ಹಂತಕ ಬ್ಯಾಂಕ್ ಮ್ಯಾನೇಜರ್ ಬಗ್ಗೆ ಮತ್ತಷ್ಟು ಮಾಹಿತಿ

ನಾದಿನಿ ಮೋಹದ ಬಲೆಯಲ್ಲಿ ...
ಪಂಜಾಬ್ ನ್ಯಾಷನಲ್ ಬ್ಯಾಂಕ್ ಮ್ಯಾನೇಜರ್ ಆಗಿದ್ದ ರಮೇಶ, ಪ್ರಕರಣದ ಕೇಂದ್ರ ಬಿಂದು ನಾದಿನಿ ಸವಿತಾ ಅವರನ್ನು ಸ್ವತಃ ತನ್ನ ಮನೆಯಲ್ಲೇ ಇಟ್ಟುಕೊಂಡು ಓದಿ, ಬೆಳೆಸಿದ್ದ. ಹಾಗಾಗಿ, ಆಕೆಯನ್ನು ತನ್ನ ಎರಡನೇ ಪತ್ನಿಯನ್ನಾಗಿ ಇಟ್ಟುಕೊಳ್ಳುವ ಹುನ್ನಾರ ಅವನದ್ದಾಗಿತ್ತು. ಆದರೆ ಅದು ವಿಫಲವಾಗುತ್ತಿದ್ದಂತೆ ತನ್ನ ಪತ್ನಿಯ ಸಂಸಾರ ಮುಗಿಸಲು ಮುಂದಾದ. ಅದರಂತೆ ಪತ್ನಿ ಸುಂದರಿ ಅವರ ಇಡೀ ಕುಟಂಬವನ್ನು ಸರ್ವನಾಶ ಮಾಡಿದ್ದಾನೆ. ಹೆಂಡತಿಯನ್ನೂ ಸಾಯಿಸಲು ಹವಣಿಸಿದ್ದ!
ಪಾತಕಿ ರಮೇಶ ಕೇವಲ ನಾಲ್ವರನ್ನಷ್ಟೇ ಸಾಯಿಸಿಲ್ಲ. ಅವನ ಘೋರ ಕೃತ್ಯಗಳಿಂದ ನೊಂದು ಪತ್ನಿ ಸುಂದರಿ ಅವರ ತಂದೆ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡರು. ಸುಂದರಿ ಅವರ ತಮ್ಮ ಸಹ ರೈಲಿಗೆ ಸಿಕ್ಕಿ ಸತ್ತ.
ಮಕ್ಕಳನ್ನು ಸಿಕ್ಕಾಪಟ್ಟೆ ಮುದ್ದಿಸಿದ್ದ!
ಹತ್ಯೆ ಮಾಡಲೆಂದೇ ಕಾರಿನಲ್ಲಿ ಮಕ್ಕಳನ್ನು ಕರೆತರುತ್ತಿದ್ದ ರಮೇಶ, ಹಿಂದಿನ ಸೀಟಿನಲ್ಲಿ ಮಕ್ಕಳ ಜತೆ ಕುಳಿತಿದ್ದ. ಹಾದಿ ಮಧ್ಯೆ ಆತ ಮಕ್ಕಳನ್ನು ಸಿಕ್ಕಾಪಟ್ಟೆ ಮುದ್ದಿಸುತ್ತಿದ್ದ ಎಂದು ಕಾರಿನ ಚಾಲಕ ಕೋರ್ಟಿನಲ್ಲಿ ಸಾಕ್ಷ್ಯ ನುಡಿದಿದ್ದಾನೆ. ಮಕ್ಕಳನ್ನು ಜವರಾಯನ ಕೈಗೆ ಒಪ್ಪಿಸುವ ಮುನ್ನ ನಿರ್ದಯಿ ಹಂತಕ, ಆ ಮುದ್ದಾಟದಲ್ಲೂ ಮನಸ್ಸು ಬದಲಾಯಿಸಿಯೇ ಇಲ್ಲ.
