Karnataka Rain: ಭರ್ಜರಿ ಮಳೆ, ಕರ್ನಾಟಕದ ಡ್ಯಾಂಗಳ ನೀರಿನ ಮಟ್ಟ!
ಕರ್ನಾಟಕದಲ್ಲಿ ಉತ್ತಮವಾಗಿ ಮಳೆ ಬೀಳುತ್ತಿರುವ ಹಿನ್ನೆಲೆ ರೈತರಲ್ಲಿ ಒಂದಷ್ಟು ನೆಮ್ಮದಿ ಮೂಡಿದೆ. ಅದರಲ್ಲೂ ರಾಜ್ಯದ ಜಲಾಶಯಗಳಿಗೆ ನೀರು ಹರಿದು ಬರುವ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉತ್ತಮವಾಗಿ ಮಳೆ ಬೀಳುತ್ತಿದೆ. ಹೀಗಾಗಿ ಬತ್ತಿ ಹೋಗುತ್ತಿದ್ದ ಕರ್ನಾಟಕದಲ್ಲಿ ಡ್ಯಾಂಗಳು ಮತ್ತೆ ಜೀವ ಕಳೆ ತುಂಬಿಕೊಳ್ಳುವ ಲಕ್ಷಣ ಗೋಚರಿಸಿದೆ. ಈ ಪೈಕಿ ಮಲೆನಾಡು ಭಾಗದಲ್ಲಿ ಮುಂದಿನ ಕೆಲವು ದಿನಗಳ ಕಾಲ ಭರ್ಜರಿ ಮಳೆ ಬೀಳುವ ಸೂಚನೆ ಸಿಕ್ಕಿದೆ.
ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಕಾರಣ ಭಾರಿ ಆತಂಕ ಎದುರಾಗಿತ್ತು. ಅದರಲ್ಲೂ ಜುಲೈ ತಿಂಗಳಲ್ಲಿ ಸುರಿದಿದ್ದ ಮಳೆ ಬಿಟ್ಟರೆ, ಆಗಸ್ಟ್ ತಿಂಗಳಲ್ಲಿ ಮಳೆ ಬೀಳಲಿಲ್ಲ. ಹೀಗಾಗಿ ರೈತರು ಆತಂಕದಲ್ಲೇ ದಿನದೂಡುವ ಪರಿಸ್ಥಿತಿ ಇತ್ತು. ಸೆಪ್ಟೆಂಬರ್ ಆರಂಭದಲ್ಲಿ ಮಳೆಯು ಒಂದಷ್ಟು ಅಲರ್ಟ್ ಆಗಿದ್ದು, ವರುಣದೇವ ಕರುಣೆ ತೋರಿದ್ದಾನೆ. ಹೀಗಾಗಿ ಉತ್ತಮವಾಗಿ ಮಳೆ ಬೀಳುತ್ತಿದೆ. ಹಾಗಾದರೆ ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಈಗ ಎಷ್ಟಿದೆ? ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಜಲಾಶಯಗಳಿಗೆ ಮತ್ತೆ ಜೀವಕಳೆ?
1) ಹಾರಂಗಿ ಡ್ಯಾಂ: ಹಾರಂಗಿ ಗರಿಷ್ಠ 8.50 ಟಿಎಂಸಿ ಸಾಮರ್ಥ್ಯ ಹೊಂದಿದ್ದು, 7.29 TMC ನೀರು ಸಂಗ್ರಹವಾಗಿದೆ. ಕಳೆದ ವರ್ಷ 7.67 ಟಿಎಂಸಿ ನೀರು ಇತ್ತು. ಹಾರಂಗಿ ಜಲಾಶಯದ ಒಳಹರಿವು 1779 ಕ್ಯುಸೆಕ್ ಆಗಿದ್ದು, ಒಟ್ಟಾರೆ 550 ಕ್ಯುಸೆಕ್ ಹೊರಗೆ ಬಿಡಲಾಗುತ್ತಿದೆ.
