ಎಲ್ಲಾ ತೀರ್ಥಯಾತ್ರೆಗಿಂತ ಗೋಯಾತ್ರೆ ಶ್ರೇಷ್ಠ: ರಾಘವೇಶ್ವರಶ್ರೀ
ಚಂದ್ರನಿಲ್ಲದ ರಾತ್ರಿಯಂತೆ ಇಂದು ಬೆಳದಿಂಗಳಿನಂತಹ ಹಾಲು ನೀಡುವ ಗೋವು ನಶಿಸುತ್ತಿದೆ ಎಂದು ರಾಘವೇಶ್ವರ ಶ್ರೀಗಳು ಬೇಸರ ವ್ಯಕ್ತ ಪಡಿಸಿದ್ದಾರೆ.
ಬೆಳಗಾವಿ, ಜ 6: ಭಾರತಕ್ಕೆ ಪ್ರಾಣಶಕ್ತಿಯಾಗಿರುವ ಗೋವನ್ನು ಹೊರತು ನಮ್ಮ ಉಳಿಯುವಿಕೆ ಸಾಧ್ಯವಿಲ್ಲ. ಈ ದಿಸೆಯಲ್ಲಿ ಬದುಕಿನ ಮೂಲತತ್ವವೇ ಗೋವಾಗಿದೆ.
ಗೋರಕ್ಷೆ ಭಾರತದ ರಕ್ಷೆ. ಈ ಆಂದೋಲನ ಭಾರತದ ರಕ್ಷೆಗಾಗಿಯೇ ನೆಡೆಯುತ್ತಿದೆ. ಗೋವಿಲ್ಲದೇ ಆರೋಗ್ಯ, ಆರ್ಥಿಕತೆ, ಆಯುಷ್ಯ, ಯಾವುದೂ ಇಲ್ಲ. ಹಾಗಾಗಿ ಎಲ್ಲಾ ತೀರ್ಥಯಾತ್ರೆಗಿಂತ ಗೋಯಾತ್ರೆ ಶ್ರೇಷ್ಟ ಎಂದು ರಾಘವೇಶ್ವರ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ಜಿಲ್ಲೆಯ ಹುಕ್ಕೇರಿಯ ಎಸ್.ಕೆ. ಪಬ್ಲಿಕ್ ಸ್ಕೂಲ್ ಆವರಣದಲ್ಲಿ ರಾಮಚಂದ್ರಾಪುರಮಠ ಆಯೋಜಿಸಿರುವ ಮಂಗಲಗೋಯಾತ್ರೆಯ ಅಂಗವಾಗಿ, ತಾಲ್ಲೂಕು ಮಂಗಲಗೋಯಾತ್ರಾ ಸಮಿತಿ ಆಯೋಜಿಸಿದ್ದ ಸುರಭಿ ಸಂತ ಸಂಗಮ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಚಂದ್ರನಿಲ್ಲದ ರಾತ್ರಿಯಂತೆ ಇಂದು ಬೆಳದಿಂಗಳಿನಂತಹ ಹಾಲು ನೀಡುವ ಗೋವು ನಶಿಸುತ್ತಿದೆ ಎಂದು ರಾಘವೇಶ್ವರ ಶ್ರೀಗಳು ಬೇಸರ ವ್ಯಕ್ತ ಪಡಿಸಿದ್ದಾರೆ. (ರಾಮಚಂದ್ರಾಪುರ ಮಠದ ಆಡಳಿತಕ್ಕೆ ಐಎಸ್ಓ)

