ಕರ್ನಾಟಕದಲ್ಲಿ ಮಳೆ; ಅಧಿಕಾರಿಗಳಿಗೆ, ಡಿಸಿಗಳಿಗೆ ಸೂಚನೆಗಳು
ಬೆಂಗಳೂರು, ಮೇ 24; ಕರ್ನಾಟಕಲ್ಲಿ ನೈಋತ್ಯ ಮುಂಗಾರು ಪೂರ್ವ ಮಳೆ ಆರಂಭವಾಗಿದೆ. ಗುಡುಗು, ಸಿಡಿಲಿನ ಆರ್ಭಟದ ಜೊತೆ ಸುರಿಯುತ್ತಿರುವ ಮಳೆ ಹಾನಿಯನ್ನು ಮಾಡುತ್ತಿದೆ. ಜೂನ್ 10ರ ಬಳಿಕ ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ನಿರೀಕ್ಷೆ ಮಾಡಲಾಗಿದೆ.
ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓಗಳ ಸಭೆ ನಡೆಸಿ ಮುಂಗಾರು ತಯಾರಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಕರ್ನಾಟಕ ಸರ್ಕಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಪತ್ರ ದಿನಾಂಕ 01/05/2023 ಉಲ್ಲೇಖಿಸಿ ಮುಂಗಾರು 2023 ಪೂರ್ವಸಿದ್ಧತೆ ಕುರಿತು ಸಲಹೆ, ಸೂಚನೆಗಳನ್ನು ಅಧಿಕಾರಿಗಳಿಗೆ, ಜಿಲ್ಲಾಡಳಿತಕ್ಕೆ ನೀಡಿದೆ.

ಮುಂಗಾರಿನಲ್ಲಿ ವಾಡಿಕೆ ಮಳೆ; ಭಾರತ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪ್ರಸಕ್ತ ಮುಂಗಾರು ಮಳೆ ಹಾಗೂ ಚಂಡಮಾರುತಗಳ ಪರಿಣಾಮಗಳನ್ನು ತಗ್ಗಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಲಹೆ ಸೂಚನೆಗಳನ್ನು ನೀಡಿರುತ್ತದೆ. ಭಾರತೀಯ ಹವಾಮಾನ ಇಲಾಖೆ ಹೊರಡಿಸಿದ ಮುಂಗಾರು ಮುನ್ಸೂಚನೆಯನ್ವಯ ರಾಜ್ಯದಲ್ಲಿ ಪ್ರಸ್ತುತ ಮುಂಗಾರಿನಲ್ಲಿ ವಾಡಿಕೆ ಮಳೆಯಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದೆ.
ಈ ವರ್ಷ ಮುಂಗಾರು ಮುನ್ಸೂಚನೆಯ ಪ್ರಕಾರ ವಾಡಿಕೆ ಮಳೆ ಸಾಧ್ಯತೆ ಇದ್ದರೂ ಕೆಲವು ಪುದೇಶಗಳಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುತ್ತದೆ. ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳ ಉಂಟಾದಲ್ಲಿ ಸಂಭವಿಸಬಹುದಾದ ದುಷ್ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಹಾಗೂ ಹಾನಿಯನ್ನು ತಗ್ಗಿಸಲು ಮುಂಗಾರು ಪೂರ್ವದಲ್ಲಿ ಪೂರ್ವ ಸಿದ್ಧತೆ ಕ್ರಮಗಳನ್ನು ಕೈಗೊಳ್ಳಬೇಕಾಗಿರುತ್ತದೆ ಎಂದು ಪತ್ರದಲ್ಲಿ ವಿವರಣೆ ನೀಡಲಾಗಿದೆ.