2) ಹೇಮಾವತಿ ಡ್ಯಾಂ: 37.10 ಟಿಎಂಸಿ ಸಾಮರ್ಥ್ಯದ ಹೇಮಾವತಿ ಜಲಾಶಯದಲ್ಲಿ ಇದೀಗ 21.74 ಟಿಎಂಸಿ ನೀರು ಇದ್ದು, ಕಳೆದ ವರ್ಷ 37.06 ಟಿಎಂಸಿ ನೀರು ಇತ್ತು. 649 ಕ್ಯುಸೆಕ್ ಒಳಹರಿವು ಹೇಮಾವತಿ ಡ್ಯಾಂಗೆ ಬರುತ್ತಿದ್ದು, 6030 ಕ್ಯುಸೆಕ್ ಹೊರಹರಿವು ದಾಖಲಾಗಿದೆ.

3) ಕಬಿನಿ ಜಲಾಶಯ: ಕಬಿನಿ ಡ್ಯಾಂನಲ್ಲಿ 19.52 ಟಿಎಂಸಿ ಗರಿಷ್ಠ ನೀರು ಸಂಗ್ರಹಿಸಬಹುದು. ಆದರೆ ಈಗ 13.62 ಟಿಎಂಸಿ ಸಂಗ್ರಹವಾಗಿದೆ. ಕಳೆದ ವರ್ಷ ಕಬಿನಿ ಜಲಾಶಯದಲ್ಲಿ 19.21 ನೀರು ಸಂಗ್ರಹವಾಗಿತ್ತು. ಮಳೆಯ ಆರ್ಭಟ ಶುರುವಾದ ಹಿನ್ನೆಲೆ ಮತ್ತೆ ಮುಂದಿನ ದಿನಗಳಲ್ಲಿ ಕಬಿನಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುವ ನಿರೀಕ್ಷೆ ಇದೆ. ಈಗ ಜಲಾಶಯಕ್ಕೆ 2007 ಕ್ಯುಸೆಕ್ ನೀರು ಹರಿದು ಬರುತ್ತಿದೆ.
4) ಕೆಆರ್ಎಸ್ ಜಲಾಶಯ: 49 ಟಿಎಂಸಿ ಗರಿಷ್ಠ ಸಾಮರ್ಥ್ಯವಿದ್ದು, ಜಲಾಶಯದಲ್ಲಿ 21.43 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ ಕೆಆರ್ಎಸ್ ಜಲಾಶಯದಲ್ಲಿ 49.20 ಟಿಎಂಸಿ ನೀರು ಸಂಗ್ರಹವಾಗಿತ್ತು. ಕೆಆರ್ಎಸ್ ಡ್ಯಾಂಗೆ ಈಗ 2,893 ಕ್ಯುಸೆಕ್ ನೀರು ಬರುತ್ತಿದೆ. ತಮಿಳುನಾಡು ಕಿರಿಕ್ ಹಿನ್ನೆಲೆ 6,267 ಕ್ಯುಸೆಕ್ ನೀರು ಹೊರಗೆ ಬಿಡಲಾಗುತ್ತಿದೆ.

5) ಭದ್ರಾ ಡ್ಯಾಂ: ಭದ್ರಾ ಡ್ಯಾಂ 71 ಟಿಎಂಸಿ ನೀರು ಗರಿಷ್ಠ ಸಾಮರ್ಥ್ಯ ಹೊಂದಿದೆ. ಈಗ 45.30 ಟಿಎಂಸಿ ಸಂಗ್ರಹವಾಗಿದ್ದು ಕಳೆದ ವರ್ಷ ಈ ವೇಳೆಗೆ ಭದ್ರಾ ಜಲಾಶಯದಲ್ಲಿ 70.44 ಸಂಗ್ರಹವಾಗಿತ್ತು. ಭದ್ರಾ ಡ್ಯಾಂಗೆ 524 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಈ ಸಮಯದಲ್ಲೇ ಕೃಷಿಗೆ ನೀರು ಹರಿಸುತ್ತಿರುವ ಕಾರಣ 3,163 ಹೊರಹರಿವು ಇದೆ.
