನಿಖೆ ಆಗಲಿ, ಆದಷ್ಟು ಬೇಗನೆ ನ್ಯಾಯ ಸಿಗಲಿ ಎಂದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲ್ಯಾಂಡ್ ಮಾಫಿಯಾ ಅತೀ ಹೆಚ್ಚು ನಡೆಯುತ್ತಿದೆ. ಬಡವರ ಜಮೀನು ಕಬ್ಜಾ ಮಾಡಿಕೊಂಡು ಪಹಣಿ ಪತ್ರದಲ್ಲಿ ತಮ್ಮ ಹೆಸರು ಸೇರಿಸಿಕೊಂಡು ಕೋರ್ಟ್ ಮೂಲಕ ಆದೇಶ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.
ನನ್ನ ಪ್ರಕಾರ ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳುವುದು ಅನುಮಾನ. ಹೈದರಾಬಾದಿನಿಂದ ಪೊಲೀಸರ ಮೇಲೆ ಒತ್ತಡ ಬರುತ್ತಿದೆ. ನನಗೆ ಬಂದ ಮಾಹಿತಿ ಪ್ರಕಾರ ಬೆಂಗಳೂರಿನ ಎಡಿಜಿಪಿ ರ್ಯಾಂಕ್ ಪೊಲೀಸ್ ಅಧಿಕಾರಿಗಳು ಸ್ಥಳೀಯ ಪೊಲೀಸರು ಎಫ್ಐಆರ್ ದಾಖಲಿಸದಂತೆ ಒತ್ತಡ ಹೇರುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದಲಿತರು, ಬಡವರ ಮೇಲೆ ಅನ್ಯಾಯ ಆಗುತ್ತಿದೆ. ರವಿ ಪೂಜಾರಿಯಂತ ಭೂಗತ ಪಾತಕಿಯಿಂದ ಹಲವು ಬಾರಿ ನನಗೂ ಜೀವ ಬೆದರಿಕೆ ಬಂದಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಿಡಿಕಾರಿದರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ. ಕೊತ್ವಾಲ್ ರಾಮಚಂದ್ರನ ಶಿಷ್ಯರು ಅಧಿಕಾರದಲ್ಲಿದ್ದಾಗ ಹೇಗೆ ನ್ಯಾಯ ಸಿಗುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹರಿಹಾಯ್ದರು.












Click it and Unblock the Notifications