ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಕ್ಕೆ ಮುಖ್ಯಸ್ಥರ ನೇಮಕ
ಬೆಂಗಳೂರು, ಆಗಸ್ಟ್ 22: ಕರ್ನಾಟಕ ಸರ್ಕಾರ ಅಂತಿಮವಾಗಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ಮೇಲ್ಮನವಿ ನ್ಯಾಯಾಧೀಕರಣಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿದೆ. ರೇರಾಕ್ಕೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕ ಮಾಡಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್ಗೆ ಸಹ ಅರ್ಜಿ ಸಲ್ಲಿಕೆಯಾಗಿತ್ತು. ಅಧ್ಯಕ್ಷರು ಇಲ್ಲದ ಕಾರಣ ಮೇಲ್ಮನವಿ ನ್ಯಾಯಾಧೀಕರಣದಲ್ಲಿ ನೂರಾರು ದೂರುಗಳು ಬಾಕಿ ಉಳಿದಿದ್ದವು.
ಗುರುವಾರ ಕರ್ನಾಟಕ ಸರ್ಕಾರ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಕ್ಕೆ ಮುಖ್ಯಸ್ಥರನ್ನು ನೇಮಕ ಮಾಡಿದೆ. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ರಾಕೇಶ್ ಸಿಂಗ್ ಅವರನ್ನು ಮುಖ್ಯಸ್ಥರಾಗಿ ನೇಮಿಸಿ ಆದೇಶ ಹೊರಡಿಸಿದೆ. ಶೀಘ್ರವೇ ನೇಮಕ ಮಾಡಲಾಗುತ್ತದೆ ಎಂದು ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿತ್ತು. ರಾಕೇಶ್ ಸಿಂಗ್ ಅವರ ಅವಧಿ 5 ವರ್ಷಗಳು.

ರೇರಾ ಮೇಲ್ಮನವಿ ನ್ಯಾಯಾಧೀಕರಣಕ್ಕೆ ಮುಖ್ಯಸ್ಥರನ್ನು ನೇಮಿಸುವಂತೆ ಕೋರಿ ಮ್ಯಾಥ್ಯೂ ಥಾಮಸ್ ಮತ್ತಿತ್ತರರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಅಧ್ಯಕ್ಷರ ಹೆಸರು ಒಳಗೊಂಡ ಕಡತ ಕಳಿಸುವುದು ಮಾತ್ರ ಬಾಕಿ ಇದೆ ಎಂದು ಹೇಳಿದ್ದರು.
ಸುಮಾರು ಒಂದು ವರ್ಷದಿಂದ ರೇರಾ ಮೇಲ್ಮನವಿ ಪ್ರಾಧಿಕಾರ ಮುಖ್ಯಸ್ಥರು ಇಲ್ಲದ ಕಾರಣ ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿರಲಿಲ್ಲ. ಮೇ ತಿಂಗಳಿನಲ್ಲಿ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ಮಹೇಂದ್ರ ಜೈನ್ ಅವರನ್ನು ತಾಂತ್ರಿಕ ಮತ್ತು ಆಡಳಿತಾತ್ಮಕ ಸದಸ್ಯರಾಗಿ ನೇಮಕ ಮಾಡಿತ್ತು. ಉಳಿದ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿತ್ತು.
ಮೂವರು ಸದಸ್ಯರು ಮತ್ತು ಒಬ್ಬರು ಅಧ್ಯಕ್ಷರನ್ನು ರೇರಾ ಮೇಲ್ಮನವಿ ಪ್ರಾಧಿಕಾರ ಒಳಗೊಂಡಿದೆ. 2023ರ ಜೂನ್ನಲ್ಲಿ ರೇರಾ ಮೇಲ್ಮನವಿ ಪ್ರಾಧಿಕಾರ ಕೊನೆಯ ಆದೇಶವನ್ನು ಹೊರಡಿಸಿತ್ತು. ಬಿಲ್ಡರ್ಗಳು ಮತ್ತು ಮನೆ ಖರೀದಿ ಮಾಡುವವರ ನಡುವಿನ ವ್ಯಾಜ್ಯಗಳನ್ನು ಪ್ರಾಧಿಕಾರ ಬಗೆಹರಿಸಲಿದ್ದು, ಇದುವರೆಗೂ ಸುಮಾರು 500 ಆದೇಶಗಳನ್ನು ಹೊರಡಿಸಿದೆ. ಆದರೆ ಈಗ ಅಧ್ಯಕ್ಷರು, ಸದಸ್ಯರು ಇಲ್ಲದ ಕಾರಣ ನೂರಾರು ವ್ಯಾಜ್ಯಗಳು ಬಾಕಿ ಉಳಿದಿದ್ದವು.
ಸದ್ಯದ ನಿಯಮಗಳ ಪ್ರಕಾರ ರೇರಾ ಮೇಲ್ಮನವಿ ನ್ಯಾಯಾಧೀಕರಣಕ್ಕೆ ನೇಮಕವಾಗುವ ಸದಸ್ಯರ ಅಧಿಕಾರಾವಧಿ 5 ವರ್ಷಗಳು ಇಲ್ಲವೇ ವಯೋಮಿತಿ 65 ವರ್ಷಗಳು. ನೇಮಕಾತಿ ವಿಚಾರ ಹೈಕೋರ್ಟ್ ಮೆಟ್ಟಿಲೇರಿದಾಗ ಸರ್ಕಾರ ಮೂರು ವಾರಗಳಲ್ಲಿ ರೇರಾಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಲಾಗುವುದು ಎಂದು ಹೈಕೋರ್ಟ್ಗೆ ಹೇಳಿತ್ತು.
ಸರ್ಕಾರದ ಹೇಳಿಕೆ ದಾಖಲಿಸಿಕೊಂಡಿದ್ದ ಕೋರ್ಟ್ ಅಧ್ಯಕ್ಷರು ಮತ್ತು ಸದಸ್ಯರ ನೇಮಕದಲ್ಲಿ ಯಾವುದೇ ವಿಳಂಬ ಆಗಬಾರದು. ಸದಸ್ಯರ ನಿವೃತ್ತಿಯ ನಂತರ ತಕ್ಷಣವೇ ಅಧಿಕಾರ ವಹಿಸಿಕೊಳ್ಳುವಂತಿರಬೇಕು. ವಿಳಂಬ ಮಾಡಬಾರದು ಎಂದು ಸರ್ಕಾರಕ್ಕೆ ಸೂಚಿಸಿತ್ತು. ಈಗ ಸರ್ಕಾರ ಅಧ್ಯಕ್ಷರನ್ನು ನೇಮಿಸಿದೆ.












Click it and Unblock the Notifications