ಮಂಡ್ಯದಿಂದ ಅಶೋಕ್ ಔಟ್: ಒಕ್ಕಲಿಗರ ಬಾಹುಳ್ಯದ ಜಿಲ್ಲೆಯಲ್ಲಿ ಬಿಜೆಪಿಗೆ ಮತ್ತಷ್ಟು ಹಿನ್ನಡೆ? ಏನಿದು ಬೆಳವಣಿಗೆ? ವಿವರ,ವಿಶ್ಲೇಷಣೆ
ನೇಮಕವಾದ ಕೆಲವೇ ದಿನಗಳ ಬಳಿಕ ಆರ್ ಅಶೋಕ್ ಅವರನ್ನು ಮಂಡ್ಯ ಉಸ್ತುವಾರಿ ಸಚಿವ ಸ್ಥಾನದಿಂದ ಮುಕ್ತಗೊಳಿಸಲಾಗಿದೆ. ಈ ಮೂಲಕ ವಕ್ಕಲಿಗ ಬಾಹುಳ್ಯದ ಪ್ರದೇಶದಲ್ಲಿ ಬಿಜೆಪಿಗೆ ಮತ್ತಷ್ಟು ಹಿನ್ನೆಡೆಯಾಗಿದೆ. ಏನಿದು ಬೆಳವಣಿಗೆ? ವರದಿ, ವಿವರ, ವಿಶ್ಲೇಷಣೆ
ಬೆಂಗಳೂರು, ಫೆಬ್ರವರಿ 10: ಕರ್ನಾಟಕದ ಚುನಾವಣೆಗೆ ಎರಡೇ ತಿಂಗಳು ಬಾಕಿ ಇದೆ. ಮೊದಲಿಂದಲೂ ರಾಜ್ಯದ ಕುತೂಹಲ ಕೆರಳಿಸಿಕೊಂಡು ಬಂದಿರುವ ಮಂಡ್ಯ ಜಿಲ್ಲೆ ಈ ಬಾರಿ ಚುನಾವಣೆಗೂ ಮುನ್ನವೇ ಜನರ ಆಸಕ್ತಿ ಕೆರಳಿಸಿದೆ. ಇದಕ್ಕೆ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳೇ ಕಾರಣ. ಒಕ್ಕಲಿಗ ಬಾಹುಳ್ಯದ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಪೈಪೋಟಿ ಇದೆ. ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ಗೆ ಹೆಚ್ಚು ಸ್ಥಾನಗಳು ಬಂದಿದ್ದವು. ಈ ಬಾರಿಯೂ ಜೆಡಿಎಸ್ ಪ್ರಾಬಲ್ಯವನ್ನು ಮೆರೆಯಲು ಯತ್ನಿಸುತ್ತಿದೆ. ಆದರೆ, ಒಕ್ಕಲಿಗರೇ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಂಡ್ಯದಲ್ಲಿ ಹಲವು ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿದ್ದಾರೆ. ಆದರೆ, ಬಿಜೆಪಿ ಮಾತ್ರ ಮಂಡ್ಯ ಜಿಲ್ಲೆಯಲ್ಲಿ ತನ್ನ ಪ್ರಾಬಲ್ಯ ಮೆರೆಯುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಹತ್ತಿರವಿರುವಾಗಲೇ ಒಕ್ಕಲಿಗ ನಾಯಕರಾದ ಆರ್ ಅಶೋಕ್ ಅವರನ್ನು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿತ್ತು.

ಮಂಡ್ಯ ಉಸ್ತುವಾರಿ ಸಚಿವ ಸ್ಥಾನದಿಂದ ಅಶೋಕ್ಗೆ ಮುಕ್ತಿ
ನೇಮಕವಾದ ಕೆಲವೇ ದಿನಗಳ ಬಳಿಕ ಆರ್ ಅಶೋಕ್ ಅವರನ್ನು ಮಂಡ್ಯ ಉಸ್ತುವಾರಿ ಸಚಿವ ಸ್ಥಾನದಿಂದ ಮುಕ್ತಿ ಮಾಡಲಾಗಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ತಿಳಿಸಿದ್ದಾರೆ. 'ಮಂಡ್ಯ ಜಿಲ್ಲೆಯ ಉಸ್ತುವಾರಿ ಸ್ಥಾನದಿಂದ ತಮ್ಮನ್ನು ಮುಕ್ತಿಗೊಳಿಸುವಂತೆ ಅಶೋಕ್ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಅಧಿಕಾರದಿಂದ ಮುಕ್ತಿಗೊಳಿಸಲಾಗಿದೆ. ಪ್ರಸ್ತುತ ಯಾರನ್ನೂ ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಿಸಿಲ್ಲ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಸಿಎಂಗೆ ಪತ್ರ ಬರೆದಿದ್ದ ಅಶೋಕ್
ಮಂಡ್ಯ ಉಸ್ತುವಾರಿ ಸಚಿವ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಕರ್ನಾಟಕ ಸಚಿವ ಆರ್ ಅಶೋಕ್ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, 'ಇದಕ್ಕಾಗಿ ಸಮಯ ನೀಡಲು ಸಾಧ್ಯವಿಲ್ಲ' ಎಂದು ತಿಳಿಸಿದ್ದರು. 'ಮಂಡ್ಯ ಉಸ್ತುವಾರಿ ಸಚಿವ ಸ್ಥಾನದಿಂದ ನನ್ನನ್ನು ಬಿಡುಗಡೆ ಮಾಡಿ, ಅದಕ್ಕೆ ಸಮಯ ನೀಡಲು ನನಗೆ ಸಾಧ್ಯವಾಗುತ್ತಿಲ್ಲ. ನಾನು ನನ್ನ ಕ್ಷೇತ್ರ, ಸಚಿವಾಲಯ ಹಾಗೂ ಚಲನಚಿತ್ರೋತ್ಸವದ ಕಾರ್ಯಗಳಲ್ಲಿ ನಿರತನಾಗಿದ್ದೇನೆ' ಎಂದು ಅಶೋಕ್ ಪತ್ರ ಬರೆದಿದ್ದರು.

