ಚುನಾವಣೆಗೂ ಮುನ್ನ ರಾಜೀವ್ ಗಾಂಧಿ ಆರೋಗ್ಯ ಭಾಗ್ಯ!

ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ರಾಜ್ಯ ಸರಕಾರವು ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಹೆಸರಿನಲ್ಲಿ 'ರಾಜೀವ್ ಗಾಂಧಿ ಆರೋಗ್ಯ ಭಾಗ್ಯ' ಎಂಬ ವಿನೂತನ ಯೋಜನೆ ಜಾರಿಗೆ ಸಜ್ಜಾಗಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿ ಭಾಗ್ಯ ಸೇರಿದಂತೆ ಬೊಕ್ಕಸಕ್ಕೆ ಹೊರೆಯಾಗುವ ಯೋಜನೆಗಳು ಈಗಾಗಲೇ ಚಾಲ್ತಿಯಲ್ಲಿದ್ದರೂ ಸರಕಾರ ಮತ್ತೊಂದು ಯೋಜನೆ ಜಾರಿಗೆ ಮುಂದಾಗಿರುವುದು ಕುತೂಹಲಕಾರಿಯಾಗಿದೆ.
ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಈ 'ರಾಜೀವ್ ಗಾಂಧಿ ಆರೋಗ್ಯ ಭಾಗ್ಯ ಯೋಜನೆ'ಯು ಸದ್ಯದಲ್ಲೇ ಜಾರಿಗೆ ಬರಲಿದೆ. ಗ್ರಾಮೀಣ ಬಡ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸುವುದು ಯೋಜನೆಯ ಮುಖ್ಯ ಗುರಿಯಾಗಿದೆ. ಈ ಯೋಜನೆಯಿಂದಾಗಿ ರಾಜ್ಯದ ನಗರ ಮತ್ತು ಗ್ರಾಮೀಣ ಭಾಗದಲ್ಲಿರುವ ಸುಮಾರು 4 ಕೋಟಿಗೂ ಹೆಚ್ಚು ಫಲಾನುಭವಿಗಳು ಲಾಭ ಪಡೆಯಲಿದ್ದಾರೆ.
ಯೋಜನೆ ಜಾರಿಗೆ ಬಂದರೆ ಬಡತನ ರೇಖೆಗಿಂತ (BPL) ಮತ್ತು ಸರಾಸರಿ ಬಡತನ ರೇಖೆಗಿಂತ (APL) ಕೆಳಗಿರುವ ಕುಟುಂಬದವರು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಈ ಹಿಂದೆ ಬಿಜೆಪಿ ಸರಕಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ 'ವಾಜಪೇಯಿ ಆರೋಗ್ಯಶ್ರೀ' ಮತ್ತು 'ಯಶಸ್ವಿನಿ ಯೋಜನೆ'ಯನ್ನು ಜಾರಿ ಮಾಡಿತ್ತು. ಇದು ಬಿಪಿಎಲ್ ಕುಟುಂಬಗಳಿಗೆ ಮಾತ್ರ ಅನ್ವಯವಾಗುತ್ತಿತ್ತು.
ಯೋಜನೆಯ ಪ್ರಯೋಜನವೇನು?
ರಾಜೀವ್ ಗಾಂಧಿ ಆರೋಗ್ಯ ಯೋಜನೆಯಲ್ಲಿ Rajiv Gandhi Arogya Bhagya ಕುಟುಂಬದ ಸದಸ್ಯರು ಆರೋಗ್ಯ ವಿಮೆ ಕಾರ್ಡ್ ಹೊಂದಿದ್ದರೆ ಸಾಕು. ಈ ಕಾರ್ಡ್ ಮೂಲಕ ಕುಟುಂಬದ ಸದಸ್ಯರೆಲ್ಲರೂ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.
ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿರುವ ಅಸ್ಪತ್ರೆಗಳಲ್ಲಿ ಕ್ಯಾನ್ಸರ್, ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ, ಕಿಮಿಯೋಥೆರಪಿ, ನರರೋಗ, ಅನ್ನನಾಳ, ಸುಟ್ಟಗಾಯ ಸೇರಿದಂತೆ ವಿವಿಧ ರೀತಿಯ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಚಿಕಿತ್ಸೆಯ ಒಟ್ಟು ವೆಚ್ಚದಲ್ಲಿ ಶೇ.10 ರಷ್ಟನ್ನು ಫಲಾನುಭವಿಗಳು ತೆರಬೇಕು.
ಸರಕಾರ ಇದಕ್ಕಾಗಿ ರಾಜ್ಯದ 450 ಆಸ್ಪತ್ರೆಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ ಕೆಲವು ವಿಮಾ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು ಸದ್ಯದಲ್ಲೇ ಯೋಜನೆ ಕಾರ್ಯರೂಪಕ್ಕೆ ಬರಲಿದೆ.












Click it and Unblock the Notifications