10 ದಿನಗಳ ಕಾಲ ಟೊಮೆಟೊ ಸಿಐಡಿ ವಶಕ್ಕೆ
ಬೆಂಗಳೂರು, ಮೇ 04 : ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಶಿವಕುಮಾರ ಸ್ವಾಮಿ ಅಲಿಯಾಸ್ ಟೊಮೆಟೊವನ್ನು 10 ದಿನಗಳ ಕಾಲ ಸಿಐಡಿ ವಶಕ್ಕೆ ಒಪ್ಪಿಸಲಾಗಿದೆ. ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಹಗರಣದ ಕಿಂಗ್ ಪಿನ್ ಶಿವಕುಮಾರ ಸ್ವಾಮಿಯನ್ನು ಮಂಗಳವಾರ ಹೊಸೂರು ಬಳಿ ಪೊಲೀಸರು ಬಂಧಿಸಿದ್ದರು.
ಶಿವಕುಮಾರಸ್ವಾಮಿ ಬಂಧನದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಸಿಐಡಿಯ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಕಿಶೋರ್ ಚಂದ್ರ ಅವರು, 'ಬಂಧಿತನ ಮೇಲೆ ಬೆಂಗಳೂರಿನಲ್ಲಿ 4 ಮತ್ತು ತುಮಕೂರಿನಲ್ಲಿ 2 ಪ್ರಕರಣಗಳು ದಾಖಲಾಗಿದ್ದು, ಈತನ ಜತೆ ಸಂಪರ್ಕ ಹೊಂದಿರುವವರನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು' ಎಂದು ಹೇಳಿದರು. [ಇವನಿಗೆ ಪತ್ರಿಕೆ ಬಯಲು ಮಾಡುವುದೇ ಕೆಲಸ]

ಶಿವಕುಮಾರಸ್ವಾಮಿ ಅಲಿಯಾಸ್ ಟೊಮೆಟೊ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಸಂಘಟಿತ ಅಪರಾಧ (ಕೋಕಾ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮಂಗಳವಾರ ಆತನನ್ನು ಕೋರ್ಟ್ಗೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಸಿಐಡಿ ವಶಕ್ಕೆ ಪಡೆಯಲಾಗಿದೆ. [ಪತ್ರಿಕೆ ಹಗರಣದಲ್ಲಿ ಕೋಕಾ ಪ್ರಯೋಗ, ಏನಿದು ಕೋಕಾ?]
ಜಾಮೀನು ಪಡೆಯಲು ಬಂದಿದ್ದ : ಹಗರಣ ಬಯಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಈತ ಕೇರಳ ಮುಂತಾದ ಕಡೆ ಓಡಾಡಿಕೊಂಡಿದ್ದ. ನಿರೀಕ್ಷಣಾ ಜಾಮೀನು ಪಡೆಯಲು ನಗರಕ್ಕೆ ಬಂದಿದ್ದ. ಹೊಸೂರಿನ ಗಾರೆಬಾವಿಪಾಳ್ಯದ ಬಳಿ ಆತ ಇರುವ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಿದ ಪೊಲೀಸರು, ದಾಳಿ ನಡೆಸಿ ಬಂಧಿಸಿದ್ದಾರೆ. ಆತನಿಂದ 50 ಸಾವಿರ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. [20 ಕಾಲೇಜುಗಳಿಗೆ ಪತ್ರಿಕೆ ಮಾರಿದ್ದ ಶಿವಕುಮಾರ ಸ್ವಾಮಿ]
ಹಲವು ಪತ್ರಿಕೆ ಬಯಲು ಮಾಡಿದ್ದ : ಪಿಯುಸಿ ಪರೀಕ್ಷೆ ಮಾತ್ರವಲ್ಲದೇ ಹಲವು ಸರ್ಕಾರಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ಪತ್ರಿಕೆಯನ್ನು ಶಿವಕುಮಾರ ಸ್ವಾಮಿ ಬಯಲು ಮಾಡುತ್ತಿದ್ದ. ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳ ಪರಿಚಯ ಮಾಡಿಕೊಂಡು, ಹಣದ ಅಮಿಷವೊಡ್ಡಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಲಕ್ಷಾಂತರ ಹಣ ಗಳಿಸುತ್ತಿದ್ದ.
ಮೂಲತಃ ತುಮಕೂರಿನವನು : ಶಿವಕುಮಾರ ಸ್ವಾಮಿ ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವನು. ನಂದಿನಿ ಲೇಔಟ್ನಲ್ಲಿ ವಾಸವಾಗಿದ್ದ ಆತ, ಉಪನ್ಯಾಸಕ ಹುದ್ದೆಗೆ ರಾಜೀನಾಮೆ ನೀಡಿ, ಮಗನೊಂದಿಗೆ ಟ್ಯುಟೋರಿಯಲ್ ನಡೆಸುತ್ತಾ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುತ್ತಿದ್ದ.












Click it and Unblock the Notifications