ಕೈ-ಕಮಲದ ನಡುವೆ ಅಕ್ಕಿ ಕಾಳಗ; ಮೋದಿ ಕೇಳಿ ಅಕ್ಕಿ ಫ್ರೀ ಘೋಷಣೆ ಮಾಡಿದ್ರಾ?: ಸಿದ್ದರಾಮಯ್ಯಗೆ ಆರ್ ಅಶೋಕ್ ಪ್ರಶ್ನೆ
ಕೋಲಾರ, ಜೂನ್ 23: ಪ್ರಧಾನಿ ಮೋದಿಯವರು ಅಕ್ಕಿ ಕೊಡ್ತಿಲ್ಲ ಅಂತ ಸಿದ್ದರಾಮಯ್ಯ ಹೇಳ್ತಿದ್ದಾರೆ. ನೀವು ಗ್ಯಾರಂಟಿ ಕಾರ್ಡ್ ಅನೌನ್ಸ್ ಮಾಡಬೇಕಾದ್ರೆ ಮೋದಿಯವರನ್ನು ಕೇಳಿ ಮಾಡಿದ್ರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಆರ್ ಅಶೋಕ್ ಪ್ರಶ್ನಿಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ, 10 ಕೆಜಿ ಅಕ್ಕಿ ಕೊಡುತ್ತೇವೆಂದು ಹೇಳುವಾಗ ನಿಮಗೆ ಜ್ಞಾನ ಇರಲಿಲ್ವಾ? ಅಕ್ಕಿ ಕೊಡುವುದು 15 ಸಾವಿರ ಕೋಟಿ ಯೋಜನೆ, ಯಾರನ್ನು ಕೇಳಿ ಕೊಟ್ಟಿದ್ದೀರಿ? ಒಂದು ಎಸ್ಟಿಮೇಟ್ ಇಲ್ಲ ಯಾರನ್ನು ಕೇಳಿ ಘೋಷಣೆ ಮಾಡಿದ್ದೀರಿ? ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ಕೊಡುತ್ತಿಲ್ಲ ಎನ್ನುತ್ತಿದ್ದೀರಾ. ಬೇರೆ ಯಾವ ರಾಜ್ಯಕ್ಕಾದರೂ ಹೆಚ್ಚುವರಿ ಅಕ್ಕಿ ಕೊಟ್ಟಿದ್ದಾರಾ? ಏಕೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತೀರಾ. ಕರ್ನಾಟಕ ಸಿಎಂ ಸಿದ್ದರಾಮಯ್ಯ ನೀವೇನು ಸ್ಪೆಷಲ್ ಕ್ಯಾಟಗಿರಿನಾ? ನೀವೇನು ಆಕಾಶದಿಂದ ಇಳಿದು ಬಂದಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದು ನೀವು. ನೀವೇ ಈಗ 10 ಕೆಜಿ ಅಕ್ಕಿ ಕೊಡಬೇಕು. ಅದು ನಿಮ್ಮ ಕರ್ತವ್ಯ, ನಿಮ್ಮ ಧರ್ಮ ಎಂದರು.
