ಆರ್. ಆರ್. ನಗರ, ಶಿರಾ ಪ್ರಚಾರಕ್ಕೆ ತೆರೆ; ನ.3ಕ್ಕೆ ಮತದಾನ
ಬೆಂಗಳೂರು, ನವೆಂಬರ್ 02: ಆರೋಪ ಪ್ರತ್ಯಾರೋಪ, ರಾಜಕೀಯ ಪ್ರತಿಷ್ಠೆಗಳಿಗೆ ಕಾರಣವಾಗಿದ್ದ ಕರ್ನಾಟಕದ 2 ಕ್ಷೇತ್ರಗಳ ಉಪ ಚುನಾವಣೆ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಮಂಗಳವಾರ ಬೆಳಗ್ಗೆ 7 ರಿಂದ ಸಂಜೆ 6ರ ತನಕ ಮತದಾನ ನಡೆಯಲಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ಉಪ ಚುನಾವಣೆ ಬಹಿರಂಗ ಪ್ರಚಾರ ಭಾನುವಾರ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದೆ. ಮತದಾರರು ಅಲ್ಲದವರು ಕ್ಷೇತ್ರ ಬಿಟ್ಟು ಹೊರ ಬಂದಿದ್ದಾರೆ.
ಆರ್. ಆರ್. ನಗರ ಕ್ಷೇತ್ರದಲ್ಲಿ 16, ಶಿರಾದಲ್ಲಿ 15 ಅಭ್ಯರ್ಥಿಗಳು ಕಣದಲ್ಲಿದ್ದು, ಮಂಗಳವಾರ ಮತದಾನ ನಡೆಯಲಿದೆ. ನವೆಂಬರ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಯಾರಿಗೆ ಗೆಲುವು? ಎಂಬುದು ತಿಳಿಯಲಿದೆ.

ಮತದಾರರು ಅಲ್ಲದವರು ಕ್ಷೇತ್ರ ಬಿಟ್ಟು ಹೋಗಬೇಕು ಎಂದು ಆರ್. ಆರ್. ನಗರ ಕ್ಷೇತ್ರದ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್ ಸೂಚಿಸಿದ್ದರು. ಇಂದು ಅಭ್ಯರ್ಥಿಗಳು ಮನೆ ಮನೆ ಪ್ರಚಾರವನ್ನು ನಡೆಸಬಹುದಾಗಿದೆ.
ಶಿರಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಭಾನುವಾರ ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ ಪರವಾಗಿ ಮತಯಾಚನೆ ಮಾಡಿದರು. ಬೃಹತ್ ರೋಡ್ ಶೋ ನಡೆಸಿದರು.
ಆರ್. ಆರ್. ನಗರ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪಕ್ಷದ ಅಭ್ಯರ್ಥಿ ಹೆಚ್. ಕುಸುಮಾ ಪರವಾಗಿ ಮತಯಾಚಿಸಿದರು. ಕಂದಾಯ ಸಚಿವ ಆರ್. ಅಶೋಕ ಪಕ್ಷದ ಅಭ್ಯರ್ಥಿ ಮುನಿರತ್ನ ಪರವಾಗಿ ಪ್ರಚಾರ ನಡೆಸಿದರು.
ಮೂರು ಪಕ್ಷಗಳು ಸಹ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. 2018ರ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿರಲಿಲ್ಲ. ಉಪ ಚುನಾವಣೆ ಗೆದ್ದರೆ ಸರ್ಕಾರದ ವರ್ಚಸ್ಸು ಹೆಚ್ಚಲಿದೆ.












Click it and Unblock the Notifications