ಈ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ, ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಹಂತದ ಅಧಿಕಾರಿಗಳೊಂದಿಗೆ ಪೂರ್ವ ಸಿದ್ಧತೆ ಸಭೆಗಳನ್ನು ಏರ್ಪಡಿಸಿ ಈ ಕೆಳಕಂಡಂತೆ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸಿ ಹಾಗೂ ಸಿದ್ಧತೆಗಳ ಬಗ್ಗೆ ಸೂಚನೆಗಳನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ತಿಳಿಸಲಾಗಿದೆ.
ಕರ್ತವ್ಯ/ ಜವಾಬ್ದಾರಿಗಳು; ಜಿಲ್ಲೆಯಲ್ಲಿ ವಿಪತ್ತುಗಳಿಗೆ ತುತ್ತಾಗುವಂತಹ ಪ್ರದೇಶಗಳನ್ನು ಗುರುತಿಸಿ ಸ್ಥಳೀಯ ಸಮುದಾಯಕ್ಕೆ ಅರಿವು ಮೂಡಿಸುವುದು. ಈ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಲೋಕೋಪಯೋಗಿ ಇಲಾಖೆ, ಗಾಮೀಣಾಅಭಿವೃದ್ಧಿ ಮತ್ತು ಪಂಚಾಯತ ರಾಜ ಇಲಾಖೆ, ಜಲಸಂಪನ್ಮೂಲ ಇಲಾಖೆ, ಜಿಲ್ಲಾಧಿಕಾರಿ ಮತ್ತು ಅಧ್ಯಕ್ಷರು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮೌಲ್ಯಮಾಪನದ ಮೇಲ್ವಿಚಾರಣೆ ಮತ್ತು ಪರಾಮರ್ಶೆ ನಡೆಸಬೇಕು ಎಂದು ಹೇಳಿದೆ.
ಜಿಲ್ಲೆಯಲ್ಲಿ ವಿಪತ್ತು ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಈಜುಗಾರರು, ಹಾವು ಹಿಡಿಯುವವರು ಮತ್ತು ನಾಗರೀಕ ಸ್ವಯಂ ಸೇವಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯನ್ನು ಪಡೆಯುವುದು. ಅವಶ್ಯವಿದ್ದಾಗ ಅವರ ಸೇವೆಯನ್ನು ಪಡೆಯುವುದು. ಅವಶ್ಯವಾದಲ್ಲಿ SDRF/NDRF ತಂಡಗಳನ್ನು ಪೂರ್ವಭಾವಿಯಾಗಿ ವಿಪತ್ತುಗಳಿಗೆ ತುತ್ತಾಗುವಂತಹ ಪ್ರದೇಶಗಳಿಗೆ ನಿಯೋಜಿಸುವುದು ಎಂದು ಸೂಚನೆ ನೀಡಲಾಗಿದೆ.
ಪರಿಹಾರ, ಪುನರ್ವಸತಿ; ಜಿಲ್ಲಾಧಿಕಾರಿ ಮತ್ತು ಅಧ್ಯಕ್ಷರು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಎಲ್ಲಾ ಇಲಾಖೆಗಳಿಗೆ ಮಳೆ ಸಂದರ್ಭದಲ್ಲಿ ಪರಿಹಾರ ಮತ್ತು ಪುನರ್ವಸತಿ ಬಗ್ಗೆ ಸೂಚನೆಗಳನ್ನು ನೀಡಿವೆ.
ಆಗಾಗ್ಗೆ ವಿಪತ್ತುಗಳಿಗೆ ತುತ್ತಾಗುವಂತಹ ಹಳ್ಳಿಗಳಲ್ಲಿನ ಜನಸಂಖ್ಯೆಯನುಸಾರ ಎಲ್ಲಾ ಸೌಲಭ್ಯಗಳು (ನೀರು, ಶೌಚಾಲಯ) ಹೊಂದಿರುವ ಆಶ್ರಯ ತಾಣ/ ಕಾಳಜಿ ಕೇಂದ್ರಗಳನ್ನು ಗುರುತಿಸುವುದು, ಸ್ಥಳೀಯವಾಗಿ ಲಭ್ಯವಿಲ್ಲದಲ್ಲಿ ಹತ್ತಿರದ ಊರುಗಳಲ್ಲಿ ಗುರುತಿಸಬೇಕು ಎಂದು ಸೂಚಿಸಲಾಗಿದೆ. ಸ್ಥಳಾಂತರ ಮಾಡಬೇಕಾದ ಅವಶ್ಯಕತೆ ಇದ್ದಲ್ಲಿ ಪರ್ಯಾಯ ಮಾರ್ಗ ಗುರುತಿಸಿ ಸಾರಿಗೆ ವ್ಯವಸ್ಥೆಯನ್ನು ಸಜ್ಜುಗೊಳಿಸುವುದು. ಕಾಳಜಿ ಕೇಂದ್ರಗಳಲ್ಲಿ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿರುವಂತೆ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟವನ್ನು ನೀಡುವುದು. SDRF ಮಾರ್ಗಸೂಚಿಯನ್ವಯ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡುವುದು. ಪುನರ್ವಸತಿ ಕೇಂದ್ರ ಅಥವಾ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುವ ಸಂತ್ರಸ್ತರ ದತ್ತಾಂಶ ಪಡೆಯುವುದು. ಅಗತ್ಯ ಆಹಾರ ದಿನಸಿಗಳಾದ ಬೇಳೆಕಾಳು, ಎಣ್ಣೆ, ಅಕ್ಕಿ ಇತ್ಯಾದಿಗಳನ್ನು ಡಿಪೋಗಳಲ್ಲಿ ಸಮರ್ಪಕವಾಗಿ ದಾಸ್ತಾನು ಮಾಡುವಂತೆ ಕ್ರಮ ವಹಿಸಬೇಕು ಎಂದು ತಿಳಿಸಲಾಗಿದೆ.












Click it and Unblock the Notifications