6) ತುಂಗಭದ್ರಾ ಡ್ಯಾಂ: ಬಯಲು ಸೀಮೆ ಜೀವನಾಡಿ ತುಂಗಭದ್ರಾ ಭರ್ತಿಯಾಗಿಲ್ಲ. ಗರಿಷ್ಠ 105 ಟಿಎಂಸಿ ಸಾಮರ್ಥ್ಯ ಇರುವ ತುಂಗಭದ್ರಾ ಡ್ಯಾಂನಲ್ಲಿ 72.08 ಟಿಎಂಸಿ ಸಂಗ್ರಹವಾಗಿದೆ. ಕಳೆದ ವರ್ಷ 104.18 ಟಿಎಂಸಿ ನೀರು ಇತ್ತು. ತುಂಗಭದ್ರಾ ಒಳಹರಿವು ಕೇವಲ 1266 ಕ್ಯುಸೆಕ್ ಇದ್ದು, ಹೊರ ಹರಿವು 9218ಕ್ಕೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಕೊರತೆ ಭೀತಿ ಕಾಡುತ್ತಿದೆ.
7) ಆಲಮಟ್ಟಿ ಡ್ಯಾಂ: ಬೃಹತ್ ಡ್ಯಾಂ ಆಲಮಟ್ಟಿಗೆ ಬಹುತೇಕ ತುಂಬಿದೆ. ಆಲಮಟ್ಟಿಯ ಒಟ್ಟು ಸಾಮರ್ಥ್ಯ 123.08 ಟಿಎಂಸಿ, ಇದೀಗ 118.05 ಟಿಎಂಸಿ ಸಂಗ್ರಹವಾಗಿದೆ. ಆದ್ರೆ ಕಳೆದ ವರ್ಷ ಈ ಸಮಯಕ್ಕೆ 123.08 ಟಿಎಂಸಿ ನೀರು ಇತ್ತು. ಆಲಮಟ್ಟಿ ಒಳ ಹರಿವು 358 ಕ್ಯುಸೆಕ್ ಇದ್ದು 6215 ಕ್ಯುಸೆಕ್ ಹೊರಹರಿವು ದಾಖಲಾಗಿದೆ.
8) ಘಟಪ್ರಭಾ ಡ್ಯಾಂ: ಇಲ್ಲಿ 51 ಟಿಎಂಸಿ ಗರಿಷ್ಠ ಸಾಮರ್ಥ್ಯ, ಇದೀಗ 41.56 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ವೇಳೆಗೆ ಘಟಪ್ರಭಾ ಜಲಾಶಯದಲ್ಲಿ 51.00 ಟಿಎಂಸಿ ನೀರು ಇತ್ತು. ಘಟಪ್ರಭಾ ಡ್ಯಾಂಗೆ 598 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 176 ಕ್ಯುಸೆಕ್ ಹೊರಹರಿವು ಇದೆ.
9) ಮಲಪ್ರಭಾ ಡ್ಯಾಂ: 37.73 ಟಿಎಂಸಿ ಗರಿಷ್ಠ ಸಾಮರ್ಥ್ಯ ಮಲಪ್ರಭಾ ಜಲಾಶಯಕ್ಕೆ ಇದೆ. ಇದೀಗ 21.61 ಟಿಎಂಸಿ ಸಂಗ್ರಹವಾಗಿದೆ. ಕಳೆದ ವರ್ಷ ಈ ವೇಳೆಗೆ ಮಲಪ್ರಭ ಜಲಾಶಯದಲ್ಲಿ 37.73 ಟಿಎಂಸಿ ಸಂಗ್ರಹವಾಗಿತ್ತು. ಈಗ ಮಲಪ್ರಭಾ ಜಲಾಶಯಕ್ಕೆ 00 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಹೊರಹರಿವು 760 ಕ್ಯುಸೆಕ್ ದಾಖಲಾಗಿದೆ.
