ಪಿಎಸ್ಐ ನೇಮಕಾತಿ ಅಕ್ರಮ: 6 ಮಂದಿ ಆರೋಪಿಗಳನ್ನು ಬಂಧಿಸಿದ ಸಿಐಡಿ
ಬೆಂಗಳೂರು, ಏ. 17: ಪಿಎಸ್ಐ ನೇಮಕಾತಿ ಅಕ್ರಮದ ಮೂಲ ಜಾಲವನ್ನು ಬೇಧಿಸುವಲ್ಲಿ ಸಿಐಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪಿಎಸ್ಐ ಪರೀಕ್ಷಾ ಅಕ್ರಮ ಸಂಬಂಧ ಮೂವರು PSI ಅಭ್ಯರ್ಥಿಗಳು ಸೇರಿದಂತೆ ಆರು ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ರಾಯಚೂರು ಮೂಲದ ಕೆ. ಪ್ರವೀಣ್ ಕುಮಾರ್, ಕಲಬುರ್ಗಿಯ ಅರುಣ್ ಪಾಟೀಲ್, ಚೇತನ್ ಹಾಗೂ ಜ್ಞಾನ ಜ್ಯೋತಿ ಇಂಗ್ಲೀಷ್ ಶಾಲೆಯ ಟೀಚರ್ ಸುಮಾ, ಸಿದ್ದಮ್ಮ, ಸಾವಿತ್ರಿಯನ್ನು ಬಂಧಿಸಿದ್ದಾರೆ. ಇದರಲ್ಲಿ ಸುಮಾ, ಸಿದ್ದಮ್ಮ ಮತ್ತು ಸಾವಿತ್ರಿ ಪರೀಕ್ಷಾ ಕೇಂದ್ರದ ಪರಿವೀಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು. ಸಿಐಡಿ ತನಿಖಾಧಿಕಾರಿ ಪ್ರಕಾಶ್ ರಾಥೋಡ್ ನೇತೃತ್ವದ ತಂಡ ಆರು ಆರೋಪಿಗಳನ್ನು ಬಂಧಿಸಿದೆ. ಕಳೆದ ಏ. 11 ರಂದು ಕೇವಲ 21 ಪ್ರಶ್ನೆಗಳಿಗೆ ಉತ್ತರಿಸಿ ನೂರಕ್ಕೆ ನೂರು ಅಂಕ ಗಳಿಸಿ ಪಿಎಸ್ಐ ಆಗಿ ನೇಮಕವಾಗಿದ್ದ ವೀರೇಶ್ನನ್ನು ಬಂಧಿಸಿದ್ದರು. ಇದೀಗ ಬಂಧಿತರ ಸಂಖ್ಯೆ ಏಳಕ್ಕೆ ಏರಿದೆ. ಇದರಲ್ಲಿ ಶಾಮೀಲಾಗಿರುವ ಮತ್ತಷ್ಟು ಅಭ್ಯರ್ಥಿಗಳನ್ನು ಬಂಧಿಸಲು ಸಿಐಡಿ ಪೊಲೀಸರು ಮುಂದಾಗಿದ್ದಾರೆ.
ಕಲಬುರ್ಗಿಯ ಜ್ಞಾನ ಜ್ಯೋತಿ ಇಂಗ್ಲೀಷ್ ಮೀಡಿಯಮ್ ಶಾಲೆ ಪಿಎಸ್ಐ ನೇಮಕಾತಿ ಪರೀಕ್ಷಾ ಕೇಂದ್ರವಾಗಿತ್ತು. ಅಭ್ಯರ್ಥಿಗಳು ಮತ್ತು ಪರೀಕ್ಷಾ ಕೇಂದ್ರದ ಪರಿವೀಕ್ಷಕರು ಒಗ್ಗೂಡಿ ಪರೀಕ್ಷೆಯಲ್ಲಿ ಅಕ್ರಮ ಎಸಗುವ ಸಂಬಂಧ ಡಿಲ್ ಕುದುರಿಸಿದ್ದಾರೆ. ಅದರಂತೆ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ತಮಗೆ ಗೊತ್ತಿರುವಷ್ಟು ಪ್ರಶ್ನೆಗಳಿಗೆ ಮಾತ್ರ ಸರಿ ಉತ್ತರ ಬರೆದಿದ್ದರೆ. ಉಳಿದ ಪ್ರಶ್ನೆಗಳನ್ನು ಬಿಟ್ಟು ಬಿಟ್ಟಿದ್ದಾರೆ. ಡೀಲಿಂಗ್ ಕುದುರಿಸಿರುವ ಅಭ್ಯರ್ಥಿಗಳ ಆನ್ಸರ್ ಬುಕ್ ಲೆಟ್ ಅನ್ನು ಪಡೆದಿರುವ ಪರೀಕ್ಷಾ ಕೇಂದ್ರದ ಸಿಬ್ಬಂದಿ ಪ್ರತ್ಯೇಕ ಕೊಠಡಿಯಲ್ಲಿ ಕೂತು ಎಲ್ಲಾ ಪ್ರಶ್ನೆಗಳಿಗೆ ಸರಿ ಉತ್ತರ ತುಂಬಿಸಿದ್ದಾರೆ.

ಸಿಐಡಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ
ಜ್ಞಾನ ಜ್ಯೋತಿ ಇಂಗ್ಲೀಷ್ ಮೀಡಿಯಮ್ ಶಾಲೆಯಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಸಿಐಡಿ ಪೊಲೀಸರು ಒಂದೆಡೆಯಿಂದ ಜಾಲಾಡುತ್ತಿದ್ದಾರೆ. ಇದೇ ಮಾದರಿಯಲ್ಲಿ ಬೇರೆ ಕಡೆ ಸಹ ಅಕ್ರಮ ಎಸಗಿರುವ ಆರೋಪ ಕೇಳಿ ಬಂದಿದ್ದು, ಈ ಅಕ್ರಮದಲ್ಲಿ ಶಾಮೀಲಾಗಿರುವವರ ಜಾಡು ಹಿಡಿದು ಸಿಐಡಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ರಾಯಚೂರಿನ ಪ್ರವೀಣ್ ಕುಮಾರ್ ಕಲಬುರ್ಗಿ ಸೆಂಟರ್ ಆಯ್ಕೆ ಮಾಡಿಕೊಂಡಿರುವುದೇ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪರೀಕ್ಷಾ ಕೇಂದ್ರ ಗೊತ್ತಾದ ಕೂಡಲೇ ವ್ಯವಹಾರ ಕುದುರಿಸಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವುದು ಸಿಐಡಿ ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ಇದೇ ರೀತಿ ಇನ್ನೂ ಹಲವು ಕೇಂದ್ರಗಳಲ್ಲಿ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ನೇಮಕಾತಿ ವಿಭಾಗ ಅನುಮಾನಸ್ಪದ ಉತ್ತರ ಪತ್ರಿಕೆಗಳ ಜಾಡು ಹಿಡಿದು ಸಿಐಡಿ ತನಿಖೆಗೆ ವಹಿಸಲಾಗುತ್ತಿದೆ.

ಮರು ಪರೀಕ್ಷೆಗೆ ಆಗ್ರಹ
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಕಂಡು ಬಂದ ಹಿನ್ನೆಲೆಯಲ್ಲಿ ಪಿಎಸ್ಐ ಆಕಾಂಕ್ಷಿಗಳು ಮರು ಪರೀಕ್ಷೆಗೆ ಆಗ್ರಹಿಸಿದ್ದಾರೆ. ಕಳೆದ ಒಂದು ವಾರದ ಹಿಂದೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ರ್ಯಾಲಿ ನಡೆಸಿದ್ದರು. ಪಿಎಸ್ಐ ನೇಮಕಾತಿ ಸಂಬಂಧ ಮರು ಪರೀಕ್ಷೆ ಮಾಡುವಂತೆ ಆಗ್ರಹಿಸಿದ್ದರು. ಆದರೆ, ಈಗಾಗಲೇ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿರುವ ವಿದ್ಯಾರ್ಥಿಗಳು ಪರೀಕ್ಷೆ ಬೇಡ. ಅಕ್ರಮ ಮಾಡಿರುವ ಅಭ್ಯರ್ಥಿಗಳನ್ನು ಬಂಧಿಸಲಿ. ಮತ್ತೊಮ್ಮೆ ಪರೀಕ್ಷೆ ಮಾಡುವುದರಿಂದ ನಮಗೆ ಅನ್ಯಾಯವಾಗಲಿದೆ ಎಂದು ನೇಮಕಾತಿಗೊಂಡಿರುವ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ. ಅಂತೂ ಯಾರೂ ಮಾಡಿದ ತಪ್ಪಿಗೆ ಇದೀಗ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾದವರು ಕಣ್ಣೀರು ಹಾಕುವಂತಿದೆ.