ಕಳೆದ ತಿಂಗಳು ನೇಮಕ
ಆರ್ ಅಶೋಕ್ ಅವರನ್ನು ಕಳೆದ ತಿಂಗಳು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿತ್ತು. ಮಂಡ್ಯದಲ್ಲಿ ಬಹುಸಂಖ್ಯಾತರಾಗಿರುವ ಒಕ್ಕಲಿಗ ಸಮುದಾಯಕ್ಕೆ ಸೇರಿದ ಆರ್ ಅಶೋಕ್ ಅವರಿಂದ ಸಹಾಯವಾಗಬಹುದು ಎಂದು ಬಿಜೆಪಿ ನಿರೀಕ್ಷಿಸಿತ್ತು. ಕಳೆದ ಬಾರಿಯ ಚುನಾವಣೆಯಲ್ಲಿ ಮಂಡ್ಯದ ಎಲ್ಲಾ ಏಳು ವಿಧಾನಸಭೆ ಕ್ಷೇತ್ರಗಳನ್ನು ಗೆದ್ದುಕೊಂಡಿದ್ದ ಜೆಡಿಎಸ್ ವಿರುದ್ಧ ಅಶೋಕ್ ಅಸ್ತ್ರವನ್ನು ಬಳಸಲು ಬಿಜೆಪಿ ನಿರ್ಧರಿಸಿತ್ತು. ಆದರೆ, ಈ ಆರ್ ಅಶೋಕ್ ಅವರನ್ನು ಮುಕ್ತಗೊಳಿಸಿರುವುದರಿಂದ ಬಿಜೆಪಿಗೆ ಮತ್ತಷ್ಟು ಮುಜಗರವಾಗಿದೆ ಮತ್ತು ನಷ್ಟವಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.

'ಗೋ ಬ್ಯಾಕ್ ಅಶೋಕ್' ಅಭಿಯಾನ
ಕಳೆದ ತಿಂಗಳು ಮಂಡ್ಯ ಉಸ್ತುವಾರಿಯಾಗಿ ನೇಮಕವಾಗಿದ್ದ ಆರ್ ಅಶೋಕ್ ಅವರಿಗೆ ಆರಂಭದಲ್ಲೇ ವಿಘ್ನ ಉಂಟಾಗಿತ್ತು. ಬಿಜೆಪಿ ಕಾರ್ಯಕರ್ತರೇ, 'ಗೋ ಬ್ಯಾಕ್ ಅಶೋಕ್' ಎಂಬ ಪೋಸ್ಟರ್ಗಳನ್ನು ಹಾಕಿದ್ದರು. ಈ ದಿಢೀರ್ ನೇಮಕದಿಂದ ಕಾರ್ಯಕರ್ತರು ಅಸಮಾಧಾನಗೊಂಡಿದ್ದು, ಆರ್ ಅಶೋಕ್ ಜಿಲ್ಲೆಯಲ್ಲಿ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಅಶೋಕ್ ಅವರು ಈ ನಿರ್ಧಾರವನ್ನು ತೆಗೆದುಕೊಂಡರೇ ಎಂಬ ಪ್ರಶ್ನೆಗಳು ಎದ್ದಿವೆ. ಗೋ ಬ್ಯಾಕ್ ಅಭಿಯಾನಕ್ಕೆ ಅಶೋಕ್ ಹೆದರಿದರೇ ಎಂಬ ಮಾತುಗಳೂ ಕೇಳಿಬರುತ್ತಿವೆ. ಒಟ್ಟಿನಲ್ಲಿ, ಮಂಡ್ಯ ಜಿಲ್ಲೆಯಲ್ಲಿ ಕಾಲೂರಲು ಯತ್ನ ನಡೆಸುತ್ತಿರುವ ಬಿಜೆಪಿಗೆ ಈ ಬಾರಿಯೂ ಒಕ್ಕಲಿಗ ಬಾಹುಳ್ಯದ ಪ್ರದೇಶಗಳು ಕಬ್ಬಿಣದ ಕಡಲಯೇ ಸರಿ.












Click it and Unblock the Notifications