ರಾಜ್ ಕುಟುಂಬ ಒಡೆದದ್ದು ಗೀತಾ ಶಿವರಾಜ್ ಕುಮಾರ್
ಶಿವಮೊಗ್ಗದ ಪ್ರತಿಷ್ಠಿತ ಸಾರೇಕೊಪ್ಪ ಬಂಗಾರಪ್ಪ ಕುಟುಂಬದ ಜಗಳ ಬೀದಿಗೆ ಬಂದು ನಿಂತಿದೆ. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಅಣ್ಣತಮ್ಮಂದಿರ ಕಲಹ ತೀವ್ರ ಸ್ವರೂಪ ಪಡೆಯುತ್ತಿದ್ದು, ಡಾ. ರಾಜಕುಮಾರ್ ಕುಟುಂಬವನ್ನು ಒಡೆದದ್ದು ನನ್ನ ಸಹೋದರಿ ಗೀತಾ ಶಿವರಾಜ್ ಕುಮಾರ್ ಎಂದು ಕುಮಾರ್ ಬಂಗಾರಪ್ಪ ಗಂಭೀರ ಆರೋಪ ಮಾಡಿದ್ದಾರೆ.
ರಾಜಕುಮಾರ್ ಅವರ ತುಂಬಿದ ಸಂಸಾರವನ್ನು ಸಹೋದರಿ ಗೀತಾ ಒಡೆದಳು. ಮದುವೆಯಾದ ಎರಡು ತಿಂಗಳಲ್ಲೇ ಬೇರೆ ಮನೆಮಾಡಿಕೊಂಡು ಹೋದರು. ಇದಕ್ಕೆಲ್ಲಾ ಶಿವರಾಜ್ ಕುಮಾರ್ ಅವರ ಬೆಂಬಲವೂ ನನ್ನ ಸಹೋದರಿಗೆ ಇತ್ತು ಎಂದು ಕುಮಾರ್ ಆರೋಪಿಸಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಗುರುವಾರ (ಮಾ 20) ಮೂರು ಸುದ್ದಿವಾಹಿನಿಗಳ ಜೊತೆ ಬೇರೆ ಬೇರೆ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಕುಮಾರ್ ಬಂಗಾರಪ್ಪ, ನನಗೆ ಈಗಲೂ ರಾಜಕುಮಾರ್ ಮನೆಗೆ ಪ್ರವೇಶವಿಲ್ಲ. ಸಹೋದರ ಮಧು ನನ್ನ ಪಾಲಿನ ಆಸ್ತಿಯನ್ನೆಲ್ಲಾ ತನ್ನ ಹೆಸರಿಗೆ ಬರೆಸಿಕೊಂಡ. ಇದಕ್ಕೆ ಶಿವರಾಜ್ ಕುಮಾರ್ ಅವರ ಕುಮ್ಮಕ್ಕೂ ಇತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. (ರಾಜಕೀಯಕ್ಕೆ ಬರಲು ಗೀತಾಗೆ ಪ್ರೇರಣೆಯಾಗಿದ್ದು ಯಾರು)
ಚುನಾವಣೆಯ ಸಮಯದಲ್ಲಿ ಗೀತಾಗೆ ಶಿವಮೊಗ್ಗ ಮತ್ತು ತಂದೆ ಬಂಗಾರಪ್ಪ ನೆನಪು ಬರುತ್ತಿದೆ. ನನ್ನ ತಂದೆ ಸ್ಪರ್ಧಿಸಿದಾಗ ತಂದೆ ಮೇಲಿನ ಪ್ರೇಮ ಎಲ್ಲಿಗೆ ಹೋಗಿತ್ತು. ಇದು ನನ್ನ ತಂದೆಯ ಜೊತೆಗೆ ರಾಜಕುಮಾರ್ ಕುಟುಂಬದ ಹೆಸರಿಗೆ ಮಸಿ ಬಳೆಯುವ ಕೆಲಸವಲ್ಲವೇ ಎಂದು ಕುಮಾರ್ ಬಂಗಾರಪ್ಪ ಪ್ರಶ್ನಿಸಿದ್ದಾರೆ.
ಮಾತಿನುದ್ದಕ್ಕೂ ಮಧು ಮತ್ತು ಗೀತಾ ಮೇಲೆ ಕೋಪ ಹೊರಹಾಕುತ್ತಿದ್ದ ಕುಮಾರ್, ಇವರಿಂದಾಗಿ ಹಲವು ಸಂಸಾರಗಳು ಹಾಳಾಗಿ ಹೋಗಿವೆ. ನನ್ನ ಸಂಸಾರವನ್ನು ಹಾಳು ಮಾಡುವಲ್ಲಿ ಯಶಸ್ವಿಯಾದರು. ಈಗ ರಾಜ್ ಕುಟುಂಬದ ಹೆಸರನ್ನು ದುರುಪಯೋಗ ಪಡೆಸಿಕೊಳ್ಳಲು ಮುಂದಾಗಿದ್ದಾರೆಂದು ಹೇಳಿದ್ದಾರೆ.
ಸಂದರ್ಶನದ ಸಾರಾಂಶ, ಸ್ಲೈಡಿನಲ್ಲಿ ಓದಿ..

