"ಕಳೆದ 4-5 ವರ್ಷಗಳಿಂದ ದೇಶದಲ್ಲಿ ಅತಿ ಹೆಚ್ಚು ಅಪಹಾಸ್ಯಕ್ಕೆ ಒಳಗಾದ ವ್ಯಕ್ತಿ ರಾಹುಲ್ ಗಾಂಧಿ"
ಬೆಂಗಳೂರು, ಸೆಪ್ಟೆಂಬರ್ 18: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸಾಮಾನ್ಯ ಜ್ಞಾನ ಇಲ್ಲದ ವ್ಯಕ್ತಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆರೋಪಿಸಿದ್ದಾರೆ. 2023ರಲ್ಲಿ ಆಳಂದ ವಿಧಾನಸಭಾ ಚುನಾವಣೆಯಲ್ಲಿ 6 ಸಾವಿರಕ್ಕೂ ಹೆಚ್ಚು ಮತದಾರರ ಹೆಸರನ್ನು ತೆಗೆದುಹಾಕುವ ಪ್ರಯತ್ನ ನಡೆದಿತ್ತು ಎಂಬ ರಾಹುಲ್ ಗಾಂಧಿ ಅವರ ಆರೋಪ ಕುರಿತು ಪ್ರಶ್ನೆಗೆ ಅವರು ಉತ್ತರ ನೀಡಿದರು. ರಾಹುಲ್ ಅವರು ಯಾರೋ ಬರೆದುಕೊಟ್ಟಿದ್ದನ್ನು ಪದೇಪದೇ ಹೇಳಿ ಕಳೆದ 4-5 ವರ್ಷಗಳಿಂದ ದೇಶದಲ್ಲಿ ಅತಿ ಹೆಚ್ಚು ಅಪಹಾಸ್ಯಕ್ಕೆ ಒಳಗಾದ ವ್ಯಕ್ತಿ ಎಂದು ತಿಳಿಸಿದರು.
ಮೊನ್ನೆ ಬಂದು ಬಾಂಬ್ ಹಾಕುವೆ, ಮಹದೇವನನ್ನು ಸೃಷ್ಟಿಸುವೆ ಎಂದು ಹೋಗಿದ್ದರು. ಮಹದೇವಪುರದ ಕುರಿತು ಆರೋಪ ಬೋಗಸ್ ಎಂದು ಗೊತ್ತಾಗಿತ್ತು. ಒಂದೇ ಮನೆಯಲ್ಲಿ ನೂರಾರು ಮತ ಎಂದಿದ್ದರು. ಅಲ್ಲಿದ್ದುದು 4 ಮತ, ಅಷ್ಟೇ ಮತ ಚಲಾವಣೆ ಆದುದು ಸಾಬೀತಾಗಿತ್ತು. ಈಗ ಮತ್ತೆ ಆಳಂದವನ್ನು ಹಿಡಿದುಕೊಂಡಿದ್ದಾರೆ ಎಂದು ಟೀಕಿಸಿದರು.

ಆಳಂದ ಬಹಳ ದೂರ ಇದೆ. ಬೆಂಗಳೂರು ಪಕ್ಕದ ಮಾಲೂರಿನಲ್ಲಿ ಮತಗಳ್ಳತನ ಎಂದು ಕೋರ್ಟ್ ಆದೇಶ ಮಾಡಿದೆ. ಅಲ್ಲಿನ ಜಿಲ್ಲಾಧಿಕಾರಿ, ಕೋರ್ಟ್ ಆದೇಶವಿದ್ದರೂ ಸಿಸಿ ಟಿವಿ ಮಾಹಿತಿಯನ್ನು ಕೇಳಿದ್ದರೂ ಕೊಟ್ಟಿಲ್ಲ. ಅಲ್ಲಿ ಗೆದ್ದ ಕಾಂಗ್ರೆಸ್ ಶಾಸಕರ ಸದಸ್ಯತ್ವ ವಜಾ ಆಗಿದೆ. ಇದಕ್ಕಿಂತ ಸಾಕ್ಷಿ ಬೇಕೇ ಎಂದು ಕೇಳಿದರು. ಅಫಿಡವಿಟ್ ಕೊಡಿ ಎಂದು ರಾಹುಲ್ ಗಾಂಧಿಯವರಿಗೆ ಚುನಾವಣಾ ಆಯೋಗ ಕೇಳಿದ್ದರೂ ಕೊಟ್ಟಿಲ್ಲ; ಮಾಲೂರಿನಲ್ಲಿ ನಮ್ಮ ಅಭ್ಯರ್ಥಿ ಅಫಿಡವಿಟ್ ಕೊಟ್ಟು, ತನಿಖೆಗೆ ಹೈಕೋರ್ಟಿಗೆ ವಿನಂತಿಸಿದ್ದರು. ಹೈಕೋರ್ಟ್, ಡಿ.ಸಿ. ತಪ್ಪು ಮಾಡಿದ್ದಾಗಿ ತಿಳಿಸಿ ಕ್ರಮ ಕೈಗೊಳ್ಳಲು ಆದೇಶ ಮಾಡಿದೆ. ರಾಹುಲ್ ಗಾಂಧಿಯವರಿಗೆ ಇದರ ಜ್ಞಾನ ಇಲ್ಲವೇ ಎಂದು ಪ್ರಶ್ನಿಸಿದರು.
