ಗೊಂದಲದ ಗೂಡಾದ ಬಳ್ಳಾರಿ ಅಪಘಾತ; ಅಶೋಕ ಪುತ್ರ ಶರತ್ ಪ್ರತ್ಯಕ್ಷ
Recommended Video
ಬೆಂಗಳೂರು, ಫೆಬ್ರವರಿ 16 : ಮರಿಯಮ್ಮನಹಳ್ಳಿಯಲ್ಲಿ ನಡೆದ ಅಪಘಾತ ಪ್ರಕರಣದ ಇನ್ನೂ ಗೊಂದಲದ ಗೂಡಾಗಿಯೇ ಇದೆ. ಕಾರಿನಲ್ಲಿ ಇದ್ದವರು ಯಾರು? ಎಂಬ ಬಗ್ಗೆ ಕಳೆದ ನಾಲ್ಕು ದಿನದಿಂದ ಬಿಸಿ-ಬಿಸಿ ಚರ್ಚೆ ನಡೆಯುತ್ತಿದೆ. ಆದರೆ, ಸ್ಪಷ್ಟ ಉತ್ತರ ಇನ್ನೂ ಸಿಕ್ಕಿಲ್ಲ.
ಕರ್ನಾಟಕ ಮತ್ತು ರಾಷ್ಟ್ರೀಯ ಮಾಧ್ಯಮಗಳ ಸುದ್ದಿಯ ಕೇಂದ್ರ ಬಿಂದುವಾಗಿದ್ದ ಕಂದಾಯ ಸಚಿವ ಆರ್. ಅಶೋಕ ಪುತ್ರ ಶರತ್ ಬೆಂಗಳೂರಿನಲ್ಲಿ ಶನಿವಾರ ಸಂಜೆ ಪ್ರತ್ಯಕ್ಷವಾಗಿದ್ದಾರೆ. ಶರತ್ ಎಲ್ಲಿ ಎಂದು ಕೇಳುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಎಂಬಾತನನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಕಾರು ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದರು.
ಅಪಘಾತ ಪ್ರಕರಣದ ಬಗ್ಗೆ ದಾಖಲಾಗಿದ್ದ ಎಫ್ಐಆರ್ನಲ್ಲಿ ರಾಹುಲ್ ಕಾರು ಚಲಾಯಿಸುತ್ತಿದ್ದರು ಎಂದು ಉಲ್ಲೇಖಿಸಲಾಗಿತ್ತು. ಬಳ್ಳಾರಿ ಜಿಲ್ಲೆಯ ಸಂಡೂರು ಸಿಪಿಐ ಶೇಖರಪ್ಪ ನೇತೃತ್ವದ ತಂಡ ಬೆಂಗಳೂರಲ್ಲಿ ರಾಹುಲ್ ಬಂಧಿಸಿ ಹೊಸಪೇಟೆಗೆ ಕರೆದುಕೊಂಡು ಹೋಗಿದೆ.

ಮದುವೆ ಕಾರ್ಯಕ್ರಮದಲ್ಲಿ ಭಾಗಿ
ಶನಿವಾರ ಸಂಜೆ ಬೆಂಗಳೂರಿನಲ್ಲಿ ಕರಿಸಂದ್ರ ವಾರ್ಡ್ನ ಕಾವೇರಿ ನಗರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರೊಬ್ಬರ ವಿವಾಹದಲ್ಲಿ ಶರತ್ ಅಶೋಕ್ ಪಾಲ್ಗೊಂಡಿದ್ದರು. ಈ ಪೋಟೋಗಳು ಈಗ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿವೆ.

ಮೊದಲ ಬಾರಿಗೆ ಕಾಣಿಸಿಕೊಂಡರು
ಫೆಬ್ರವರಿ 10ರಂದು ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ರಸ್ತೆ ಅಪಘಾತ ನಡೆದಿತ್ತು. ಇಬ್ಬರು ಇದರಲ್ಲಿ ಮೃತಪಟ್ಟಿದ್ದರು. ಅಪಘಾತ ನಡೆದ ಕಾರಿನಲ್ಲಿ ಸಚಿವ ಆರ್. ಅಶೋಕ ಪುತ್ರ ಶರತ್ ಇದ್ದರು ಎಂಬ ಸುದ್ದಿಗಳು ಹಬ್ಬಿದ್ದವು. ಈ ಎಲ್ಲಾ ಸುದ್ದಿಗಳು ಹಬ್ಬಿದ ಬಳಿಕ ಮೊದಲ ಬಾರಿಗೆ ಶರತ್ ಬೆಂಗಳೂರಲ್ಲಿ ಕಾಣಿಸಿಕೊಂಡರು.

ಸಚಿವರನ್ನು ಪ್ರಶ್ನಿಸಲಾಗಿತ್ತು
ಮರಿಯಮ್ಮನಹಳ್ಳಿಯಲ್ಲಿ ರಸ್ತೆ ಅಪಘಾತ ಪ್ರಕರಣ ಬೆಳಕಿಗೆ ಬಂದ ಬಳಿಕ ಮಾಧ್ಯಮಗಳು ಆರ್. ಅಶೋಕರನ್ನು ತಮ್ಮ ಪುತ್ರ ಎಲ್ಲಿದ್ದಾರೆ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಸರಿಯಾದ ಉತ್ತರ ಕೊಟ್ಟಿರಲಿಲ್ಲ. ಶನಿವಾರ ಶರತ್ ಕಾಣಿಸಿಕೊಳ್ಳುವ ಮೂಲಕ ಎಲ್ಲಾ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಅತ್ತ ಚಾಲಕನ ಬಂಧನ
ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ರಾಹುಲ್ನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ರಾಹುಲ್ ಅಶೋಕ್ ಪುತ್ರ ಶರತ್ ಸ್ನೇಹಿತನೇ? ಎಂಬುದು ತನಿಖೆಯಿಂದ ತಿಳಿಯಬೇಕಿದೆ.

ತನಿಖೆಗೆ ತಂಡ ರಚನೆ
ಮರಿಯಮ್ಮನಹಳ್ಳಿಯಲ್ಲಿ ನಡೆದ ಅಪಘಾತ ಪ್ರಕರಣದ ತನಿಖೆಗೆ ಬಳ್ಳಾರಿ ಎಸ್ಪಿ ಸಿ. ಕೆ.ಬಾಬಾ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದ್ದಾರೆ. ಸಂಡೂರು ಸಿಪಿಐ ಎಚ್. ಶೇಖರಪ್ಪ ತನಿಖಾ ತಂಡದ ಮುಖ್ಯಸ್ಥರು. ಇವರು ಬಳ್ಳಾರಿ ಬಿಜೆಪಿ ಸಂಸದ ವೈ. ದೇವೇಂದ್ರಪ್ಪ ಅಳಿಯ. ತನಿಖಾ ತಂಡ ಈಗಾಗಲೇ ಕಾರು ಚಾಲಾಯಿಸುತ್ತಿದ್ದರು ಎಂದು ಹೇಳಲಾದ ರಾಹುಲ್ ಬಂಧಿಸಿದೆ.












Click it and Unblock the Notifications