ಕರಾವಳಿ, ಮಲೆನಾಡಿನಲ್ಲಿ ಇನ್ನಷ್ಟು ಜೋರಾಗಲಿದೆ ಮಳೆ
ಬೆಂಗಳೂರು, ಜೂನ್ 8: ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಸೇರಿದಂತೆ ಬಹುತೇಕ ಕಡೆ ಮುಂಗಾರಿನ ವರ್ಷಧಾರೆ ಮೈನಡುಗಿಸುವ ಚಳಿಯ ಜತೆಗೆ ಭೂಮಿಯನ್ನು ಹದಗೊಳಿಸುತ್ತಿದೆ.
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಇನ್ನಷ್ಟು ಜೋರಾಗುವ ಸಾಧ್ಯತೆ ಇದೆ. ಕರಾವಳಿಯ ಸಂಪೂರ್ಣ ಭಾಗವನ್ನು ಮುಂಗಾರು ಆವರಿಸಿಕೊಂಡಿದ್ದು, ದಕ್ಷಿಣ ಒಳನಾಡಿನ ಬಹುತೇಕ ಭಾಗಗಳು ಮತ್ತು ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಚುರುಕಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆ? (ಸೆಂ.ಮೀಗಳಲ್ಲಿ)
ಮಂಕಿ, ಕಾರವಾರ, ಹಿಡ್ಕಲ್ ಜಲಾಶಯ, ಹುಮ್ನಾಬಾದ್, ಚಿಂಚೋಳಿಗಳಲ್ಲಿ ತಲಾ 7. ಹೊನ್ನಾವರ, ಹುಕ್ಕೇರಿ, ಔರಾದ್ 6.
ಶಿರಾಲಿ, ವಿಜಯಪುರ, ಖಜೂರಿ, ಸೇಡಂ, ಕಮಲಾಪುರ 5. ಸಿದ್ದಾಪುರ, ಬೀದರ್ ಪಿಟಿಒ, ಬೀದರ್ 4.

ಕೊಲ್ಲೂರು, ಕುಂದಾಪುರ, ಬಾಗಲಕೋಟೆ, ಕಲಬುರಗಿ, ನೆಲೋಗಿ, ಕಮ್ಮರಡಿ 3. ಮಂಗಳೂರು, ಸಂಕೇಶ್ವರ, ಲೋಕಾಪುರ, ಆಳಂದ, ಸೈದಾಪುರ, ಭಾಗಮಂಡಲ, ಆಗುಂಬೆ, ಕೊಟ್ಟಿಗೆಹಾರ 2. ಪಣಂಬೂರು, ಮಂಗಳೂರು ಎಪಿ, ಪುತ್ತೂರು, ಕೋಟಾ, ಗೇರುಸೊಪ್ಪೆ, ನಿಪ್ಪಾಣಿ, ಅಥಣಿ, ಕುಂದರಗಿ, ಚಿತ್ತಾಪುರ, ಕೆಂಭಾವಿ, ಮಸ್ಕಿ, ಮಡಿಕೇರಿ, ತಾಳಗುಪ್ಪ, ಶ್ರೀರಂಗಪಟ್ಟಣ 1.
ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶುಕ್ರವಾರ ಹಾಗೂ ಶನಿವಾರ ವಿಪರೀತ ಮಳೆ ಆರ್ಭಟ ಇರಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಭಾರಿ ಮಳೆಯಾಗಲಿದೆ.

ಉಳಿದ ಜಿಲ್ಲೆಗಳಲ್ಲಿ ಗುಡುಗು ಗಾಳಿ ಸಹಿತ ಮಳೆ ಬೀಳುವ ಸಂಭವವಿದೆ. ಮುಂದಿನ 24 ಗಂಟೆಗಳಲ್ಲಿ ಕರಾವಳಿ, ಉತ್ತರ ಒಳನಾಡು ಹೆಚ್ಚಿನ ಪ್ರದೇಶಗಳು ಮತ್ತು ದಕ್ಷಿಣ ಒಳನಾಡಿನ ಅನೇಕ ಸ್ಥಳಗಳಲ್ಲಿ ಬಿರುಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ರಸ್ತೆಗಳು ಜಲಾವೃತವಾಗಿದ್ದು, ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಥಂಡಿ ವಾತಾವರಣದಿಂದ ಜನರು ಮನೆಯ ಹೊರಗೆ ಬರುವುದು ಕೂಡ ಕಷ್ಟವಾಗಿದೆ.
ಅನೇಕ ಕಡೆ ಬೃಹತ್ ಮರಗಳು ಧರೆಗುರುಳಿವೆ. ಇದರಿಂದ ಕೆಲವಡೆ ರಸ್ತೆಗಳು ಬಂದ್ ಆಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.












Click it and Unblock the Notifications