ಪಿಎಸ್ಐ ಅಕ್ರಮದಲ್ಲಿಕಣ್ಣು ಮುಚ್ಚಿ ಹಾಲು ಕುಡಿದ ಬೆಕ್ಕುಗಳಿಗೆ ಸಿಐಡಿ ಗಾಳ!
ಬೆಂಗಳೂರು, ಮೇ. 05: ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿ ಕದ್ದು ಮುಚ್ಚಿ ಹಾಲು ಕುಡಿದ ಬೆಕ್ಕಿನಂತಿದ್ದ ಪೊಲೀಸ್ ಅಧಿಕಾರಿಗಳ ಪಾಲಿಗೆ ಸಿಐಡಿ ತನಿಖೆ ಉರುಳು ಬಿಗಿಯಾಗಿದೆ.
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂಗುರು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಅವರನ್ನು ಸಿಐಡಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ನಾಲ್ಕು ದಿನದ ಹಿಂದಷ್ಟೇ ನಿವೃತ್ತಿ ಹೊಂದಿದ್ದ ಮಲ್ಲಿಕಾರ್ಜುನ ಸಾಲಿ, ರಾಯಚೂರು, ಕಲಬುರಗಿ ಸೇರಿದಂತೆ ಹಲವಡೆ ಕೆಲಸ ನಿರ್ವಹಿಸಿದ್ದರು.
ಬುಧವಾರ ತಡರಾತ್ರಿ ವರೆಗೂ ವಿಚಾರಣೆ ನಡೆಸಿದ್ದ ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡ, ಸಾಲಿ ಅವರ ಎರಡು ಮೊಬೈಲ್ ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದೆ. ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಸಂಬಂಧ ಮೊಬೈಲ್ ನಲ್ಲಿ ನಡೆಸಿರುವ ಚಾಟ್ ವಿವರ ಪಡೆಯಲು ನಿವೃತ್ತ ಅಧಿಕಾರಿಯ ಎರಡು ಮೊಬೈಲ್ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಒಂದು ವೇಳೆ ಅಕ್ರಮದ ಬಗ್ಗೆ ವಾಟ್ಸಪ್ ಕಾಲ್ , ಚಾಟ್ ಮಾಡಿದ್ದಲ್ಲಿ ಅದರ ಹೂರಣ ಸಿಐಡಿ ಪೊಲೀಸರು ಹೊರ ತೆಗೆಯಲಿದ್ದಾರೆ. ಗುರುವಾರ ಸಹ ಮಲ್ಲಿಕಾರ್ಜುನ ಸಾಲಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಈಗಾಗಲೇ ಇಬ್ಬರ ವಿಚಾರಣೆ:
ಕಲಬುರಗಿ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಡಿವೈಎಸ್ಪಿಗಳನ್ನು ವಿಚಾರಣೆ ನಡೆಸಿ ಸಿಐಡಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಪರೀಕ್ಷಾ ಅಕ್ರಮಕ್ಕೆ ಪರೀಕ್ಷಾ ಕೇಂದ್ರಗಳ ಉಸ್ತುವಾರಿ ಹೊತ್ತಿದ್ದ ಅಧಿಕಾರಿಗಳೇ ಆಸ್ಪದ ನೀಡಿರುವುದಕ್ಕೆ ಸಾಕ್ಷಿಗಳು ಸಿಕ್ಕ ಹಿನ್ನೆಲೆಯಲ್ಲಿ ಇದೀಗ ಪೊಲೀಸರ ವಿಚಾರಣೆ ಎದುರಿಸುವಂತಾಗಿದೆ.
