ರೈತರಲ್ಲಿ ಭರವಸೆ ಮೂಡಿಸಿದ ರೈತ ವಿದ್ಯಾನಿಧಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, ಜುಲೈ 28: ದೇಶದಲ್ಲಿಯೇ ಮೊದಲ ಬಾರಿಗೆ ಪ್ರಾರಂಭಿಸಿದ 'ರೈತ ವಿದ್ಯಾನಿಧಿ' ಯೋಜನೆಯಡಿ ಕಳೆದ ವರ್ಷ 8.50 ಲಕ್ಷ ಹಾಗೂ ಈ ವರ್ಷ 9.8ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ದಿನ ಕೂಡ ಸುಮಾರು 15ರಿಂದ 20 ಸಾವಿರ ಮಕ್ಕಳಿಗೆ ಡಿಬಿಟಿ ಮೂಲಕ ಸಹಾಯಧನ ತಲುಪುತ್ತಿದೆ. ರೈತರ ಕುಟುಂಬಗಳಲ್ಲಿ ಅವರ ಮಕ್ಕಳ ವಿದ್ಯಾಭ್ಯಾಸ ಮಾಡುತ್ತಿರುವುದಕ್ಕೆ ರೈತರಲ್ಲಿ ಭರವಸೆ ಮೂಡಿದೆ.
ಬಡವರಿಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಮಾಶಾಸನ ಮೊತ್ತ ಹೆಚ್ಚಳವಾಗಿದ್ದು, ಹೆಚ್ಚಿನ ಆರ್ಥಿಕ ನೆರವು, ಬಡವರಿಗೆ, ಅಂಗವಿಕಲರಿಗೆ ಸಹಾಯ ಮಾಡಲಾಗಿದೆ. ಎಸ್ಸಿಎಸ್ಪಿ/ಟಿಎಸ್ಪಿ ಅನುದಾನದ ಅಡಿಯಲ್ಲಿ ಎಸ್.ಸಿ, ಎಸ್.ಟಿ ಸಮುದಾಯಕ್ಕೆ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ವಿವಿಧ ನಿಗಮಗಳಿಗೆ ಬಜೆಟ್ ನಲ್ಲಿ ನೀಡಿರುವ ಮೊತ್ತಕ್ಕೆ ಹೆಚ್ಚುವರಿಯಾಗಿ 800 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಅವರು ವಿವರಿಸಿದರು.

100ವಿದ್ಯಾರ್ಥಿ ನಿಲಯ ಸ್ಥಾಪನೆ
ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸುಮಾರು 25ಲಕ್ಷ ಕ್ಕಿಂತ ಹೆಚ್ಚು ಬಡ ಕುಟುಂಬಗಳಿಗೆ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದಕ್ಕೆ ವಾರ್ಷಿಕ 700 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಲಾಗುತ್ತಿದೆ. ವಸತಿ ನಿಲಯಗಳ ಭೋಜನ ವೆಚ್ಚ ಹಾಗೂ ವಿದ್ಯಾರ್ಥಿ ವೇತನದ ಮೊತ್ತ ಹೆಚ್ಚಿಸಲಾಗಿದೆ. 100 ಎಸ್.ಸಿ, ಎಸ್.ಟಿ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲಾಗುತ್ತಿದೆ. 50 ಒಬಿಸಿ ಹಾಸ್ಟೆಲ್ಗಳು ಮತ್ತು ಐದು ನಗರಗಳಲ್ಲಿ 1000 ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸುವ ಬೃಹತ್ ಹಾಸ್ಟೆಲ್ಗಳನ್ನು ಹುಬ್ಬಳ್ಳಿ- ಧಾರವಾಡ, ಬೆಂಗಳೂರು, ಕಲಬುರಗಿ, ಮೈಸೂರು ಮತ್ತು ಮಂಗಳೂರಿನಲ್ಲಿ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಮನೆ ನಿರ್ಮಾಣದ ಅನುದಾನ ಹೆಚ್ಚಳ
ಬದುಕಿನಲ್ಲಿ ಎಲ್ಲ ವರ್ಗದ ಜನರು ಮನೆ ನಿರ್ಮಾಣದ ಕನಸು ಕಾಣುತ್ತಿರುತ್ತಾರೆ. ಅಂತವರ ಕನಸ ನನಸಲು ಮಾಡಲು ಮನೆ ನಿರ್ಮಾಣಕ್ಕೆ ಒದಗಿಸುವ ಅನುದಾನವನ್ನು 75ಸಾವಿರದಿಂದ 1ಲಕ್ಷ ರೂ.ಗೆ ಏರಿಸಲಾಗಿದೆ. ಭೂಚೇತನ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸುಮಾರು 3,500 ಹೆಕ್ಟೇರ್ ಜಮೀನು ಖರೀದಿ ಮಾಡಲಾಗಿದೆ. ಮನೆ ಖರೀದಿ ಮಾಡುವ ದರವನ್ನೂ ಸಹ ಹೆಚ್ಚಿಸಲಾಗಿದೆ. ರೂ. 1.75 ಲಕ್ಷ ಇದ್ದ ಮೊತ್ತವನ್ನು ರೂ. 2 ಲಕ್ಷಕ್ಕೆ ಹೆಚ್ಚಳ ಮಾಡಿದ್ದೇವೆ ಎಂದರು.

