ಕರ್ನಾಟಕದಲ್ಲಿ ಎಷ್ಟು ಸಿಎಂಗಳಿದ್ದಾರೆ ಗೊತ್ತಾ? ನರೇಂದ್ರ ಮೋದಿ ಕೊಟ್ಟ ಲೆಕ್ಕ ಇಲ್ಲಿದೆ
ಶಿವಮೊಗ್ಗ, ಮಾರ್ಚ್ 18: ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗಿದೆ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಕೋಟೆಯಿಂದಲೇ ಚುನಾವಣೆ ರಣಕಹಳೆ ಮೊಳಗಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಇದೀಗ ರಾಜಾಹುಲಿ ಭದ್ರಕೋಟೆ ಶಿವಮೊಗ್ಗದಲ್ಲಿ ಮೋದಿ ಬೃಹತ್ ಸಮಾವೇಶವನ್ನ ನಡೆಸಿದ್ದಾರೆ. ಈ ವೇಳೆ ಕರ್ನಾಟಕದಲ್ಲಿರುವ ಮುಖ್ಯಮಂತ್ರಿಗಳ ಕುರಿತು ಮೋದಿ ಲೆಕ್ಕಾ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸೋಮವಾರ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ,ಕರ್ನಾಟಕದಲ್ಲಿ ಸಿಎಂ, ಭವಿಷ್ಯದ ಸಿಎಂ, ಸೂಪರ್ ಸಿಎಂ, ಶ್ಯಾಡೊ ಸಿಎಂ ಜೊತೆಗೆ ದೆಹಲಿಯ ಕಲೆಕ್ಷನ್ ಸಿಎಂ ಇದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಇಲ್ಲಿನ ಜನರು ಕಾಂಗ್ರೆಸ್ನ ಸಾಲವನ್ನು ತೀರಿಸುವ ಕೆಲಸ ಮಾಡಬೇಕಾಗಿದೆ. ಕರ್ನಾಟಕದ ಜನರಲ್ಲಿ ಕಾಂಗ್ರೆಸ್ ಸರಕಾರದ ಬಗ್ಗೆ ಸಿಟ್ಟಿದೆ. ಈ ಸಿಟ್ಟಿನಿಂದ ಬಿಜೆಪಿ- ಎನ್ಡಿಎ ಸಂಸದರು ಎಲ್ಲ ಸೀಟುಗಳಲ್ಲೂ ಗೆಲ್ಲುವ ವಿಶ್ವಾಸವಿದೆ ಎಂದು ನರೇಂದ್ರ ಮೋದಿಯವರು ತಿಳಿಸಿದರು.

ದೇಶಾದ್ಯಂತ 400ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಎನ್.ಡಿ.ಎ. ಗೆಲುವಿನಲ್ಲಿ ಕರ್ನಾಟಕದ ಕೊಡುಗೆ ದೊಡ್ಡದಿರಬೇಕು. ಪ್ರತಿ ಪೋಲಿಂಗ್ ಬೂತಿನಲ್ಲಿ ಕಮಲ ಅರಳುವಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು. ಭ್ರಷ್ಟಾಚಾರ, ತುಷ್ಟೀಕರಣದ ನೀತಿಯನ್ನು ತನ್ನಾಗಿಸಿದ ಇಂಡಿ ಒಕ್ಕೂಟವು ಬಿಜೆಪಿ ಜನಬೆಂಬಲ ಗಮನಿಸಿ ನಿದ್ದೆಗೆಡುವ ಸ್ಥಿತಿ ಬಂದಿದೆ. ಯಡಿಯೂರಪ್ಪ ಅವರ ತಪೋಭೂಮಿ ಇದು. ಕರ್ನಾಟಕದ 28ರಲ್ಲಿ 28 ಸೀಟುಗಳನ್ನೂ ಬಿಜೆಪಿ- ಎನ್ಡಿಎಗೆ ಗೆಲ್ಲಿಸಿಕೊಡಿ ಎಂದರು.
ಕಾಂಗ್ರೆಸ್ ಸುಳ್ಳುಗಳ ಮೂಲಕ ಅಧಿಕಾರಕ್ಕೆ ಬಂತು. ಬಳಿಕ ಕೇಂದ್ರ, ಮೋದಿಯವರ ಮೇಲೆ ಆರೋಪ ಹೊರಿಸುತ್ತಿದೆ. ಕಾಂಗ್ರೆಸ್ ಪಕ್ಷ ಜನರ ಅಭಿವೃದ್ಧಿಗಾಗಿ ಕೆಲಸ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷ ಜನರನ್ನು ಲೂಟಿ ಮಾಡಿ ಕಿಸೆ ಭರ್ತಿ ಮಾಡುವ ಕೆಲಸ ಮಾಡುತ್ತದೆ ಎಂದು ಆರೋಪಿಸಿದರು. ಕಾಂಗ್ರೆಸ್ಸಿಗರು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ರಾಜ್ಯದ ಖಜಾನೆ ಖಾಲಿ ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಅಭಿವೃದ್ಧಿ, ಸಮರ್ಥ ಭಾರತ ಬಿಜೆಪಿ ಆಶಯ. ಕಾಂಗ್ರೆಸ್ ಬಳಿ ವಿಕಾಸದ ಕಾರ್ಯಸೂಚಿ ಇಲ್ಲ. ಕಾಂಗ್ರೆಸ್ ಪಕ್ಷ ಸುಳ್ಳು ಹೇಳುವುದನ್ನೇ ತನ್ನ ಕೆಲಸವಾಗಿ ಮಾಡಿಕೊಂಡಿದೆ. ಎಲ್ಲೇ ಹೋದರೂ ಸುಳ್ಳು ಹೇಳುವುದು, ಸಿಕ್ಕಿ ಬಿದ್ದಾಗ ಹೊಸ ಸುಳ್ಳು ಹೇಳುವುದು ಅವರ ಕಾಯಕ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷವು ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡಿದರೆ, ನಾವು ಬಡವರ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ವಿಕಸಿತ ಭಾರತಕ್ಕಾಗಿ, ಅಭಿವೃದ್ಧಿ ಹೊಂದಿದ ಕರ್ನಾಟಕಕ್ಕಾಗಿ ಆತಂಕವಾದ ನಿಲ್ಲಿಸಲು, ರೈತರ ಸಮೃದ್ಧಿ, ಯುವಜನರಿಗೆ ಹೊಸ ಅವಕಾಶಕ್ಕಾಗಿ 'ಈ ಬಾರಿ 400 ಮೀರಿ' ಸ್ಥಾನ ಗೆಲ್ಲಿಸಿಕೊಡಿ ಎಂದು ವಿನಂತಿಸಿದರು.

ನಾರಿ ಶಕ್ತಿಗೆ ನಾವು ಗರಿಷ್ಠ ಗೌರವ, ಅವಕಾಶ ಕೊಟ್ಟಿದ್ದೇವೆ ಎಂದ ಅವರು, ನಾರಿ ಶಕ್ತಿ ನನಗೆ ಮತದಾರರಾಗಿ ಕಾಣುವುದಿಲ್ಲ; ಅವರು ದೇಶದ ಸುರಕ್ಷಾ ಕವಚ ಎಂದು ಬಣ್ಣಿಸಿದರು. ಕರ್ನಾಟಕದ ಮೂಲೆಮೂಲೆಯಲ್ಲಿ ಬಿಜೆಪಿಗೆ ಅಪಾರ ಜನಬೆಂಬಲ ಸಿಗುತ್ತಿದೆ ಎಂದು ಅವರು ತಿಳಿಸಿದರು. ಕುವೆಂಪು ಅವರೂ ಕರ್ನಾಟಕವನ್ನು ಇದೇ ನಿಟ್ಟಿನಲ್ಲಿ ನೋಡಿದ್ದರು. ಇಂಡಿ ಒಕ್ಕೂಟವು ನಾರಿ ಶಕ್ತಿಯನ್ನು ಅವಮಾನ ಮಾಡುತ್ತಿದೆ ಎಂದು ಟೀಕಿಸಿದರು.
ಇಂಡಿ ಒಕ್ಕೂಟ, ಕಾಂಗ್ರೆಸ್ ಮಹಿಳಾ ಶಕ್ತಿಯ ಅವಮಾನ ಮಾಡುತ್ತಿದೆ. ಇದಕ್ಕೆ ತಕ್ಕ ಉತ್ತರವನ್ನು ನಾರಿ ಶಕ್ತಿ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷವು ವಿಭಜಿಸಿ ಗೆಲ್ಲುವ ಮನಸ್ಥಿತಿ ಹೊಂದಿದೆ. ದೇಶ ವಿಭಜನೆ, ಜಾತಿ ವಿಭಜನೆ, ಧರ್ಮದ ಮೂಲಕ ವಿಭಜನೆ ಮಾಡಿದ ಕಾಂಗ್ರೆಸ್ ಪಕ್ಷವು ವಿಭಜಿಸುವ ತನ್ನ ಮನಸ್ಥಿತಿಯನ್ನೇ ಮುಂದುವರೆಸಿದೆ. ಕರ್ನಾಟಕದ ಕಾಂಗ್ರೆಸ್ ಸಂಸದರು ದೇಶ ವಿಭಜನೆಯ ಮಾತನ್ನಾಡಿದ್ದಾರೆ. ಅಂಥ ಸಂಸದರನ್ನು ವಜಾ ಮಾಡುವ ಬದಲು ಅವರನ್ನು ಬಚಾವ್ ಮಾಡಲು ಕಾಂಗ್ರೆಸ್ ಮುಂದಾಯಿತು. ಇದಕ್ಕೆ ತಕ್ಕ ಪಾಠವನ್ನು ಜನತೆ ನೀಡುವುದು ಖಚಿತ ಎಂದರು.
ಆಯುಷ್ಮಾನ್ ಭಾರತ್ ಯೋಜನೆ ಜಾರಿ, ಕರ್ನಾಟಕದ 40 ಲಕ್ಷಕ್ಕೂ ಹೆಚ್ಚು ಉಚಿತ ಗ್ಯಾಸ್ ಸಿಲಿಂಡರ್ ನೀಡಿಕೆ ಸೇರಿ ಲಕ್ಷಗಟ್ಟಲೆ ಜನರಿಗೆ ಪ್ರಯೋಜನ ಸಿಗುತ್ತಿದೆ. ಎಸ್ಸಿ, ಎಸ್ಟಿ ಜನರ ಸಶಕ್ತೀಕರಣದ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ್ದೇವೆ ಎಂದು ತಿಳಿಸಿದರು. ಎಲ್ಲ ವರ್ಗದ ಜನರಿಗಾಗಿ ಬಿಜೆಪಿ ಶ್ರಮಿಸುತ್ತಿದೆ ಎಂದು ಹೇಳಿದರು. ಭಾರತ ಎಂದರೆ ಆಧುನಿಕತೆ ಎಂಬ ದೃಷ್ಟಿಕೋನ ವಿಶ್ವದಾದ್ಯಂತ ಬಂದಿದೆ. ಇದೇ ವಿಕಾಸವಾದದ ಕಡೆ ಬಿಜೆಪಿ ಸರಕಾರ ಗಮನ ಕೊಟ್ಟಿದೆ ಎಂದು ಹೇಳಿದರು.












Click it and Unblock the Notifications