ರಮೇಶ ನಾಯ್ಕನಿಗೆ ಅರ್ಧಮೂಲೆಯಲ್ಲಿ ಇದ್ದದ್ದು ಐದು ಸೆಂಟ್ ಜಮೀನು. ಒಂದು ಸಣ್ಣ ಗುಡಿಸಲು. ಅಲ್ಲೇ ಅವನು ಬಾಲ್ಯ ಕಳೆದಿದ್ದ. ರಮೇಶ ನಾಯ್ಕನಿಗೂ ಪಾಣಾಜೆ ಗ್ರಾಮದ ಅರ್ಧಮೂಲೆಗೂ ಸಂಬಂಧ ಕಡಿದುಹೋಗಿ ಸುಮಾರು 20 ವರ್ಷಗಳೇ ಸಂದಿದ್ದವು. ಎರಡು ದಶಕಗಳ ಬಳಿಕ ರಮೇಶ ನಾಯ್ಕ ಅರ್ಧಮೂಲೆಯ ಆ ಕರೆ ಬಳಿ ಮರಳಿದ್ದು ತನ್ನದೇ ಮಕ್ಕಳನ್ನು ಸಾಯಿಸಲೆಂದು! ಬಾಲ್ಯದಲ್ಲಿ ತಾನು ನೀರಾಟವಾಡುತ್ತಿದ್ದ ಕೆರೆಯಲ್ಲಿಯೇ ತನ್ನ ಮಕ್ಕಳನ್ನು ಮುಳುಗಿಸಿ ಸಾಯಸಿದ್ದಾನೆ!
ರಮೇಶ ನಾಯ್ಕನ ತಂದೆ ತಾಯಿ ಕೂಲಿ ಕೆಲಸಗಾರರು. ಕಷ್ಣಪ್ಪ ನಾಯ್ಕ ಮತ್ತು ಲಕ್ಷ್ಮೀ ದಂಪತಿಗೆ ಮೂವರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳು. ಒಟ್ಟಾರೆ ಎಂಟು ಮಂದಿಯ ತುಂಬಿದ ಸಂಸಾರ ಅದು. ಕಷ್ಣಪ್ಪ ನಾಯ್ಕ ಈಗ ಇಲ್ಲ. ತಾಯಿ ಲಕ್ಷ್ಮೀ ಅವರು ರಮೇಶ ನಾಯ್ಕನ ಮಂಗಳೂರಿನ ಮನೆಯಲ್ಲಿ ಈ ಘಟನೆ ನಡೆಯುವ ವೇಳೆ ಇದ್ದರು. ಅಜ್ಜಿ ಜತೆ ಆಟವಾಡುತ್ತಿದ್ದ ಪುಟಾಣಿಗಳನ್ನು ರಮೇಶ ನಾಯ್ಕ ಐಸ್ ಕ್ರೀಂ ಕೊಡಿಸುವುದಾಗಿ ಹೇಳಿ ಸಾವಿನ ಮನೆಗೆ ದೂಡಿದ್ದ.
ಗಂಡನ ವಿರುದ್ಧ ಹೋರಾಡಿ ತಕ್ಕ ಶಾಸ್ತಿ ಮಾಡಿಸಿದ ಪತ್ನಿ:
ಒಂದು ಕಡೆ ತನ್ನ ಹೆತ್ತಮಕ್ಕಳನ್ನು ಸಾಯಿಸಿದ, ಮತ್ತೊಂದು ಕಡೆ ತನ್ನ ಹೆತ್ತಮ್ಮನನ್ನೂ ಜತೆಗೆ ಒಡಹುಟ್ಟಿದವಳನ್ನು ತನ್ನ ಕಾಮತೃಷೆಗಾಗಿ ಬಲಿ ತೆಗೆದುಕೊಂಡ ಪಾಪಿ ಪತಿರಾಯನನ್ನು ಯಾವ ಹೆಣ್ಣುಮಗಳು ತಾನೆ ಕ್ಷಮಿಸಿಯಾಳು. ಈ ಪ್ರರಣದಲ್ಲೂ ಹಾಗೆಯೇ ಆಗಿದೆ. ಒಬ್ಬೊಬ್ಬರಾಗಿ ತನ್ನವರನ್ನೆಲ್ಲಾ ಕಳೆದುಕೊಂಡು ಬದುಕು ಬರಡಾಗುತ್ತಿದ್ದಂತೆ ರಮೇಶನ ಪತ್ನಿ ಸುಂದರಿ ಅವರೂ ಸಹ ಅವನಿಗೆ ಗಲ್ಲು ಶಿಕ್ಷೆ ಪ್ರಕಟವಾಗುವವರೆಗೂ ವಿಶ್ರಮಿಸಲಿಲ್ಲ.
