ಮೂಢನಂಬಿಕೆ ಪ್ರತಿಬಂಧಕ ಮಸೂದೆ ಮಂಡನೆ ಶತಸಿದ್ಧ
ತುಮಕೂರು, ನ.10: ಯಾರು ಎಷ್ಟೇ ವಿರೋಧ, ಪ್ರತಿಭಟನೆ ಮಾಡಲಿ ಬೆಳಗಾವಿ ಅಧಿವೇಶನದಲ್ಲಿ ಮೂಢನಂಬಿಕೆ ನಿಷೇಧ ಮಸೂದೆ ಮಂಡನೆ ಮಾಡುವುದಾಗಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಖಡಕ್ಕಾಗಿ ಹೇಳಿದ್ದಾರೆ.
ರಾಜ್ಯ ಸರ್ಕಾರದ ಉದ್ದೇಶಿತ ಮೂಢನಂಬಿಕೆ ಪ್ರತಿಬಂಧಕ ಕರಡು ವಿಧೇಯಕಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ವಿಧೇಯಕ ಕರಡು ಪ್ರತಿ ಸಿದ್ಧಪಡಿಸಿದ ತಂಡದ ತುಂಬ ಎಡಪಂಥೀಯರೇ ತುಂಬಿಕೊಂಡಿದ್ದಾರೆ ಎಂಬ ಆರೋಪಗಳಿವೆ. ಈ ಕಾನೂನು ಜಾರಿಗೆ ತಂದರೆ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಕ್ರಾಂತಿಯಾಗುತ್ತದೆ ಎಂದು ಬಿಜೆಪಿ, ಕೆಜೆಪಿ ಮುಖಂಡರು ತೊಟೆ ತಟ್ಟಿ ಪಂಥಾಹ್ವಾನ ನೀಡಿದ್ದಾರೆ. ಇದರ ನಡುವೆ ಕಾನೂನು ಸಚಿವ ಜಯಚಂದ್ರ ಅವರು ಮಸೂದೆ ಮಂಡನೆ ಶತಃಸಿದ್ಧ ಎಂದಿದ್ದಾರೆ.
ತುಮಕೂರಿನಲ್ಲಿ ಭಾನುವಾರ(ನ.10) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಟಿ.ಬಿ.ಜಯಚಂದ್ರ, ವುದೇ ಜಾತಿ, ಧರ್ಮ, ಸಮುದಾಯದ ಭಾವನೆಗಳಿಗೆ ಅಗೌರವ ಆಗದ ರೀತಿಯಲ್ಲಿ ಮತ್ತು ಸಮಾಜದಲ್ಲಿ ಬೇರೂರಿರುವ ಕೆಲವು ಅನಿಷ್ಟ ಪದ್ಧತಿಗಳನ್ನು ತೆಗೆದುಹಾಕಲು ಮಸೂದೆ ಜಾರಿಗೆ ತರುತ್ತೇವೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಈ ಮಸೂದೆ ಎಲ್ಲ ಧರ್ಮಗಳಿಗೂ ಅನ್ವಯಿಸುವಂತೆ ಮಾಡುವುದೇ ನಮ್ಮ ಉದ್ದೇಶ' ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ದೇವದಾಸಿ ಪದ್ಧತಿ, ಬೆತ್ತಲೆ ಸೇವೆ, ನಿಧಿಗೋಸ್ಕರ ಮಕ್ಕಳ ಬಲಿ ಇನ್ನಿತರ ಮೂಢನಂಬಿಕೆ ಪ್ರಧಾನವಾದ ಆಚರಣೆಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
ಬೆಳಗಾವಿ ಚಳಿಗಾಲ ಅಧಿವೇಶನ ಆರಂಭವಾಗಲು ಇನ್ನೂ 15 ದಿನಗಳು ಬಾಕಿಯಿದೆ. ಅಧಿವೇಶನಕ್ಕೂ ಮುನ್ನ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಅಧಿವೇಶನದಲ್ಲಿ ಈ ಮಸೂದೆ ಮಂಡನೆ ಮಾಡಲು ಗಂಭೀರ ಚಿಂತನೆ ನಡೆದಿದೆ ಎಂದ ಅವರು, 'ಯಾವುದೇ ಒಂದು ವರ್ಗವನ್ನು ಓಲೈಸುವ ದೃಷ್ಟಿ ಇದರಲ್ಲಿಲ್ಲ, ಅಲ್ಲದೆ ಯಾವುದೇ ಜಾತಿ ರಾಜಕಾರಣವೂ ನಡೆಯುವುದಿಲ್ಲ' ಎಂದು ತಿಳಿಸಿದರು.
ರಾಜ್ಯದಲ್ಲಿ ