ಸನಾತನ ಧರ್ಮ ಕುರಿತು ಬಿಎಲ್ ಸಂತೋಷ್-ಪ್ರಿಯಾಂಕ್ ಖರ್ಗೆ ಟ್ವೀಟ್ ವಾರ್: ತೀವ್ರ ಸ್ವರೂಪ ಪಡೆದ ಚರ್ಚೆ
ಬೆಂಗಳೂರು, ಸೆಪ್ಟೆಂಬರ್ 05: ಸನಾತನ ಧರ್ಮ ಕುರಿತ ಚರ್ಚೆಗಳು ತೀವ್ರ ಸ್ವರೂಪ ಪಡೆದುಕೊಂಡಿವೆ. ಈ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ( ಸಂಘಟನೆ ) ಬಿಎಲ್ ಸಂತೋಷ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಟ್ವೀಟ್ ವಾರ್ ಶುರುವಾಗಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ನಿರ್ಮೂಲನೆ ಕುರಿತು ನೀಡಿರುವ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಬೆಂಬಲ ವ್ಯಕ್ತಪಡಿಸಿದ್ದರು. ಮಾನವನ ಘನತೆಯನ್ನು ಎತ್ತಿಹಿಡಿಯದ, ಸಮಾಜದಲ್ಲಿ ಸಮಾನತೆಯನ್ನು ಸಾರದ ಯಾವುದೇ ಧರ್ಮ ಧರ್ಮವೇ ಅಲ್ಲವೆಂದು ಹೇಳಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿರುವ ಬಿಎಲ್ ಸಂತೋಷ್ ಹೊಟ್ಟೆಯಲ್ಲಿ ಹುಣ್ಣಾದರೆ ತಲೆಯನ್ನೇ ಕಡಿಯಬಾರದು ಎಂದು ಹೇಳಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಪ್ರಿಯಾಂಕ್ ಖರ್ಗೆ ವಿಶ್ವಗುರು ಬಸವಣ್ಣನವರ ವಚನಗಳ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.
'ದಯವಿಲ್ಲದ ಧರ್ಮವಾವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ..'
ಎಂಬ ವಚನದ ಮೂಲಕ ಟ್ವೀಟ್ ಆರಂಭಿಸಿರುವ ಪ್ರಿಯಾಂಕ್ ಖರ್ಗೆ, 'ತುಂಬಾ ಖುಷಿಯಾಯಿತು ಬಿಎಲ್ ಸಂತೋಷ್ ಅವರೇ, ಚಿಕಿತ್ಸೆ ಅಗತ್ಯವಿರುವ ಸೋಂಕು ಇದೆ ಎಂದು ನೀವೇ ಒಪ್ಪಿಕೊಂಡಿದ್ದೀರಿ' ಎಂದು ಹೇಳಿದ್ದಾರೆ.
'ಸಾವಿರಾರು ವರ್ಷಗಳಿಂದ ಅನೇಕ ಸೋಂಕುಗಳು ಇವೆ ಮತ್ತು ಇಂದಿಗೂ ಪ್ರಚಲಿತದಲ್ಲಿವೆ. ಅದು ಮನುಷ್ಯರ ನಡುವೆ ತಾರತಮ್ಯವನ್ನುಂಟು ಮಾಡುತ್ತದೆ. ಅದು ಮಾನವನ ಘನತೆಯನ್ನು ನಿರಾಕರಿಸುತ್ತದೆ' ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

'ನಾನು ನಿಮ್ಮಷ್ಟು ಬುದ್ಧಿವಂತನಲ್ಲ. ಆದರೆ ದಯವಿಟ್ಟು ನನಗೆ ಜ್ಞಾನೋದಯ ಮಾಡಿಸಿಕೊಡಿ. ಸಮಾಜದಲ್ಲಿ ಈ ನಿಯಮಗಳನ್ನು ಯಾರು ಹಾಕಿದರು? ಯಾರನ್ನಾದರೂ ಇನ್ನೊಬ್ಬರಿಗಿಂತ ಹೆಚ್ಚು ನೀತಿವಂತರನ್ನಾಗಿ ಮಾಡುವುದು ಯಾವುದು? ಜಾತಿಯ ಆಧಾರದ ಮೇಲೆ ನಮ್ಮನ್ನು ವಿಭಜಿಸಿದವರು ಯಾರು? ಕೆಲವು ಜನರು ಏಕೆ ಅಸ್ಪೃಶ್ಯರಾಗಿದ್ದಾರೆ? ಅವರು ಈಗಲೂ ದೇವಸ್ಥಾನಗಳನ್ನು ಏಕೆ ಪ್ರವೇಶಿಸಬಾರದು? ಮಹಿಳೆಯರ ಕೀಳು ಸ್ಥಿತಿಯನ್ನು ಒತ್ತಿಹೇಳುವ ಈ ಆಚರಣೆಗಳನ್ನು ಯಾರು ಹೇರಿದ್ದಾರೆ?' ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಅಸಮಾನ ಮತ್ತು ದಮನಕಾರಿಯಾದ ಜಾತಿ ಆಧಾರಿತ ಸಾಮಾಜಿಕ ವ್ಯವಸ್ಥೆಯಲ್ಲಿ ಸಿಕ್ಕು ಯಾರು ನರಳುತ್ತಿದ್ದಾರೆ? ಎಂದು ಕೇಳಿದ್ದಾರೆ.
ನಾವು ಯಾರ ತಲೆ ಕಡಿಯುವ ಉದ್ದೇಶ ಹೊಂದಿಲ್ಲ. ಆದರೆ, ಎಲ್ಲರಿಗೂ ಘನತೆಯೊಂದಿಗೆ ಬದುಕುವ ಹಕ್ಕಿದೆ. ಈ ಸೋಂಕನ್ನು ಗುಣಪಡಿಸುವ ಅಗತ್ಯವಿದೆ. ಈ ಎಲ್ಲಾ ಸೋಂಕುಗಳಿಗೆ ಒಂದೇ ಪರಿಹಾರವೆಂದರೆ ನೀವು ವಿರೋಧ ವ್ಯಕ್ತಪಡಿಸುತ್ತಿರುವ ಸಂವಿಧಾನ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನೀವು ಕರ್ನಾಟಕದವರು. ದಯವಿಟ್ಟು ಗುರು ಬಸವಣ್ಣನವರ ಉಪದೇಶಗಳನ್ನು ಹರಡಿ. ಇದು ನಮಗೆ ಹೆಚ್ಚು ಸಮಾನ ಸಮಾಜವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಖರ್ಗೆ ತಿಳಿಸಿದ್ದಾರೆ.
ಇವನಾರವ, ಇವನಾರವ, ಇವನಾರವ ನೆಂದೆನಿಸದಿರಯ್ಯಾ,
ಇವ ನಮ್ಮವ, ಇವ ನಮ್ಮವ, ಇವ ನಮ್ಮವ ನೆಂದೆನಿಸಯ್ಯಾ
ಕೂಡಲ ಸಂಗಮದೇವ ನಿಮ್ಮ ಮಹಾ ಮನೆಯ ಮಗನೆಂದೆನಿಸಯ್ಯಾ ಎಂಬ ವಚನದೊಂದಿಗೆ ಖರ್ಗೆ ತಮ್ಮ ಟ್ವೀಟ್ ಅನ್ನು ಮುಗಿಸಿದ್ದಾರೆ.












Click it and Unblock the Notifications