ಈ ಪ್ರಕ್ರಿಯೆಲ್ಲಿ ಆಕೆ ತಂದೆಯನ್ನೂ ಕೆಳದುಕೊಂಡರು. ಕಳೆದ ವರ್ಷ ಸುಂದರಿ ಅವರ ತಂದೆ ಖಿನ್ನತೆಗೀಡಾಗಿ ಆತ್ಮಹತ್ಯೆ ಮಾಡಿಕೊಂಡರು. ಇನ್ನು ಇದೇ ವರ್ಷ ಆಕೆಯ ಸೋದರನೊಬ್ಬ ರೈಲಿನಡಿಗೆ ಬಿದ್ದು ಸಾವನ್ನಪ್ಪಿದ. ಈ ರೀತಿ ಒಟ್ಟು ಆರು ಮಂದಿಯನ್ನು ಸುಂದರಿ ಕಳೆದುಕೊಂಡಿದ್ದಾರೆ.
ಇಷ್ಟಕ್ಕೂ ಪತಿಗೆ ಮರಣದಂಡನೆ ದಕ್ಕಿಸುವಲ್ಲಿ ಸುಂದರಿ ಅವರಿಗೆ ಕೈಹಿಡಿದಿದ್ದು ಅವರ ಮೊಬೈಲ್. ಮೊಬೈಲ್ ಮೂಲಕ ತನ್ನ ಪಾಪ ಕೃತ್ಯಗಳನ್ನು ನಿವೇದನೆ ಮಾಡಿಕೊಂಡಿದ್ದ ರಮೇಶ ನಾಯ್ಕ ನಿರಂತರವಾಗಿ ತನ್ನ ಪತ್ನಿಗೆ ಮೆಸೇಜುಗಳನ್ನು ಕಳುಹಿಸಿದ್ದ. ಆ ಮೆಸೇಜುಗಳೇ ಕೊನೆಗೆ ಅವನನ್ನು ಗಲ್ಲುಕಂಬದತ್ತ ದೂಡಿವೆ.
ಒಂದೊಂದೇ ಪಾಪ ಕೃತ್ಯಗಳ ಎಲ್ಲ ಮಾಹಿತಿಯನ್ನು ಮಡದಿಗೆ ಮೊಬೈಲ್ ಮೂಲಕ ಮೆಸೇಜು ಮಾಡಿ ರವಾನಿಸುತ್ತಿದ್ದ ರಮೇಶ, ತಾನೂ ಸಾಯುವುದಾಗಿ ಹೇಳಿಕೊಂಡಿದ್ದ. ಜತೆಗೆ, ಮಡದಿಗೂ ನೀರು ಇರುವ ಬಾವಿಗೆ ಹಾರಿ ಸಾಯುವಂತೆ ಸೂಚಿಸಿದ್ದ. ಆದರೆ ಕಾಲಾಂತರದಲ್ಲಿ ತನ್ನ ವಿರುದ್ಧ ಕೇಸು ಪಕ್ಕಾ ಆಗುತ್ತಿದ್ದು, ತಾನು ನೇಣುಗಂಬವೇರುವುದು ಖಾತ್ರಿಯಾಗುತ್ತಿದ್ದಂತೆ ವಿಚಾರಣೆ ಹಂತದಲ್ಲಿ ಇಡೀ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ವಕೀಲ ಮಿತ್ರ ಕೃಪಾಶಂಕರ್ ಹಾಗೂ ಪ್ರಕರಣಕ್ಕೆ ಜೀವ ತುಂಬಿದ ಪತ್ನಿ ಸುಂದರಿಯನ್ನು ಹತ್ಯೆ ಮಾಡುವುದಾಗಿ ಬೆದರಿಸಿದ್ದ.