10) ಸೂಫಾ ಡ್ಯಾಂ: ಮಲೆನಾಡಲ್ಲಿ ಮಳೆ ಕೊರತೆ ಇರುವ ಕಾರಣ ಸೂಫಾ ಡ್ಯಾಂಗೆ ಕೂಡ ನೀರಿನ ಕೊರತೆ ಕಾಡುತ್ತಿದೆ. ಸೂಫಾ ಡ್ಯಾಂ ಸಾಮರ್ಥ್ಯ 145 ಟಿಎಂಸಿ ಆಗಿದ್ದು, 77.15 ಈಗ ಸಂಗ್ರಹವಾಗಿದೆ. ಕಳೆದ ವರ್ಷ 94.68 ನೀರು ಇತ್ತು. ಒಳಹರಿವು 1230 ಕ್ಯುಸೆಕ್ ಇದ್ದು, 199 ಕ್ಯುಸೆಕ್ ಹೊರಬಿಡಲಾಗುತ್ತಿದೆ.
11) ವರಾಹಿ ಜಲಾಶಯ: ಗರಿಷ್ಠ ಸಾಮರ್ಥ್ಯ 31 ಟಿಎಂಸಿ, ಈಗ 9.22 ಟಿಎಂಸಿ ನೀರು ಇದೆ. ಕಳೆದ ವರ್ಷ ವರಾಹಿ ಡ್ಯಾಂನಲ್ಲಿ 21.57 ಟಿಎಂಸಿ ನೀರು ಇದೆ ಸಮಯಕ್ಕೆ ಸಂಗ್ರಹವಾಗಿತ್ತು. ವರಾಹಿ ಡ್ಯಾಂಗೆ 1135 ಕ್ಯುಸೆಕ್ ಬರುತ್ತಿದೆ.
12) ಲಿಂಗನಮಕ್ಕಿ ಡ್ಯಾಂ: ಮಲೆನಾಡು ಭಾಗದಲ್ಲಿ ಭರ್ಜರಿ ಮಳೆ ಬೀಳದ ಹಿನ್ನೆಲೆ, ಈ ಬಾರಿ ಲಿಂಗನಮಕ್ಕಿಗೆ ಕಡಿಮೆ ಪ್ರಮಾಣದ ನೀರು ಬಂದಿತ್ತು. ಹೀಗಾಗಿ ಲಿಂಗನಮಕ್ಕಿ ಸಾಮರ್ಥ್ಯ 151 ಟಿಎಂಸಿ ಇದ್ದರೂ ಕೇವಲ 67.72 ಟಿಎಂಸಿ ನೀರು ಸಂಗ್ರಹ ಇದೆ. ಒಳಹರಿವು 1696 ಸಾವಿರ ಕ್ಯುಸೆಕ್ಗೆ ಕುಸಿದಿದ್ದು, 3788 ಕ್ಯುಸೆಕ್ ಹೊರಹರಿವು ದಾಖಲಾಗಿದೆ.
ಒಟ್ನಲ್ಲಿ ರಾಜ್ಯದಲ್ಲಿ ಮುಂದಿನ ಒಂದು ವಾರ ಕಾಲ ಉತ್ತಮವಾಗಿ ಮಳೆ ಸುರಿಯುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ರಾಜ್ಯದ ಜಲಾಶಯಗಳು ಕೂಡ ತುಂಬುವ ನಿರೀಕ್ಷೆ ಇದೆ. ರೈತ ಸಮುದಾಯ ಕೂಡ ಭರ್ಜರಿ ಮಳೆಗಾಗಿ ಕಾದು ಕೂತಿದ್ದು, ಈ ತಿಂಗಳು ಸುರಿಯುವ ಮಳೆ ಎಲ್ಲವನ್ನೂ ನಿರ್ಧಾರ ಮಾಡಲಿದೆ. ಆದ್ರೆ ಅಕಸ್ಮಾತ್ ಮಳೆ ಕೈಕೊಟ್ಟರೆ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ. ಹೀಗಾಗಿ ಜನರು ಕೂಡ ವರುಣ ದೇವನಲ್ಲಿ ಪ್ರಾರ್ಥಿಸುತ್ತಿದ್ದಾರೆ.












Click it and Unblock the Notifications