ಸ್ತ್ರೀ ಶಕ್ತಿ ಸಂಘಗಳ ಬಲವರ್ಧನೆ ಯೋಜನೆ
ಸ್ತ್ರೀ ಶಕ್ತಿ ಸಂಘಗಳ ಬಲವರ್ಧನೆಗೆ ವಿಶೇಷವಾದ ಯೋಜನೆಯನ್ನು ಪ್ರಥಮಬಾರಿ ರಾಜ್ಯದಲ್ಲಿ ರೂಪಿಸಲಾಗಿದೆ. ಉದ್ಯೋಗ ದೊರಕಿಸಲು, 1.50 ಲಕ್ಷ ಹಣ ನೀಡಿ ಆಂಕರ್ ಬ್ಯಾಂಕುಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅವರಿಗೆ ಸಾಲ ಖಾತ್ರಿಯಾಗಿ ಸಿಗುವ ವ್ಯವಸ್ಥೆ ಮಾಡಿ, ವಿವಿಧ ಕಸುಬುಗಳಲ್ಲಿ ತರಬೇತಿ ನೀಡಿ ಅವರು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ವಿವಿಧ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ.

ಸ್ತ್ರೀಯರಿಗೆ ಸ್ವಯಂ ಉದ್ಯೋಕ್ಕೆ ಪಡೆಯಲು ಅನುವು
ಪ್ರಥಮ ಬಾರಿಗೆ ಸ್ತ್ರೀ ಶಕ್ತಿ ಸಂಘಗಳಿಗೆ ಉತ್ಪಾದನೆಗೆ ಸಹಾಯ ಮಾಡುವುದಲ್ಲದೆ ಮಾರುಕಟ್ಟೆ ಒದಗಿಸುವ ಎಂಡ್ ಟು ಎಂಡ್ ಅಪ್ರೋಚ್ ಮೂಲಕ 5 ಲಕ್ಷ ಸ್ತ್ರೀಯರಿಗೆ ಸ್ವಯಂ ಉದ್ಯೋಗ ಅವಕಾಶ ಕಲ್ಪಿಸಲಾಗುತ್ತಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಒಪ್ಪಿ ಅನುಷ್ಠಾನ ಮಾಡುತ್ತಿರುವ ಮೊದಲ ರಾಜ್ಯ ಕರ್ನಾಟಕ. ಕೋವಿಡ್ ಸಂದರ್ಭದಲ್ಲಿ ಆರೋಗ್ಯ ವಲಯದಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗಿದೆ. ಬಿಜೆಪಿ ಸರ್ಕಾರ 750 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ತಲಾ 20 ಲಕ್ಷ ರೂ.ಗಳನ್ನು ವ್ಯಯಿಸುತ್ತಿದೆ ಎಂದು ಕಳೆದ ಒಂದು ವರ್ಷದ ಬಿಜೆಪಿ ಸರ್ಕಾರ ಸಾಧನೆ ಕುರಿತು ಅವರು ವಿವರಿಸಿದರು.












Click it and Unblock the Notifications