ಪಿಎಸ್ಐ ಜಗದೀಶ್ ಕೊಂದವರು ನಾಗ್ಪುರದಲ್ಲಿ ಸಿಕ್ಕಿಬಿದ್ರು
ಬೆಂಗಳೂರು, ಅಕ್ಟೋಬರ್ 20 : ದೊಡ್ಡಬಳ್ಳಾಪುರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಜಗದೀಶ್ ಅವರನ್ನು ಕೊಂದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ನಾಗ್ಪುರ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ. ಮಂಗಳವಾರ ಸಂಜೆ ವೇಳೆಗೆ ಅವರನ್ನು ಬೆಂಗಳೂರಿಗೆ ಕರೆತರುವ ಸಾಧ್ಯತೆ ಇದೆ.
ನಾಗ್ಪುರ ಕ್ರೈಂ ಬ್ರಾಂಚ್, ಭಯೋತ್ಪಾದಕ ನಿಗ್ರಹ ದಳ ಹಾಗೂ ರೈಲ್ವೆ ಪೊಲೀಸ್ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿ ಜಗದೀಶ್ ಹತ್ಯೆ ಮಾಡಿದ್ದ ಹರೀಶ್ ಬಾಬು (48) ಮತ್ತು ಮಧು (26) ಅವರನ್ನು ಸೋಮವಾರ ಸಂಜೆ ನಾಗ್ಪುರ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ. [ದೊಡ್ಡಬಳ್ಳಾಪುರ ಠಾಣೆ ಪಿಎಸ್ ಐ ಹತ್ಯೆ]

ಅಕ್ಟೋಬರ್ 16ರ ಶುಕ್ರವಾರ ಎಸ್ಐ ಜಗದೀಶ್ ಅವರನ್ನು ನೆಲಮಂಗಲ ಬಳಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳು ಹೈದರಾಬಾದ್ನಲ್ಲಿ ತಲೆಮರೆಸಿಕೊಂಡಿದ್ದರು. ಸೋಮವಾರ ಬೆಳಗ್ಗೆ ದೆಹಲಿಗೆ ಹೊರಟಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿ ಪಡೆದ ಕರ್ನಾಟಕದ ಪೊಲೀಸರು ಈ ಕುರಿತು ನಾಗ್ಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು. [ಪೊಲೀಸರ ದುಗುಡ-ದುಮ್ಮಾನ ತೆರೆದಿಡುವ ಪೇದೆಯ ಪತ್ರ]
ರೈಲು ನಾಗ್ಪುರ ನಿಲ್ದಾಣಕ್ಕೆ ಪ್ರವೇಶಿಸುವ ಮೊದಲೇ ಮಫ್ತಿಯಲ್ಲಿ ಕಾಯುತ್ತಿದ್ದ ಪೊಲೀಸರು, ಸಂಜೆ 5ರ ಸುಮಾರಿಗೆ ಸಾಮಾನ್ಯ ಬೋಗಿಯಲ್ಲಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಸದ್ಯ, ಆರೋಪಿಗಳು ನಾಗ್ಪುರ ಪೊಲೀಸರ ವಶದಲ್ಲಿದ್ದು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ನಂತರ ಬೆಂಗಳೂರು ಪೊಲೀಸರು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲಿದ್ದಾರೆ. [ಜಗದೀಶ್ ಹತ್ಯೆಯಾದದ್ದು ಹೇಗೆ?]
ಪೊಲೀಸರ ತಂಡ ನಾಗ್ಪುರಕ್ಕೆ : ಬೆಂಗಳೂರು ಗ್ರಾಮಾಂತರ ಎಸ್ಪಿ ರಮೇಶ್ ಬಾನೋತ್, ನೆಲಮಂಗಲ ಇನ್ಸ್ಪೆಕ್ಟರ್ ಪರಮೇಶ್ವರ್ ನೇತೃತ್ವದ ರಾಜ್ಯದ ಪೊಲೀಸರ ತಂಡ ಇಂದು ಬೆಳಗ್ಗೆ 4 ಗಂಟೆಯ ವಿಮಾನದಲ್ಲಿ ನಾಗ್ಪುರಕ್ಕೆ ತೆರಳಿದ್ದು, ಆರೋಪಿಗಳನ್ನು ಸಂಜೆಯ ವೇಳೆಗೆ ಬೆಂಗಳೂರಿಗೆ ಕರೆತರುವ ಸಾಧ್ಯತೆ ಇದೆ.
ಹರೀಶ್ ಬಾಬು ಮತ್ತು ಮಧು ಅವರ ವಿರುದ್ಧ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಶುಕ್ರವಾರ ನೆಲಮಂಗಲ ಬಳಿ ಇವರನ್ನು ಹಿಡಿಯಲು ಎಸ್ಐ ಜಗದೀಶ್ ಪ್ರಯತ್ನ ನಡೆಸಿದಾಗ, ಡ್ರಾಗರ್ ನಿಂದ ಇರಿದು ಅವರನ್ನು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಆರೋಪಿಗಳ ಪತ್ತೆಗಾಗಿ ಐದು ತಂಡಗಳನ್ನು ರಚನೆ ಮಾಡಲಾಗಿತ್ತು.












Click it and Unblock the Notifications