ಮಾರ್ಚ್ 18ಕ್ಕೆ ರಾಜ್ಯಕ್ಕೆ ಬರುತ್ತಿದ್ದಾರೆ ರಾಹುಲ್ ಗಾಂಧಿ, ಏನೇನು ಕಾರ್ಯಕ್ರಮ?
ಬೆಂಗಳೂರು, ಮಾರ್ಚ್ 16: ಇದೇ ತಿಂಗಳ ಮಾರ್ಚ್ 18ರ ಸೋಮವಾರದಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕರ್ನಾಟಕಕ್ಕೆ ಬರುತ್ತಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದೆ.
ಮಾರ್ಚ್ 18ಕ್ಕೆ ಬೆಳಿಗ್ಗೆ 11 ಗಂಟೆಗೆ ಕಲಬುರಗಿಗೆ ಆಗಮಿಸಲಿರುವ ರಾಹುಲ್ ಗಾಂಧಿ ಅವರು, ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಕೆಲವು ದಿನಗಳ ಹಿಂದಷ್ಟೆ (ಮಾರ್ಚ್ 07) ಇದೇ ನಗರದಲ್ಲಿ ಮೋದಿ ಅವರು ಬೃಹತ್ ಸಮಾವೇಶ ನಡೆಸಿದ್ದರು.
ಕಲಬುರಗಿಯಿಂದ ಬೆಂಗಳೂರಿಗೆ ಆಗಮಿಸುವ ರಾಹುಲ್ಗಾಂಧಿ ಸಂಜೆ 5 ಗಂಟೆಗೆ ಮಾನ್ಯತಾ ಟೆಕ್ಪಾರ್ಕ್ ಎಂಪೈರ್ ಸಭಾಂಗಣದಲ್ಲಿ ಸಾಫ್ಟವೇರ್ ಇಂಜಿನಿಯರ್ಗಳ ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರ ಜೊತೆ ಸಂವಾದ ನಡೆಸಲಿದ್ದಾರೆ.

ವಿದ್ಯಾವಂತ ಮತದಾರರನ್ನು ಸೆಳೆಯುವ ಗುರಿಯಿಂದಾಗಿ ಈ ಸಂವಾದ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ವಿಶ್ವದ ಸಾಫ್ಟ್ವೇರ್ ಹಬ್ ಆಗಿರುವ ಕಾರಣ ಇಲ್ಲಿನ ಎಂಜಿನಿಯರ್ಗಳೊಂದಿಗೆ ಸಂವಾದ ನಡೆಸಲಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇತ್ತೀಚೆಗಷ್ಟೆ ರಾಹುಲ್ ಗಾಂಧಿ ಅವರು ತಮಿಳುನಾಡಿನ ಸ್ಟೆಲ್ಲಾ ಮೇರಿಸ್ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಜೊತೆ ಸಂವಾದ ನಡೆಸಿದ್ದರು, ನಂತರ ಚತ್ತೀಸ್ಘಡದ ರಾಯ್ಪುರದಲ್ಲಿ ಆರೋಗ್ಯ ತಜ್ಞರು, ಆಶಾ ಕಾರ್ಯಕರ್ತೆಯರ ಜೊತೆ ಸಂವಾದ ನಡೆಸಿದ್ದರು.
ದೇಶದಾದ್ಯಂತ ಸತತ ಪರ್ಯಟನೆ ಮಾಡುತ್ತಿರುವ ಅವರು, ಸಂವಾದಗಳು, ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಗುರಿ, ಧ್ಯೇಯ, ಉದ್ದೇಶ, ಈ ಚುನಾವಣೆ ಗೆದ್ದರೆ ಮಾಡಲಿರುವ ಕಾರ್ಯಗಳ ಬಗ್ಗೆ ಹೇಳುವ ಜೊತೆಗೆ, ಬಿಜೆಪಿ ಹಾಗೂ ಮೋದಿ ವಿರುದ್ಧ ವಾಗ್ದಾಳಿಯನ್ನು ಮಾಡುತ್ತಾ ಸಾಗಿದ್ದಾರೆ.












Click it and Unblock the Notifications