ಮೊದಲೇ ನೀವು ಕೇಂದ್ರ ಸರ್ಕಾರವನ್ನು ಕೇಳಬೇಕಿತ್ತು. ಆದ್ರೆ ನೀವು ಕೇಳೇ ಇಲ್ಲ. ಯಾರೋ ಮ್ಯಾನೇಜರ್ ಬರೆದ ಪತ್ರವನ್ನು ಪದೇ ಪದೇ ತೋರಿಸುತ್ತಾರೆ. ನಿಮಗೆ ಸ್ವಲ್ಪನೂ ಜ್ಞಾನ ಬೇಡವೇ? ಆಹಾರ ಸಚಿವ ಕೆ. ಹೆಚ್ ಮುನಿಯಪ್ಪ ಅವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಅಕ್ಕಿಯನ್ನು ಕೇಳಬೇಕಿತ್ತು. ಯಾರೋ ಪಿವೋನ್ ನ ಕಳಿಸಿದ್ದೀರ, ಅದಕ್ಕೆ ಪಿವೋನ್ ಉತ್ತರ ನೀಡಿದ್ದಾರೆ ಅಷ್ಟೇ. ನಿಮಗೆ ನಿಜವಾಗಲೂ ಬಡವರಿಗೆ 10 ಕೆಜಿ ಅಕ್ಕಿ ಕೊಡಬೇಕು ಎಂಬ ಕಾಳಜಿ ಇದ್ದಿದ್ದರೆ ಮೋದಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಕೊಡುತ್ತಿದ್ರಿ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ಬಲವಂತದ ಮತಾಂತರ ಮಾಡಬಾರದು ಎಂದು ಕಾಯ್ದೆ ತಂದಿದ್ದೇವೆ. ಟಿಪ್ಪು ಲಕ್ಷಾಂತರ ಕೊಡವರನ್ನು ಮತಾಂತರ ಮಾಡಿದ, ಇದು ಸರಿನಾ? ಹಾಗಾದ್ರೆ ಟಿಪ್ಪು ಸಂತತಿಯನ್ನು ಬೆಳೆಸೋದಕ್ಕೆ ನೋಡ್ತೀರಾ? ನಾವು ಹೇಳುವುದೇನೆಂದರೆ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ ರು ಎಷ್ಟಿದ್ದಾರೋ ಅಷ್ಟೇ ಇರಲಿ. ಆದರೆ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಮಾಡೋದು ಬೇಡ ಎಂದಿದ್ದೇವೆ. ಹಿಂದೂಗಳನ್ನು ಅತಂತ್ರ ಮಾಡಲು ಕಾಂಗ್ರೆಸ್ ನವರು ಹೀಗೆ ಮಾಡ್ತಿದ್ದಾರೆ. ಈ ಸಂಬಂಧ ಜುಲೈ 4 ರಂದು ಹೋರಾಟ ಮಾಡುತ್ತೇವೆ ಎಂದು ಆರ್. ಅಶೋಕ್ ಹೇಳಿದರು.
ಸೂಲಿಬೆಲೆ ಅವರು ದೇಶದ ಬಗ್ಗೆ, ಭಗತ್ ಸಿಂಗ್ ಬಗ್ಗೆ ಬರೆದಿದ್ದಾರೆ. ಅವರ ಜೀವನ ಚರಿತ್ರೆ ಬಗ್ಗೆ ಬರೆದಿಲ್ಲ. ಹೆಗ್ಡೆವಾರ್ ಜೀವನ ಚರಿತ್ರೆ ಬಗ್ಗೆ ಏನೂ ಬರೆದಿಲ್ಲ. ಅವರು ದೇಶ, ಧರ್ಮದ ಬಗ್ಗೆ ಹೇಳಿರುವ ಮಾತನ್ನು ಬರೆದಿದ್ದಾರೆ ಅಷ್ಟೇ. ಕಾಂಗ್ರೆಸ್ ನವರಿಗೆ ಎಲ್ಲಾ ಟಿಪ್ಪುಮಯವಾಗಿದೆ. ಟಿಪ್ಪು ಡ್ರಾಪ್ ನಿಂದ ಕೆಳಗೆ ಬೀಳುವವರೆಗೂ ಇವರು ಟಿಪ್ಪುವನ್ನು ಬಿಡುವುದಿಲ್ಲ. ಈಗಾಗಲೇ ಟಿಪ್ಪು ಜಯಂತಿ ಮಾಡಲು ಹೋಗಿ ಒಮ್ಮೆ ಬಿದ್ದಿದ್ದಾರೆ. ಈಗ ಮತ್ತೊಮ್ಮೆ ಕೆಳಗೆ ಬೀಳ್ತಾರೆ ತೀವ್ರ ವಾಗ್ದಾಳಿ ನಡೆಸಿದರು.












Click it and Unblock the Notifications