ಸಿದ್ದು ಶಾದಿಭಾಗ್ಯಕ್ಕೆ ಯಡಿಯೂರಪ್ಪ ತೀವ್ರ ಖಂಡನೆ
ಕೋಲಾರ, ಅ. 30: ಬಜೆಟ್ಟಿನಲ್ಲಿ ಘೋಷಿಸಿದ್ದಂತೆ ಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ಬಿದಾಯಿ ಎಂಬ ವಿವಾಹ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸುತ್ತಿದ್ದಂತೆ ಭಾರಿ ವ್ಯಾಪಕ ಪ್ರತಿಭಟನೆಗಳು ಎದುರಾಗಿವೆ.
ಮದುವೆಯಾಗುವ ಬಡ ಮುಸ್ಲಿಂ ಹೆಣ್ಣುಮಕ್ಕಳಿಗೆ 50 ಸಾವಿರ ರೂ. ಆರ್ಥಿಕ ನೆರವು ನೀಡುವುದು ಚುನಾವಣೆಯ ತಂತ್ರವಾಗಿದೆ. ಬಡ ಜನತೆ ಇನ್ನೂ ಇದ್ದಾರೆ. ಅವರಿಗೂ ಇಂತಹುದೇ ನೆರವು ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯ ಮಾಡಿರುವುದರ ಬೆನ್ನಿಗೆ ಶಾದಿಭಾಗ್ಯವು ಶೀಘ್ರವೇ ಎಲ್ಲಾ ಬಡವರಿಗೂ ದೊರೆಯಲಿದೆ ಎಂದು ಸಿಎಂ ಸಿದ್ದು ಭರವಸೆ ನೀಡಿದ್ದಾರೆ.

ಈಗ ಪ್ರಕಟವಾಗಿರುವುದು ಪ್ರಾಯೋಗಿಕ. ಶಾದಿಭಾಗ್ಯ ಯೋಜನೆಯು ಮುಂದಿನ ದಿನಗಳಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳ ಎಲ್ಲಾ ಬಡ ಕುಟುಂಬದವರಿಗೂ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ತಾಲೂಕಿನ ನರಸಾಪುರ ಗ್ರಾಮಕ್ಕೆ ಸ್ಕಾನಿಯಾ ಕಂಪನಿಯ ಹೊಸ ವಾಹನ ಬಿಡುಗಡೆಗೆ ಆಗಮಿಸಿದ್ದ ಅವರು, ಶಾದಿಭಾಗ್ಯ ಯೋಜನೆಯ ಬಗ್ಗೆ ಇರುವ ಗೊಂದಲವನ್ನು ನಿವಾರಿಸುವ ಪ್ರಯತ್ನ ಮಾಡಿದರು.
ಈ ಮಧ್ಯೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ಜಾರಿಗೊಳಿಸುತ್ತಿರುವ 'ಬಿದಾಯಿ' ಶಾದಿಭಾಗ್ಯ ಯೋಜನೆ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಎಲ್ಲ ಜಾತಿ/ಸಮುದಾಯಗಳಲ್ಲೂ ಬಡವರಿದ್ದಾರೆ. ಹಾಗಾಗಿ ಯೋಜನೆಯನ್ನು ಅವರೆಲ್ಲರಿಗೂ ವಿಸ್ತರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.












Click it and Unblock the Notifications