ಎಂ.ಎಂ.ಕಲಬುರ್ಗಿ ಹತ್ಯೆ : ಒಂದು ವಾರದ ತನಿಖೆಯ ಪ್ರಗತಿ ಏನು?
ಬೆಂಗಳೂರು, ಸೆಪ್ಟೆಂಬರ್, 07 : ಹಿರಿಯ ಸಂಶೋಧಕ, ಸಾಹಿತಿ ಎಂ.ಎಂ.ಕಲಬುರ್ಗಿ ಅವರು ಹಂತಕರ ಗುಂಡಿಗೆ ಬಲಿಯಾಗಿ ಒಂದು ವಾರ ಕಳೆದಿದೆ. ಆದರೆ, ಸಿಐಡಿ ಪೊಲೀಸರ ತನಿಖೆಯಲ್ಲಿ ಮಹತ್ವದ ಸುಳಿವುಗಳು ಪತ್ತೆಯಾಗಿಲ್ಲ. ಒಂದು ತಂಡ ಮಹಾರಾಷ್ಟ್ರದಲ್ಲಿ ತನಿಖೆಯನ್ನು ನಡೆಸುತ್ತಿದೆ.
ಎಂ.ಎಂ.ಕಲಬುರ್ಗಿ ಅವರ ಹತ್ಯೆಯಾದ ಮರುದಿನವೇ ಕರ್ನಾಟಕ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿದೆ. ಆ.30ರ ಭಾನುವಾರ ಧಾರವಾಡದ ಕಲ್ಯಾಣ ನಗರದ ನಿವಾಸದಲ್ಲಿ ಎಂ.ಎಂ.ಕಲಬುರ್ಗಿ ಅವರ ಹತ್ಯೆ ನಡೆದಿತ್ತು. ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ಪತ್ರ ಬರೆಯಲು ಸರ್ಕಾರ ನಿರ್ಧರಿಸಿದೆ.[ಕಲಬುರ್ಗಿ ಹತ್ಯೆ ಪ್ರಕರಣ ಸಿಐಡಿ ತನಿಖೆಗೆ]

ಸಿಐಡಿ ಪೊಲೀಸರು 4 ತಂಡಗಳನ್ನು ರಚಿಸಿಕೊಂಡು ಹತ್ಯೆ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ. ಆದರೆ, ಹತ್ಯೆಗೆ ಕಾರಣವೇನಿರಬಹುದು? ಎಂಬ ಬಗ್ಗೆ ಖಚಿತವಾದ ಮಾಹಿತಿ ಲಭ್ಯವಾಗಿಲ್ಲ. ಹಂತಕರು ಮಹಾರಾಷ್ಟ್ರಕ್ಕೆ ಪರಾರಿಯಾಗಿರಬಹುದು ಎಂಬ ಶಂಕೆಯ ಹಿನ್ನಲೆಯಲ್ಲಿ ಒಂದು ತಂಡ ಅಲ್ಲಿ ತನಿಖೆ ನಡೆಸುತ್ತಿದೆ. [ಕಲಬುರ್ಗಿ ಹತ್ಯೆ ಮಹತ್ವದ ಸುಳಿವು ಪತ್ತೆ]
ದೃಶ್ಯಾವಳಿಗಳು ಸ್ಪಷ್ಟವಾಗಿಲ್ಲ : ಎಂ.ಎಂ.ಕಲಬುರ್ಗಿ ಅವರ ನಿವಾಸದಿಂದ ಸಿಐಡಿ ಪೊಲೀಸರು ವಶಪಡಿಸಿಕೊಂಡ ಸಿಸಿಟಿವಿ ದೃಶ್ಯಾವಳಿಗಳು ಸ್ಪಷ್ಟವಾಗಿಲ್ಲ. ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಕುಳಿತಿರುವವರಿಗೆ ಸೂಚನೆ ನೀಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ, ದುಷ್ಕರ್ಮಿಗಳು ಪರಾರಿಯಾಗಿರುವ ಬೈಕ್ನ ನಂಬರ್ ಸಹ ಅಸ್ಪಷ್ಟವಾಗಿದೆ. [ಕಲಬುರ್ಗಿ ಹತ್ಯೆ, ಮಂಗಳೂರಲ್ಲಿ ಒಬ್ಬರ ವಿಚಾರಣೆ]
ಕಲಬುರ್ಗಿ ಅವರ ಹತ್ಯೆಯಾದ ಬಳಿಕ ಸಾಮಾಜಿಕ ಜಾಲ ತಾಣಗಳಲ್ಲಿ ಹತ್ಯೆಯನ್ನು ಸಮರ್ಥಿಸಿಕೊಂಡು ಬಹರಗಳನ್ನು ಹಾಕಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆದರೆ, ಇಬ್ಬರ ಬಳಿಯೂ ಯಾವ ಮಾಹಿತಿ ಸಿಕ್ಕಿಲ್ಲ. ಇಂತಹ ಬರಹ ಹಾಕದಂತೆ ಎಚ್ಚರಿಕೆ ನೀಡಿ ಅವರನ್ನು ಬಿಡುಗಡೆ ಮಾಡಲಾಗಿದೆ.
ಪ್ರಶಸ್ತಿ ಮರಳಿಸಲಿದ್ದಾರೆ ಚಂಪಾ : ಖ್ಯಾತ ಸಾಹಿತಿ ಚಂದ್ರಶೇಖರ ಪಾಟೀಲ್ ಅವರು ಕಲಬುರ್ಗಿ ಅವರ ಹತ್ಯೆಯನ್ನು ಖಂಡಿಸಿ 2009ರಲ್ಲಿ ನೀಡಲಾಗಿದ್ದ ಪಂಪ ಪ್ರಶಸ್ತಿಯನ್ನು ವಾಪಸ್ ನೀಡಲು ನಿರ್ಧರಿಸಿದ್ದಾರೆ. ಆಪ್ತ ಸ್ನೇಹಿತನ ಹತ್ಯೆಯ ಬಳಿಕ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಚಂಪಾ ಆತಂಕ ವ್ಯಕ್ತಪಡಿಸಿದ್ದಾರೆ.
ದಾಬೋಲ್ಕರ್, ಪನ್ಸಾರೆ ಮತ್ತು ಎಂ.ಎಂ.ಕಲಬುರ್ಗಿ ಅವರ ಕುಟುಂಬದವರು ಒಟ್ಟಾಗಿ ತಮಗೆ ನ್ಯಾಯ ಕೊಡಿಸುವಂತೆ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಿದ್ದಾರೆ. ಒಂದು ವಾರಗಳ ಕಾಲ ಪೊಲೀಸರ ತನಿಖೆಯನ್ನು ನೋಡಿಕೊಂಡು ನಂತರ ಮುಂದಿನ ತೀರ್ಮಾನ ಕೈಗೊಳ್ಳಲು ಕುಟುಂಬದವರು ನಿರ್ಧರಿಸಿದ್ದಾರೆ.












Click it and Unblock the Notifications