ನೀವು ಯಾವ ಪಕ್ಷ? ಜೆಡಿಎಸ್ ನಾ? ಕಾಂಗ್ರೆಸ್ಸಾ? ಎಂದು ಕೆಣಕಿದ ಆರ್ ಅಶೋಕ್; ತಿರುಗೇಟು ಕೊಟ್ಟ ಶಿವಲಿಂಗೇಗೌಡ
ನೀವು ಯಾವ ಪಕ್ಷದವರು ಎಂದು ಸದನದಲ್ಲಿ ಈಗ ಘೋಷಣೆ ಮಾಡಿ ಅಂತ ಶಾಸಕ ಶಿವಲಿಂಗೇಗೌಡ ಅವರಿಗೆ ಆರ್ ಅಶೋಕ್ ಕೆಣಕಿದ್ದಾರೆ.
ಬೆಂಗಳೂರು,ಫೆಬ್ರವರಿ13: ನೀವು ಯಾವ ಪಕ್ಷ? ಜೆಡಿಎಸ್ ನಾ? ಕಾಂಗ್ರೆಸ್ಸಾ? ಎಂದು ಸದನದಲ್ಲಿ ಈಗ ಘೋಷಣೆ ಮಾಡಿ ಅಂತ ಸಚಿವ ಆರ್ ಅಶೋಕ್ ಶಿವಲಿಂಗೇಗೌಡರವನ್ನ ಕೆಣಕಿದ್ದಾರೆ.
ಸೋಮವಾರ ನಡೆದ ವಿಧಾನಸಭಾ ಕಲಾಪದಲ್ಲಿ ಆರ್ ಅಶೋಕ್ ಮಾತನಾಡಿ, ನೀವು ಯಾವ ಪಾರ್ಟಿ? ಜನತಾದಳನೋ? ಯಾವುದು? ನಿಮ್ಮ ಪಕ್ಷದ ನಾಯಕರು ಹೇಳಿದ್ರೆ ಮಾತ್ರ ನೀವು ಮಾತಾಡ್ಬೇಕು. ನೀವಿಗ ಯಾವ ಪಕ್ಷದವರ ಸಮಯದಲ್ಲಿ ಮಾತಾಡ್ತೀರಿ? ನಿಮಗೆ ಯಾರು ಸಮಯ ಕೊಡಬೇಕು? ನೀವು ಯಾವ ಪಕ್ಷದವರು ಎಂದು ಸದನದಲ್ಲಿ ಈಗ ಘೋಷಣೆ ಮಾಡಿ ಅಂತ ಆರ್ ಅಶೋಕ್ ಕೆಣಕಿದ್ದಾರೆ.
ಚಕ್ರವ್ಯೂಹದಲ್ಲಿ ಶಿವಲಿಂಗೇಗೌಡರು: ಸಿ.ಟಿ ರವಿ
ಶಾಸಕರಾದ ಶಿವಲಿಂಗೇಗೌಡರು ಚಕ್ರವ್ಯೂಹದಲ್ಲಿದ್ದಾರೆ. ಅವರು ಅಭಿಮನ್ಯುನೋ ಅಥವಾ ಅರ್ಜುನನಾಗ್ತಾರೋ? ಎಂಬುದನ್ನು ಕಾಲವೇ ಉತ್ತರಿಸಬೇಕು ಎಂದು ಸಿ.ಟಿ ರವಿ ಅವಾರು ಸದನದಲ್ಲಿ ಕಾಲೆಳೆದಿದ್ದಾರೆ.

