ಸಂಪುಟ ವಿಸ್ತರಣೆಯೋ?, ಪುನಾರಚನೆಯೋ? ರಾಹುಲ್ ಅತ್ತ ಎಲ್ಲರ ಚಿತ್ತ!
Recommended Video
ಬೆಂಗಳೂರು, ಡಿಸೆಂಬರ್ 21 : ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟ ವಿಸ್ತರಣೆಯಾಗಲಿದೆಯೋ?, ಪುನಾರಚನೆ ಆಗಲಿದೆಯೋ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ನಾಯಕರು ಈಗಾಗಲೇ ದೆಹಲಿ ತಲುಪಿದ್ದಾರೆ. ಶುಕ್ರವಾರ ಸಂಜೆ 5 ಗಂಟೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯ ನಾಯಕರ ಜೊತೆ ಮಹತ್ವದ ಸಭೆಯನ್ನು ನಡೆಸಲಿದ್ದಾರೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸಹ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂಪುಟ ವಿಸ್ತರಣೆ : ಒನ್ ಇಂಡಿಯಾ ಸಮೀಕ್ಷೆಯಲ್ಲಿ ಓದುಗರು ಹೇಳಿದ್ದೇನು?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೆಹಲಿ ತಲುಪಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಲ್ಲಿಯೇ ಇದ್ದಾರೆ.
ರಮೇಶ್ ಜಾರಕಿಹೊಳಿ ಸಂಪುಟದಿಂದ ಹೊರಕ್ಕೆ?, 5 ಕಾರಣಗಳು
ಡಿಸೆಂಬರ್ 22ರ ಶನಿವಾರ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿ ಮಾಡಲಾಗಿದೆ. ಆದರೆ, ಸಂಪುಟ ಪುನಾರಚನೆ ಆಗಬೇಕು ಎಂದು ಕೆಲವು ಶಾಸಕರು ಪಟ್ಟು ಹಿಡಿದಿದ್ದಾರೆ. ಆದ್ದರಿಂದ, ರಾಹುಲ್ ಗಾಂಧಿ ಅವರು ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ.
'ಕೈ' ನಾಯಕರ ಅತೃಪ್ತಿ ಮೈತ್ರಿ ಸರ್ಕಾರದ ಮೇಲೆ ಪರಿಣಾಮ ಬೀರುತ್ತಾ?
ರಾಹುಲ್ ಗಾಂಧಿ ಜೊತೆ ಸಭೆ
ಶಿಮ್ಲಾದಲ್ಲಿದ್ದ ರಾಹುಲ್ ಗಾಂಧಿ ಗುರುವಾರ ತಡರಾತ್ರಿ ದೆಹಲಿಗೆ ಆಗಮಿಸಿದ್ದಾರೆ. ಮಧ್ಯಪ್ರದೇಶ, ರಾಜಸ್ಥಾನ ನಾಯಕರ ಜೊತೆ ಅವರು ಬೆಳಗ್ಗೆ ಸಭೆ ನಡೆಸಲಿದ್ದು, ಸಂಜೆ 5 ಗಂಟೆಗೆ ಕರ್ನಾಟಕದ ನಾಯಕರ ಜೊತೆ ಸಭೆ ನಿಗದಿಯಾಗಿದೆ. ರಾಹುಲ್ ಗಾಂಧಿ ಭೇಟಿಗೂ ಮೊದಲು ರಾಜ್ಯ ನಾಯಕರು ಕೆ.ಸಿ.ವೇಣುಗೋಪಾಲ್ ಜೊತೆ ಸಭೆ ನಡೆಸಲಿದ್ದಾರೆ.
ಜೆಡಿಎಸ್ನಿಂದ ಒಪ್ಪಿಗೆ
ಕಾಂಗ್ರೆಸ್ ಸಂಪುಟ ಪುನಾರಚನೆಗೆ ಒಪ್ಪಿಗೆ ನೀಡಿದರೆ ಯಾವುದೇ ತರಕಾರು ಮಾಡದಿರಲು ಜೆಡಿಎಸ್ ನಿರ್ಧರಿಸಿದೆ. ಜೆಡಿಎಸ್ಗೆ 2 ಸಚಿವ ಸ್ಥಾನಗಳು ಸಿಗಲಿದ್ದು, ಇವುಗಳನ್ನು ಒಂದನ್ನು ಭರ್ತಿ ಮಾಡಲು ಪಕ್ಷದ ನಾಯಕರು ತೀರ್ಮಾನಿಸಿದ್ದಾರೆ. ಸಂಪುಟ ಪುನಾರಚನೆಗೆ ಜೆಡಿಎಸ್ನ ಸಂಪೂರ್ಣ ಒಪ್ಪಿಗೆ ಇದೆ.
ನಾಲ್ವರನ್ನು ಕೈ ಬಿಡಲಾಗುತ್ತದೆ
ಸಚಿವ ಸಂಪುಟ ಪುನಾರಚನೆಗೆ ಕೆಲವು ನಾಯಕರು ಒತ್ತಾಯ ಮಾಡುತ್ತಿದ್ದಾರೆ. ಸಂಪುಟದಿಂದ 4 ಸಚಿವರನ್ನು ಕೈಬಿಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಆದರೆ, ಸರ್ಕಾರ ರಚನೆಯಾಗಿ 6 ತಿಂಗಳು ಮಾತ್ರ ಕಳೆದಿದೆ. ಈಗ ಪುನಾರಚನೆಗೆ ರಾಹುಲ್ ಗಾಂಧಿ ಒಪ್ಪಿಗೆ ನೀಡಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.
ಸಂಪುಟ ಸೇರುವವರು ಯಾರು?
ಕಾಂಗ್ರೆಸ್ಗೆ 6 ಸಚಿವ ಸ್ಥಾನಗಳು ಸಿಗಲಿವೆ. ಇವುಗಳಲ್ಲಿ 4 ಸ್ಥಾನಗಳನ್ನು ಮಾತ್ರ ಭರ್ತಿ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಯಾರು ಸಂಪುಟ ಸೇರಲಿದ್ದಾರೆ? ಎಂಬುದು ಇನ್ನೂ ನಿಗೂಢವಾಗಿದೆ.