ಪ್ರಶ್ನೆ ಹುಟ್ಟಿದಾಗ ಬದುಕು ಆರಂಭವಾಗುವುದು: ರಾಘವೇಶ್ವರ ಶ್ರೀ
ಬೆಂಗಳೂರು, ಆಗಸ್ಟ್ 13: ಬದುಕಿನಲ್ಲಿ ಪ್ರಶ್ನೆಗಳು ಏಳಬೇಕು. ಪ್ರಶ್ನೆ ಹುಟ್ಟದಿದ್ದರೆ ಬೆಳವಣಿಗೆ ಅಸಾಧ್ಯ ಶಿಷ್ಯನೆಂದರೆ ಪ್ರಶ್ನೆ, ಗುರುವೆಂದರೆ ಉತ್ತರ ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ಪ್ರಶ್ನೆ ಮತ್ತು ಉತ್ತರಗಳೇ ಗುರು - ಶಿಷ್ಯರ ಸಂಬಂಧದ ಸಾರ. ನಮ್ಮ ಇತಿಹಾಸ, ಪುರಾಣ, ಉಪನಿಷತ್ತುಗಳು ಪ್ರಶ್ನೆ, ಉತ್ತರಗಳ ಮೇಲೆ ನಿಂತಿದೆ ಎಂದು ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ. (ಧರ್ಮಯುದ್ದದಲ್ಲಿ ಮಡಿದರೆ ಸ್ವರ್ಗ)
ನಗರದ ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ಛಾತ್ರ ಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಗುರುವಾರ (ಆ13) ಆಶೀರ್ವಚನ ನೀಡುತ್ತಾ ಶ್ರೀಗಳು, ಪ್ರಶ್ನೆ ಹುಟ್ಟಿದಾಗ ನಿಜವಾದ ಬದುಕು ಆರಂಭವಾಗುತ್ತದೆ.
ಎಲ್ಲರಲ್ಲಿ ಅವನು ಯಾಕೆ ಹೀಗೆ, ಅದು ಯಾಕೆ ಹಾಗೆ? ಎನ್ನುವ ಪ್ರಶ್ನೆಗಳು ಮಾತ್ರ ಹುಟ್ಟುತ್ತವೆ. ನಾನೇಕೆ ಹೀಗೆ? ಎನ್ನುವ ಪ್ರಶ್ನೆ ಹುಟ್ಟುವುದು ಕಡಿಮೆ ಎಂದಿದ್ದಾರೆ.
ನಾವು ಎಲ್ಲರ, ಎಲ್ಲದರ ಪರಿಚಯ ಮಾಡಿಕೊಳ್ಳುತ್ತೇವೆ. ಆದರೆ ನಮ್ಮ ಪರಿಚಯ ನಾವು ಮಾಡಿಕೊಳ್ಳುವುದಿಲ್ಲ. ಇದೇ ನಮ್ಮ ಬದುಕಿನ ಸಮಸ್ಯೆ. ನಾನೇಕೆ ಹೀಗೆ ಎಂದರೆ ನಾವು ಮಾಯೆಯ ಕೈಯಲ್ಲಿದ್ದೇವೆ.
ನಾವು ಈಶ್ವರನ ಕೈಗೆ ಹೋದರೆ ನಾವು ಹೀಗಿರುವುದಿಲ್ಲ. ಮಾಯೆ ನಾನೇಕೆ ಹೀಗೆ ಎಂಬ ಪ್ರಶ್ನೆಯನ್ನು ಹುಟ್ಟಿಸದಂತೆ ಮಾಡುತ್ತದೆ. ನಾವು ಏನು ಕಾಣುತ್ತೇವೋ, ಅದೇ ಚಂದ ಎಂದು ನಂಬಿಸುತ್ತದೆ.
ನಾವು ಯಾರೆಂದು ಅರಿತುಕೊಳ್ಳಲು ಈ ಮಾಯೆಯನ್ನು ಮೀರಬೇಕು ಎಂದರು ರಾಘವೇಶ್ವರ ಭಾರತೀ ಸ್ವಾಮೀಜಿಗಳು ಧರ್ಮಸಭೆಯಲ್ಲಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಭಾರತೀ ಪ್ರಕಾಶನದ ವತಿಯಿಂದ ಪ್ರಕಟವಾದ 'ಪೂರ್ಣ' ಆಟಿಕೆಯ ಲೋಕಾರ್ಪಣ ನಡೆಯಿತು. ಸಿದ್ಧಾಪುರ ಮಂಡಲದ ಬಿದರಕಾನ, ಚಪ್ಪರಮನೆ, ದೊಡ್ಮನೆ ವಲಯದವರಿಂದ ಸರ್ವಸೇವೆ ನಡೆಯಿತು.
ಪ್ರಕಾಶನದ ಕಾರ್ಯದರ್ಶಿ ವಿದ್ವಾನ್ ಜಗದೀಶ ಶರ್ಮಾ ಆಟಿಕೆಯನ್ನು ಪರಿಚಯಿಸಿದರು. ರಾಷ್ಟ್ರ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪೃಥ್ವಿ ಎನ್.ಎಸ್ ಇವರಿಗೆ ಛಾತ್ರ ಪುರಸ್ಕಾರ ನೀಡಲಾಯಿತು.
ಛಾತ್ರ ಚಾತುರ್ಮಾಸ್ಯ ಸಮಿತಿಯ ಯು ಎಸ್ ಜಿ ಭಟ್, ಸಾಹಿತಿ ಗಜಾನನ ಶರ್ಮಾ, ಶಿಷ್ಯಭಾವ ಕಾರ್ಯದರ್ಶಿ ಆರ್ ಎಸ್ ಹೆಗಡೆ, ಹರಗಿ ಸೇವಾ ಪ್ರಧಾನ ಮಹೇಶ ಚಟ್ನಳ್ಳಿ, ಕೋಶಾಧ್ಯಕ್ಷ ಜೆಡ್ಡು ರಾಮಚಂದ್ರ ಭಟ್, ಬಿದರಕಾನ ವಲಯದ ಅಧ್ಯಕ್ಷ ಪರಮೇಶ್ವರ ಸುಬ್ರಾಯ ಹೆಗಡೆ, ಚಪ್ಪರಮನೆ ವಲಯದ ಅಧ್ಯಕ್ಷ ಗೋಪಾಲ ಗಣಪತಿ ಹೆಗಡೆ, ದೊಡ್ಮನೆ ವಲಯದ ಅಧ್ಯಕ್ಷ ಎಂ.ಆರ್ ಹೆಗಡೆ ಉಪಸ್ಥಿತರಿದ್ದರು. ಕುಮಾರಿ ಮೇಧಾ ಭಟ್ ನಿರೂಪಿಸಿದರು.