ಮಧು ನನ್ನ ಆಸ್ತಿಯನ್ನು ನುಂಗಿ ಹಾಕಿದ
ನನ್ನ ಆಸ್ತಿಯನ್ನು ಮಧು ನುಂಗಿ ಹಾಕಿದ್ದಕ್ಕೆ ನನ್ನಲ್ಲಿ ಹಲವಾರು ದಾಖಲೆಗಳಿವೆ. ಅದನ್ನು ಮಾಧ್ಯಮದ ಮುಂದೆ ತರುತ್ತೇನೆ. ಮಾಧ್ಯಮಗಳಲ್ಲಿ ಮಧು ಜೊತೆ ನೇರ ಮಾತುಕತೆಗೆ ನಾನು ಸಿದ್ದ. ನನ್ನ ತಾಯಿಯನ್ನು ನೋಡಲು ಅವರು ಬಿಡುತ್ತಿಲ್ಲ. ನನ್ನ ಹೆಸರಿನಲ್ಲಿದ್ದ 60-70 ಎಕರೆ ಜಮೀನು, ಕುಮಾರಕೃಪದ ಬಳಿ ಇರುವ ಆಸ್ತಿಯನ್ನು ಮಧು ತನ್ನ ಹೆಸರಿಗೆ ಬರೆಸಿಕೊಂಡಿದ್ದಾನೆ.

ಶಿವಣ್ಣ ಕೂಡಾ ಅವರ ಗುಂಪಿಗೆ ಸೇರಿದ್ದಾರೆ
ಶಿವಣ್ಣ ಕೂಡಾ ಆ ಗುಂಪಿನ ಜೊತೆ ಸೇರಿದ್ದಕ್ಕೆ ನನಗೆ ಬಹಳ ಬೇಸರವಿದೆ. ಶಿವಮೊಗ್ಗದಲ್ಲಿ ಮಾತ್ರ ಶಿವಣ್ಣ ಪ್ರಚಾರ ಮಾಡುತ್ತೇನೆಂದರೆ ಅದಕ್ಕೆ ಏನರ್ಥ? ಇಡೀ ರಾಜ್ಯದಲ್ಲಿ ಪ್ರಚಾರ ಮಾಡಲಿ. ಶಿವಮೊಗ್ಗದಲ್ಲಿ ನನ್ನನ್ನು ರಾಜಕೀಯವಾಗಿ ಸಂಪೂರ್ಣವಾಗಿ ಮೂಲೆಗುಂಪು ಮಾಡುವ ಉದ್ದೇಶ ಇದಲ್ಲವೇ?

ಬಿಜೆಪಿ ಸಿದ್ದಾಂತಕ್ಕೆ ವಿರೋಧ
ನನ್ನ ತಂದೆ ಬಂಗಾರಪ್ಪ ಬಿಜೆಪಿ ಸಿದ್ದಾಂತಕ್ಕೆ ವಿರುದ್ದವಾಗಿ ನನ್ನನ್ನು ಬೆಳೆಸಿದ್ದರು. ಮುಂದೆ ಅವರೇ ಬಿಜೆಪಿಗೆ ಸೇರುತ್ತೇನೆಂದಾಗ ಸ್ವಾಭಾವಿಕವಾಗಿ ಅದಕ್ಕೆ ವಿರೋಧಿಸಿದ್ದೆ. ತಂದೆಗೇ ಎದುರು ವಾದಿಸುತ್ತೀಯಾ ಎಂದು ಮಧು ಕುಟುಂದಲ್ಲಿ ನನ್ನನ್ನು ವಿಲನ್ ಮಾಡಿಸಿದ. ಕುಟುಂಬದವರು ಅವನ ಮಾತನ್ನು ನಂಬಿದರು.

ನಾನು ಅಪ್ಪಟ ಕಾಂಗ್ರೆಸ್ಸಿಗ
ನಾನು ಕಾಂಗ್ರೆಸ್ ಸಿದ್ದಾಂತದಲ್ಲಿ ನಂಬಿಕೆ ಇಟ್ಟವನು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷ ನನಗೆ ಬಿಫಾರಂ ನೀಡುತ್ತೆ ಎನ್ನುವ ನಂಬಿಕೆ ನನಗಿದೆ. ಒಂದು ವೇಳೆ ಬಿಫಾರಂ ನೀಡದಿದ್ದರೆ ಮುಂದಿನ ರಾಜಕೀಯ ನಡೆಯನ್ನು ನಾನು ನಿರ್ಧರಿಸಿತ್ತೇನೆ. (ತಾಜಾ ಸುದ್ದಿಯ ಪ್ರಕಾರ ಕಾಂಗ್ರೆಸ್ ತನ್ನ ಘೋಷಿತ ಅಭ್ಯರ್ಥಿ ಮಂಜುನಾಥ್ ಬಂಡಾರಿಗೆ ಬಿಫಾರಂ ನೀಡಲು ನಿರ್ಧರಿಸಿದೆ)

ನನ್ನ ಮನವಿ ಇಷ್ಟೇ
ನಮ್ಮ ಮನೆಯ ಕಲಹವನ್ನು ಬೀದಿಗೆ ತರಲು ನನಗೂ ಇಷ್ಟವಿಲ್ಲ. ಮಧು, ಗೀತಾ ಮತ್ತು ಶಿವಣ್ಣನಲ್ಲಿ ನನ್ನ ಮನವಿ ಇಷ್ಟೇ. ನಾನು ಅಪ್ಪ, ಅಮ್ಮನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎನ್ನುವ ಆಪಾದನೆ ನನ್ನ ಮೇಲೆ ಹೊರಿಸಬೇಡಿ. ಒಳ್ಳೆಯ ಭಾವನೆಯೊಂದಿಗೆ ಮಾತನಾಡಲು ಕೂತರೆ ನಾನೂ ಬರುತ್ತೇನೆ. ಪರಿಹಾರ ಅನ್ನುವುದು ಎಲ್ಲದಕ್ಕೂ ಇದ್ದೇ ಇದೆ.












Click it and Unblock the Notifications