ಒಂದು ದೇವಸ್ಥಾನ ಹಾಗೂ ಗೋವನ್ನು ತೂಕ ಮಾಡಿದರೆ ಗೋವೇ ಹೆಚ್ಚು, ದೇವರ ಸಹಜ ನೈಸರ್ಗಿಕ ಸಾನಿಧ್ಯ ಗೋವಿನಲ್ಲಿ ಮಾತ್ರ ಇರುವುದು. ಗೋವಿಗಾಗಿ ಪ್ರೀತಿಯಿಂದ ನೀಡುವುದೆಲ್ಲವೂ ಯಜ್ಞವೇ ಆಗುತ್ತದೆ.
ಗೋಜನ್ಯ ವಸ್ತುಗಳು ಅಮೃತಸಮಾನವೇ ಆಗಿದೆ. ಇಂತಹಾ ಮಹತ್ವವಿರುವ ಗೋವನ್ನು ಹೊಂದಿರುವ ಈ ರಾಷ್ಟ್ರ ಗೋರಕ್ತಸಿಕ್ತವಾಗಬೇಕೋ, ಗೋರಕ್ತಮುಕ್ತವಾಗಬೇಕೋ ಎನ್ನುವುದನ್ನು ನಾವು ಆಲೋಚಿಸಬೇಕಿದೆ.
ನಮ್ಮ ಅಸ್ತಿತ್ವಕ್ಕಾಗಿ, ಗೋವಿನ ಅಸ್ತಿತ್ವಕ್ಕಾಗಿ, ಸಂತರ ಸಂಕುಲ, ಕಾವಿಯ ಕುಲ ಎಲ್ಲವೂ ಒಂದಾಗಿ ಎಲ್ಲಾ ಮತ ಬೇಧಗಳನ್ನು ಬಿಟ್ಟು ಒಟ್ಟಿಗೆ ಹೋರಾಡಬೇಕು ಎಂದು ಸಾರುತ್ತಿದ್ದೇವೆ ಎಂದು ಶ್ರೀಗಳು ಹೇಳಿದ್ದಾರೆ.
ಹುಕ್ಕೇರಿ ತಾಲೂಕನ್ನು ಗೋಹತ್ಯಾ ಕಳಂಕ ಮುಕ್ತ ಮಾಡಲು ಗೋಯಾತ್ರೆ ಬಂದಿದೆ. ಎಲ್ಲಿ ದನವಿದೆಯೋ, ಎಲ್ಲಿ ವನವಿದೆಯೋ ಅದನ್ನು ಮಾತ್ರ ನಂದನವನವೆನ್ನಲು ಸಾಧ್ಯವಿದೆ. ಹೂಗಳಿಗೆ ಹೆಸರಾದ ಹುಕ್ಕೇರಿಯಲ್ಲಿ ಮತ್ತೊಮ್ಮೆ ನಮ್ಮ ವನ, ನಮ್ಮ ದನ, ನಮ್ಮ ಹೂಗಳು ಅರಳಬೇಕಿದೆ. ಗೋಭಕ್ತರೇ ಹೂಗಳಾಗಿ ಆ ಹೂವು ಶಿವನ ವಾಹನವಾದ "ನಂದೀಶ"ನಿಗೇ ಸಲ್ಲಬೇಕಿದೆ ಎಂದು ಶ್ರೀಗಳು ಗೋಸಂದೇಶ ನೀಡಿದರು.
ಸಭೆಯಲ್ಲಿ ಭಾವಹಿಸಿದ್ದ ಕಾರಿಮಠದ ಗುರುಸಿದ್ಧೇಶ್ವರ ಶ್ರೀಗಳು ಮಾತನಾಡಿ, ಗೋರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅದರಲ್ಲೂ ಆಕಳಿನ ಹಾಲು, ಮೊಸರು, ತುಪ್ಪ, ಗೋಮೂತ್ರ, ಗೋಮಯಗಳಿಂದ ಕೂಡಿದ ಪಂಚಗವ್ಯ ವಿಶಿಷ್ಟವಾದದ್ದು.

ಏಕಕಾಲಕ್ಕೆ ಮೂವತ್ತ್ಮೂರು ಕೋಟಿ ದೇವತೆಗಳಿಗೆ ನಮಸ್ಕಾರ ಮಾಡಿದ ಪುಣ್ಯ ಗೋವಿಗೆ ನಮಿಸಿದರೆ ಲಭಿಸುತ್ತದೆ. ಸುಖ, ಶಾಂತಿ, ಆರೋಗ್ಯ, ಆಯುಷ್ಯ ಎಲ್ಲವೂ ಗೋವಿನಿಂದ ಲಭಿಸುತ್ತದೆ.
ಮಾನವನಿಗೆ ಬರುವ ಸಂಕಟಗಳನ್ನು ಪರಿಹರಿಸುವ ಶಕ್ತಿ ಗೋವಿಗಿದೆ. ಇಂತಹಾ ಗೋವಿನ ಕುರಿತು ಸಾರುವ ಮಂಗಲಗೋಯಾತ್ರೆಗೆ ಕೋಟಿ ಕೋಟಿ ನಮನಗಳು ಎಂದು ಕಾರಿಮಠದ ಶ್ರೀಗಳು ಸಂತೋಷ ವ್ಯಕ್ತ ಪಡಿಸಿದ್ದಾರೆ.












Click it and Unblock the Notifications