ಮತಗಳ್ಳತನ ಕುರಿತ ಹೊಸ ನಾಟಕ: ಎಸ್.ಆರ್.ವಿಶ್ವನಾಥ್
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮತಗಳ್ಳತನ ಕುರಿತ ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಅವರು ಆಕ್ಷೇಪಿಸಿದ್ದಾರೆ. ಪಶ್ಚಿಮ ಬಂಗಾಲದವರು ಇಂಡಿ ಕೂಟದ ಸದಸ್ಯರು. ಅಲ್ಲಿ ರಾಹುಲ್ ಗಾಂಧಿಯವರು ಮತಗಳ್ಳತನ ಕುರಿತು ಆರೋಪಿಸಿಲ್ಲ; ಜಮ್ಮು- ಕಾಶ್ಮೀರದಲ್ಲೂ ಇಂಥ ಆಪಾದನೆ ಮಾಡಿಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದ್ದು, ಅಲ್ಲಿಯೂ ಮತಗಳ್ಳತನ ಕುರಿತು ಆರೋಪ ಮಾಡಿಲ್ಲ; ಬಿಹಾರ ಚುನಾವಣೆಯ ದಿಕ್ಕು ತಪ್ಪಿಸುವ ಕೆಲಸ ಮಾಡಿ ವಿಫಲವಾಗುತ್ತಾರೆ. ಇದೀಗ ಒಂಥರ ಬಾಲಿಶವಾದ ಹೇಳಿಕೆ ಕೊಡುತ್ತಿದ್ದಾರೆ ಎಂದು ತಿಳಿಸಿದರು.
60 ವರ್ಷ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ಸಿನವರು ಏನೇನು ಮಾಡಿದ್ದರು ಎಂಬುದು ನಮಗೂ ಗೊತ್ತಿದೆ. ಮತಪೆಟ್ಟಿಗೆಗಳನ್ನೇ ನೀವು ಅಪಹರಣ ಮಾಡುತ್ತ ಇದ್ದುದು ಗೊತ್ತಿದೆ. ಮತಗಟ್ಟೆಗೆ ನುಗ್ಗಿ ಅಕ್ರಮ ಮತದಾನ ಮಾಡಿದ್ದುದು ಹಿಂದಿನ ಪತ್ರಿಕೆಗಳನ್ನು ನೋಡಿದಾಗ ಗೊತ್ತಾಗುತ್ತದೆ. ಕರ್ನಾಟಕದಲ್ಲಿ ಅವರದೇ ಸರಕಾರದ ಸಚಿವರು ನಮ್ಮ ಸರಕಾರ ಇದ್ದಾಗಲೇ ಆಗಿದೆ; ನಾವು ಸರಿ ಮಾಡಿಕೊಳ್ಳಬೇಕಿತ್ತು. ನಮ್ಮ ಸರಕಾರ ಇದ್ದಾಗ ಇದು ಹೇಗೆ ಸಾಧ್ಯ ಎಂದಿದ್ದು, ಅವರ ತಲೆದಂಡ ಕೂಡ ಆಗಿತ್ತು ಎಂದು ಹೇಳಿದರು.
ಈಗ ಮತ್ತೊಬ್ಬ ಹಿರಿಯರು, ಆಳಂದದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲರು, ರಾಹುಲ್ ಗಾಂಧಿ ಅವರ ಜೊತೆ ಹೋಗಿ, ತಮ್ಮ ಕ್ಷೇತ್ರದಲ್ಲೂ ಅಕ್ರಮವಾಗಿ ಕಾಂಗ್ರೆಸ್ ಮತದಾರರ ಹೆಸರು ರದ್ದು ಮಾಡಲು ಮುಂದಾದ ಆರೋಪ ಮಾಡಿದ್ದಾರೆ. ಅವರು ಹಿಂದೆ ಬಿಜೆಪಿಯಲ್ಲಿದ್ದವರು, ಬಿಜೆಪಿಯಲ್ಲಿ ಇದ್ದಾಗ ಇದು ಗಮನಕ್ಕೆ ಬಂದಿಲ್ಲವೇ? ಕಾಂಗ್ರೆಸ್ಸಿಗೆ ಹೋದಾಗ ಮಾತ್ರ ಇದು ಗಮನಕ್ಕೆ ಬಂತೇ ಎಂದು ಎಸ್ ಆರ್ ವಿಶ್ವನಾಥ್ ಅವರು ಕೇಳಿದರು.












Click it and Unblock the Notifications