ರಮೇಶ ನಾಯ್ಕ ಪಾಪಕೃತ್ಯವೆಸಗಿದ ಮೊದಲ ದಿನದಿಂದಲೇ ಅವನ ಬೆನ್ನುಹತ್ತಿದವರು ವಕೀಲರಾದ ಕೃಪಾಶಂಕರ್. ಅವರು ಆತನ ಸಹಪಾಠಿಯೂ ಹೌದು. ಪಾಣಾಜೆ ಶಾಲೆಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಇಬ್ಬರೂ ಒಟ್ಟಿಗೆ ಓದಿದವರು.
ಘಟನೆ ನಡೆದ ದಿನ ಸಂಜೆಯ ವೇಳೆಗೆ ಕೃಪಾಶಂಕರ್ ಅವರಿಗೆ ಆರ್ಲಪದವಿನಲ್ಲಿ ರಮೇಶ ನಾಯ್ಕ ಸಿಕ್ಕಿದ್ದ. ಅವನನ್ನು ತಮ್ಮ ಎಂದಿನ ಸಹಜ ಸ್ನೇಹದಿಂದ ಮಾತನ್ನಾಡಿದ್ದರು.ಆಮೇಲೆ ಅವನು ಬಸ್ಸಿನಲ್ಲಿ ಪುತ್ತೂರಿನತ್ತ ಹೋಗಿದ್ದ. ಈ ಮಧ್ಯೆ ಅವನು ನಾಲ್ಕು ಹತ್ಯೆಗಳನ್ನು ಮಾಡಿದ್ದಾನೆ ಎಂಬುದು ಗೊತ್ತಾಗುತ್ತಿದ್ದಂತೆ ರಮೇಶ ಬಸ್ಸಿನಲ್ಲಿ ಹೋಗಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅದಾದ ನಂತರ ಅರ್ಧಮೂಲೆಯ ತೋಟದ ಕೆರೆಯಲ್ಲಿ ಮಕ್ಕಳ ಶವವನ್ನು ಮೊದಲು ಪತ್ತೆ ಮಾಡಿದ್ದೂ ಇವರೇ. ಹೀಗಾಗಿ ಇಡೀ ಪ್ರಕರಣದಲ್ಲಿ ಕೃಪಾಶಂಕರ್ ಅವರು ಪ್ರಮುಖ ಸಾಕ್ಷಿಯಾಗಿದ್ದರು. ರಮೇಶ ಇದೇ ಕಾರಣಕ್ಕಾಗಿ ಬಾಲ್ಯ ಸ್ನೇಹಿತ ಕೃಪಾಶಂಕರ್ ಅವರಿಗೆ ಜೈಲಿನಿಂದ ಬೇರೆಯವರ ಮೊಬೈಲ್ ಬಳಸಿ ಬೆದರಿಕೆ ಒಡ್ಡಿದ್ದ.
ಈ ಸಂಬಂಧ ಕೃಪಾಶಂಕರ್ ಅವರು ನೀಡಿರುವ ದೂರಿನ ವಿಚಾರಣೆ ಪುತ್ತೂರು ನ್ಯಾಯಾಲಯದಲ್ಲಿ ಬಾಕಿ ಇದೆ. ಇನ್ನು, ರಮೇಶ ತನ್ನ ಪತ್ನಿಗೆ ಬೆದರಿಕೆ ಹಾಕಿರುವ ಪ್ರಕರಣದ ವಿಚಾರಣೆಯೂ ಇನ್ನೂ ಮುಂದುವರಿದಿದೆ. ಈ ಮಧ್ಯೆ, ನ್ಯಾಯದೇವತೆ ಅವನನ್ನು ನೇಣುಗಂಬದತ್ತ ತಳ್ಳಿದ್ದಾಳೆ. ಪತಿರಾಯ ರಮೇಶನಿಗೆ ಗಲ್ಲು ಶಿಕ್ಷೆ ಪ್ರಕಟಿಸುತ್ತಿದ್ದಂತೆ ಪತ್ನಿ ಸುಂದರಿ ದೀರ್ಘವಾದ ನಿಟ್ಟುಸಿರುಬಿಟ್ಟಿದ್ದಾರೆ.












Click it and Unblock the Notifications