ಅಮಾನತು ಆದವರ ವಿಚಾರಣೆಗೆ ತಯಾರಿ:
ಕಲಬಬುರಗಿಯ ಜ್ಞಾನ ಜ್ಯೋತಿ ಶಾಲೆಯಲ್ಲಿನ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಅಮಾನತು ಅಗಿರುವ ಇನ್ಸ್ಪೆಕ್ಟರ್ ದಿಲೀಪ್ ಕುಮಾರ್, ಬೆರಳಚ್ಚು ವಿಭಾಗದ ಡಿವೈಎಸ್ಪಿ ಆರ್. ಆರ್. ಹೊಸ ಮನಿಯನ್ನು ಅಮಾನತು ಮಾಡಲಾಗಿದೆ. ಉತ್ತರ ಪತ್ರಿಕೆಗಳನ್ನು ತಲುಪಿಸಲು ಅರ್ಧ ತಾಸು ತಡವಾಗಿದ್ದರೂ ಈ ಬಗ್ಗೆ ವರದಿ ಮಾಡದೇ ಅಕ್ರಮಕ್ಕೆ ಸಾಥ್ ನೀಡಿದ ಅರೋಪ ಎದುರಿಸುತ್ತಿದ್ದರು. ಇದೀಗ ಇಬ್ಬರನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆಯುತ್ತಿದ್ದರು ತಡೆಯಲಿಲ್ಲ ಏಕೆ ಹಾಗೂ ತಡವಾಗಿ ಉತ್ತರ ಪತ್ರಿಕೆ ತಲುಪಿಸಿದ ಬಗ್ಗೆ ಸರಣಿ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದಿದ್ದಾರೆ.

ಪಿಎಸ್ಐ ನೇಮಕಾತಿ ಅಧಿಸೂಚನೆ ಹೊರ ಬೀಳುತ್ತಿದ್ದಂತೆ ಅಭ್ಯರ್ಥಿಗಳು ಸೇವೆಯಲ್ಲಿರುವ ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಅವರ ಮೂಲಕವೇ ಕಿಂಗ್ ಪಿನ್ ಆರ್. ಡಿ. ಪಾಟೀಲನ ಸಂಪರ್ಕಕ್ಕೆ ಬಿಡಲಾಗಿದೆ. ಆ ಬಳಿಕ ಪ್ಲಾನ್ ರೂಪಿಸಿ ಅಕ್ರಮ ಎಸಗಿದ್ದು, ಈ ಬಗ್ಗೆ ಸಿಐಡಿ ಪೊಲೀಸರು ಸಾಕ್ಷಿಗಳ ಸಂಗ್ರಹದಲ್ಲಿ ತೊಡಗಿದ್ದಾರೆ. ಪೊಲೀಸರ ಶಾಮೀಲು ಆಗಿರುವ ಬಗ್ಗೆ ಕಿಂಗ್ ಪಿನ್ ರುದ್ರಗೌಡ ಪಾಟೀಲ್, ಮಂಜುನಾಥ್ ಮೇಳಕುಂದಿ,ಕಾಶಿನಾಥ್ ಇತರರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ರಾಜಕಾರಣಿಗಳಿಗೆ ನಡುಕ:
ಆರ್. ಡಿ. ಪಾಟೀಲ್ ಮಂದಿನ ವಿಧಾನ ಸಭೆ ಚುನಾವಣೆಯಲ್ಲಿ ಕಣಕ್ಕೆ ಇಳಿಯಲು ಪ್ಲಾನ್ ರೂಪಿಸುತ್ತಿದ್ದವ. ಈತ ಹಲವು ಪ್ರಭಾವಿ ರಾಜಕಾರಣಿಗಳ ಜತೆ ನೇರ ಸಂಪರ್ಕ ಹೊಂದಿದ್ದಾನೆ. ಸರ್ಕಾರಿ ನೌಕರಿ ಕೊಡಿಸುವುದರಲ್ಲಿ ನಿಸ್ಸಿಮನಾಗಿ ಗುರುತಿಸಿಕೊಂಡಿದ್ದ ಪಾಟೀಲ್ ಗೆ ಹೇಳಿ ಹಲವು ರಾಜಕಾರಣಿಗಳು ಕೆಲಸ ಮಾಡಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಈ ಬಗ್ಗೆ ಆರ್. ಡಿ. ಪಾಟೀಲ್ ಬಾಯಿ ಬಿಟ್ಟರೆ, ಹಲವು ಜನ ನಾಯಕರ ಪಾಲಿಗೂ ಮುಗ್ಗುಲ ಮುಳ್ಳಾಗಿ ಕಾಡುವುದರಲ್ಲಿ ಅನುಮಾನವೇ ಇಲ್ಲ. ಅಂತೂ ಸಿಐಡಿ ತನಿಖೆ ಪೊಲೀಸ್ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ.












Click it and Unblock the Notifications