ಇನ್ನೂ ಮಾತು ಮುಂದುವರೆಸಿದ ಸಿ ಟಿ ರವಿ ಅವರು, ನಿಮ್ಮನ್ನು ಕಂಡ್ರೆ ನನಗೆ ಅಪಾರ ಪ್ರೀತಿ ವಿಶ್ವಾಸ. ಹೀಗೆಯೇ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದೆ, ಎಣ್ಣೆ ಬಂದಾಗ ಕಣ್ಣು ಮುಚ್ಕೋಬೇಡಿ ಎಂದಿದ್ದೆ. ಆದರೆ ಇವಾಗ ಯಾವ ಕಡೆ ಎಂಬ ಗೊಂದಲದ ಸ್ಥಿತಿಯಲ್ಲಿ ಇದ್ದೀರಿ. ನನ್ನ ಮಾತು ಕೇಳಿದ್ರೆ ಈ ಸಮಸ್ಯೆ ಇರಲಿಲ್ಲ ಎಂದು ಕಾಲೆಳೆದರು.
ಸಚಿವ ಅಶೋಕ್, ಸಿ ಟಿ ರವಿ ಅವರ ಮಾತಿಗೆ ತಿರುಗೇಟು ಕೊಟ್ಟ ಶಿವಲಿಂಗೇಗೌಡ
ಜನ ಬಲ ಇರುವವರೆಗೆ ನಾನು ಅರ್ಜುನನೇ ಆಗೋದು. ಅಭಿಮನ್ಯು ತರ ಸಿಕ್ಕಿ ಹಾಕಲ್ಲ, ಅಭಿಮನ್ಯುನನ್ನು ಸಾಯಿಸಿದ್ದು ಯಾರು ಎಂದು ನನಗೆ ಗೊತ್ತಿಲ್ವಾ? ಎಂದು ಉತ್ತರಿಸಿದರು.

ಈ ವೇಳೆ ಮಧ್ಯ ಪ್ರವೇಶ ಮಾಡಿದ ಆರ್.ಅಶೋಕ್, ನಿನ್ನೆ ವೇದಿಕೆಯಲ್ಲಿ ಯಾರೆಲ್ಲಾ ಇದ್ದರು ಎಂದು ನೋಡಿದರೆ ಕರ್ಣ ಯಾರು? ಕಾಲೆಳೆದರು. ಇದಕ್ಕೆ, ನಾನು ಭೀಮನ ಪಾತ್ರ ಮಾಡಿರೋದು ದುರ್ಯೋಧನ ಪಾತ್ರ ಮಾಡಿಲ್ಲ ಎಂದು ಶಿವಲಿಂಗೇಗೌಡ ಹೇಳಿದ್ದಕ್ಕೆ,ಅರ್ಜುನ ಕೌರವರ ಕಡೆ ಇರಲ್ಲ, ಪಾಂಡವರ ಕಡೆ ಇರೋದು. ಪಾಂಡವರು ಈ ಕಡೆ ಬರಬೇಕು ಎಂದು ಆಡಳಿತ ಪಕ್ಷದತ್ತ ಸಿ ಟಿ ರವಿ ಕೈ ತೋರಿಸಿದರು.
ಇನ್ನೂ ಇದಕ್ಕೆ, ಪಾಂಡವರು ಯಾರು ಕೌರವರು ಯಾರು ಎಂದು ಚುನಾವಣೆಯಲ್ಲಿ ನಿರ್ಧಾರ ಆಗುತ್ತೆ ಎಂದು ಶಿವಲಿಂಗೇಗೌಡ ತಿರುಗೇಟು ನೀಡಿದರು.
ನಾನು ಇನ್ನೂ ಜೆಡಿಎಸ್ ಶಾಸಕ. ಜೆಡಿಎಸ್ ಗೆ ರಾಜೀನಾಮೆ ಕೊಟ್ಟಿಲ್ಲ. ನಾನು ಜೆಡಿಎಸ್ ನವನು ಅಲ್ಲ ಅಂತ ಯಾರೂ ಡಿಕ್ಲೇರ್ ಮಾಡಿಲ್ಲ. ದೇಶದಲ್ಲಿ ಎಲ್ಲರೂ ಪಕ್ಷ ಬಿಡುತ್ತಾರೆ. ಯಾರಿಗೆ ಯಾವ ಪಕ್ಷ ಇಷ್ಟನೋ, ಹೋಗಿ ಅವರು ಸೇರಿಕೊಳ್ಳುತ್ತಾರೆ ಎಂದು ಶಿವಲಿಂಗೇಗೌಡ ಹೇಳಿದರು.












Click it and Unblock the Notifications