ಪ್ರಕರಣ ಮೂಲ ಪತ್ತೆ
ಈಗಾಗಲೇ ಸಿಐಡಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಪಿಎಸ್ಐ ಅಭ್ಯರ್ಥಿ ವೀರೇಶ್ ಉತ್ತರ ಹಾಳೆ ಒಎಂಆರ್ ಶೀಟ್ನಲ್ಲಿ ಕೇವಲ 21 ಪ್ರಶ್ನೆಗಳಿಗೆ ಮಾತ್ರ ಸರಿ ಉತ್ತರ ಬರೆದಿದ್ದ. ಉಳಿದಿದ್ದನ್ನು ಹಾಗೆಯೇ ಬಿಟ್ಟಿದ್ದ. ಈತನ ಉತ್ತರ ಪತ್ರಿಕೆಯನ್ನು ಪ್ರತ್ಯೇಕ ಕೊಠಡಿಗೆ ತೆಗೆದುಕೊಂಡು ಹೋಗಿದ್ದು ಪರೀಕ್ಷಾ ಕೇಂದ್ರದ ಸಿಬ್ಬಂದಿ ಎಲ್ಲಾ ಪ್ರಶ್ನೆಗಳಿಗೆ ಸರಿ ಉತ್ತರ ಬರೆದು ಅದನ್ನು ರವಾನಿಸಿದ್ದರು. ಕೇವಲ 21 ಪ್ರಶ್ನೆಗಳಿಗೆ ಉತ್ತರಿಸಿದ್ದ ವೀರೇಶ್ಗೆ ನೂರಕ್ಕೆ ನೂರು ಅಂಕ ಬಂದು ಅಗ್ರಗಣ್ಯ ರ್ಯಾಂಕ್ ಗಳಿಸಿದ್ದನು. ಈತನೇ ಪರೀಕ್ಷಾ ಅಕ್ರಮದ ಮೂಲ ವ್ಯಕ್ತಿಯಾಗಿದ್ದಾನೆ.

545 ಪಿಎಸ್ಐ ಸಿವಿಲ್ ನೇಮಕಾತಿ
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಕೂಗು ಬಂದ ಹಿನ್ನೆಲೆಯಲ್ಲಿ ವೀರೇಶ್ನ ಉತ್ತರ ಹಾಳೆ ಮತ್ತು ಆತನ ಒಎಂಅರ್ ಶೀಟ್ ಪರಿಶೀಲನೆ ನಡೆಸಿದಾಗ ಈ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿತ್ತು. ಇದೀಗ ಜ್ಞಾನ ಜ್ಯೋತಿ ಇಂಗ್ಲೀಷ್ ಮೀಡಿಯಮ್ ಶಾಲೆಯಲ್ಲಿ ನಡೆದಿರುವ ಪರೀಕ್ಷೆ ಬಗ್ಗೆ ಅನುಮಾನ ಮೂಡಿದ್ದು, ಈ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದು ಆಯ್ಕೆಯಾದವರ ಉತ್ತರ ಪತ್ರಿಕೆ ಮೂಲ ಹಿಡಿದು ತನಿಖೆ ನಡೆಸಲಾಗುತ್ತಿದೆ. ಇದರಲ್ಲಿ ಶಾಮೀಲಾಗಿರುವ ಇನ್ನಷ್ಟು ಅಭ್ಯರ್ಥಿಗಳು ಬಂಧನಕ್ಕೆ ಒಳಗಾಗುವ ಸಾಧ್ಯತೆಯಿದೆ. ಕಳೆದ ಅಕ್ಟೋಬರ್ನಲ್ಲಿ ಪಿಎಸ್ಐ ನೇಮಕಾತಿ ಸಂಬಂಧ ಪರೀಕ್ಷೆ ನಡೆದಿತ್ತು. 545 ಪಿಎಸ್ಐ ಸಿವಿಲ್ ನೇಮಕಾತಿಗಾಗಿ ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದರು.












Click it and Unblock the Notifications