ಕರ್ನಾಟಕ; ದಕ್ಷಿಣ ಒಳನಾಡಿನಲ್ಲಿ ನವೆಂಬರ್ 4ರ ತನಕ ಮಳೆ
ಬೆಂಗಳೂರು, ಅಕ್ಟೋಬರ್ 31; ಕರ್ನಾಟಕದ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ನವೆಂಬರ್ 4ರ ತನಕ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಕ್ಟೋಬರ್ 31ರಂದು ವಿವಿಧ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.
ಅಕ್ಟೋಬರ್ 31 ರಿಂದ ನವೆಂಬರ್ 4ರ ತನಕ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ತಗ್ಗಲಿದ್ದು, ಒಣಹವೆ ಮುಂದುವರೆಯಲಿದೆ. ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ.
ಮುಂದಿನ 3 ದಿನ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ
ಭಾನುವಾರ ಶಿವಮೊಗ್ಗ, ರಾಮನಗರ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.
ಕೇರಳದಲ್ಲಿ ವ್ಯಾಪಕ ಮಳೆ: 5 ಜಿಲ್ಲೆಗಳಿಗೆ ಮತ್ತೆ ಆರೆಂಜ್ ಅಲರ್ಟ್
ಕರಾವಳಿ ಪ್ರದೇಶದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನವೆಂಬರ್ 2 ರಿಂದ ಮಳೆ ಹೆಚ್ಚಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹೆಚ್ಚಿರಲಿದ್ದು ಸಾಧಾರಣ ಮಳೆ ಸುರಿಯಬಹುದು ಎಂದು ಮುನ್ಸೂಚನೆ ನೀಡಲಾಗಿದೆ.
ದಕ್ಷಿಣ ಭಾರತದ ರಾಜ್ಯಗಳಲ್ಲಿ ನ.1ರ ತನಕ ಭಾರೀ ಮಳೆ
ಶನಿವಾರ ಮೈಸೂರಿನ ಸಾಲಿಗ್ರಾಮ, ಚಿತ್ರದುರ್ಗದ ರಾಮಗಿರಿ, ತುಮಕೂರಿನ ಕುಣಿಗಲ್ನಲ್ಲಿ ತಲಾ 3 ಸೆಂ. ಮೀ. ಮಳೆಯಾಗಿದೆ. ಸುಳ್ಯದಲ್ಲಿ 2, ಮಡಿಕೇರಿ, ಚನ್ನಗಿರಿ, ಸಂಡೂರಿನಲ್ಲಿ ತಲಾ 1 ಸೆಂ. ಮೀ. ಮಳೆಯಾಗಿದೆ.
ಹಾಸನದಲ್ಲಿ ಭಾರೀ ಮಳೆ; ಶನಿವಾರ ಸಂಜೆ ಹಾಸನ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದೆ. ಸಂಜೆ 6 ಗಂಟೆಯಿಂದ ಸುರಿದ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಯಿತು. ಮಳೆಯ ನೀರು ರಸ್ತೆಗಳಲ್ಲಿ ತುಂಬಿಕೊಂಡು ವಾಹನ ಸವಾರರರು ಪರದಾಟ ನಡೆಸುವಂತಾಯಿತು.
ಕೊಪ್ಪಳ, ಬೀದರ್, ಕಲಬುರಗಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದೆ. ಅಲ್ಲಲ್ಲಿ ಸಾಮಾನ್ಯ ಮಳೆಯಾಗುವ ನಿರೀಕ್ಷೆ ಇದೆ.
ಬೆಂಗಳೂರು ನಗರದಲ್ಲಿ ಶನಿವಾರ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ. ನಗರದಲ್ಲಿ ಇದೇ ಹವಾಮಾನ ಮಂಗಳವಾರದ ತನಕ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳದ ದಕ್ಷಿಣ ಭಾಗದಲ್ಲಿ ಮಳೆಯಾಗುತ್ತಿದೆ. ಕೇರಳದ 12 ಜಿಲ್ಲೆಗಳಲ್ಲಿ ನವೆಂಬರ್ 3ರ ತನಕ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.
ಕರ್ನಾಟಕದ ಬಹುತೇಕ ಜಲಾಶಯಗಳು ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಭರ್ತಿಯಾಗಿತ್ತು. ಕಾವೇರಿ ಕೊಳ್ಳದ ಪ್ರಮುಖ ಜಲಾಶಯ ಕೆಆರ್ಎಸ್ ಅಕ್ಟೋಬರ್ ಅಂತ್ಯಕ್ಕೆ ಭರ್ತಿಯಾಗಿದೆ. ಶನಿವಾರ ಡ್ಯಾಂನಲ್ಲಿ 38.04 ಮೀಟರ್ ನೀರಿನ ಸಂಗ್ರಹವಿದ್ದು, 6888 ಕ್ಯುಸೆಕ್ ಒಳಹರಿವು ದಾಖಲಾಗಿದೆ.
ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕೊಡಗು ಜಿಲ್ಲೆಯಲ್ಲಿ ಸರಾಸರಿ 5.99 ಮಿ.ಮೀ. ಜನವರಿಯಿಂದ ಇಲ್ಲಿಯವರೆಗೆ 2762.21 ಮಿ. ಮೀ. ಮಳೆಯಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2618.90 ಮಿ. ಮೀ. ಮಳೆಯಾಗಿತ್ತು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಶನಿವಾರದ ನೀರಿನ ಮಟ್ಟ 2858.02 ಅಡಿಗಳು. ಒಳಹರಿವು 705 ಕ್ಯುಸೆಕ್, ಹೊರ ಹರಿವು ನದಿಗೆ 700 ಕ್ಯುಸೆಕ್, ನಾಲೆಗೆ 325 ಕ್ಯುಸೆಕ್ ಆಗಿದೆ.
ಸೆಪ್ಟೆಂಬರ್ನಲ್ಲಿಯೇ ನೈಋತ್ಯ ಮುಂಗಾರು ಅಂತ್ಯಗೊಂಡರೂ ಚಂಡಮಾರುತದದ ಪ್ರಭಾವದಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅಕ್ಟೋಬರ್ನಲ್ಲಿಯೂ ಮಳೆ ಮುಂದುವರೆದಿದೆ. ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಸುರಿದ ಮಳೆಯಿಂದಾಗಿ ಕೆರೆಕಟ್ಟೆಗಳು ಭರ್ತಿಯಾಗಿವೆ.
ವಿವಿಧ ಜಿಲ್ಲೆಗಳಲ್ಲಿ ಈಗ ಮಳೆಯ ಅಗತ್ಯವಿಲ್ಲ. ಬೆಳೆಗಳು ಕಟಾವಿಗೆ ಬಂದಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಅಡಿಕೆ ಕಟಾವು ಮಾಡುವ ಸಮಯವಾಗಿದೆ. ಆದರೆ ಮಳೆ ನಿರಂತರವಾಗಿ ಸುರಿಯುತ್ತಲೇ ಇದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿವಿಧ ತೋಟಗಾರಿಕಾ ಬೆಳೆಗಳಿಗೂ ಮಳೆಯಿಂದಾಗಿ ಹಾನಿಯಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭತ್ತದ ಬೆಳೆ ಮಳೆಯಿಂದಾಗಿ ಹಾನಿಗೊಂಡಿದೆ. ಮಳೆಯಿಂದಾಗಿ ಆದ ಹಾನಿ ಬಗ್ಗೆ ಸಮೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.