ನಕಲಿ ದಾಖಲೆ ಮೂಲಕ ಬಿಡದಿಯಲ್ಲಿ 5 ಎಕರೆ ಭೂಮಿ ಗುಳುಂ!
ರಾಮನಗರ, ಮೇ 11 : ನಕಲಿ ದಾಖಲೆಗಳ ಮೂಲಕ ಬಿಡದಿಯ ಸರ್ಕಾರಿ ಗೋಮಾಳದ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಒಟ್ಟು 5 ಎಕರೆ 20 ಗುಂಟೆ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಲಾಗಿತ್ತು.
ರಾಮನಗರ ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್ ಅವರು ಕಂದಾಯ ಇಲಾಖೆಯ ಐವರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಪ್ರಕರಣದ ವಿವರವಾದ ವರದಿ ತಯಾರಿಸಿ, ನೀಡುವಂತೆ ಉಪ ವಿಭಾಗಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. [ಅಕ್ರಮ-ಸಕ್ರಮ ದಂಡ ಶುಲ್ಕ ನಿಗದಿ, ರಿಯಾಯಿತಿ]

ಹೈಕೋರ್ಟ್ ಆದೇಶ ಎಂದು ಸುಳ್ಳು : ಬಿಡದಿ ಹೋಬಳಿಯ ಹರಳಾಳುಸಂದ್ರ ಗ್ರಾಮದ ಸರ್ವೆ ನಂ. 13/ಪಿ1 ಮತ್ತು 170/ಪಿ1ರಲ್ಲಿ ಒಟ್ಟು 5 ಎಕರೆ 20 ಗುಂಟೆ ಸರ್ಕಾರಿ ಗೋಮಾಳ ಜಮೀನನ್ನು ಹೈಕೋರ್ಟ್ ಆದೇಶವೆಂದು ತಪ್ಪಾಗಿ ನಮೂದಿಸಿ, ನಕಲಿ ದಾಖಲೆಗಳನ್ನು ತಯಾರಿಸಿ ಖಾತೆ ಮಾಡಿಕೊಡಲಾಗಿತ್ತು. [ಕರ್ನಾಟಕ : ಅಕ್ರಮ-ಸಕ್ರಮ, ನಿಮಗಿದು ತಿಳಿದಿರಲಿ]
ಜಮೀನನ್ನು ಕುಳ್ಳಯ್ಯ ಬಿನ್ ಕಾಡಯ್ಯ, ಕಾಡಯ್ಯ ಬಿನ್ ಜವರಾಯಪ್ಪ ಎಂಬುವರಿಗೆ ಖಾತೆ ಮಾಡಿ ಕೊಟ್ಟು ಕಂದಾಯ ಇಲಾಖೆ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಅಮಾನತುಗೊಂಡ ಅಧಿಕಾರಿಗಳು : ಬಿಡದಿ ಹೋಬಳಿಯಲ್ಲಿ ಹಿಂದೆ ರಾಜಸ್ವ ನಿರೀಕ್ಷರಾಗಿದ್ದು ಈಗ ಮಾಗಡಿ ತಾಲೂಕಿನ ಆಹಾರ ನಿರೀಕ್ಷರಾಗಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸಯ್ಯದ್ ಸಾಕಿಬುರ್ ರೆಹಮಾನ್, ಗ್ರಾಮ ಲೆಕ್ಕಿಗರಾದ ಎ.ಇ ಗಿರೀಶ್, ಹರ್ಷ, ಭೂಮಿ ಕೇಂದ್ರದ ಗ್ರಾಮ ಲೆಕ್ಕಿಗರಾಗಿರುವ ಕೌಶಲ್ಯ ಮತ್ತು ಭೂಮಿ ಕೇಂದ್ರದ ದ್ವಿತೀಯ ದರ್ಜೆ ಸಹಾಯಕ ಅವಿನಾಶ್ ಸಿಂಧೆ.












Click it and Unblock the Notifications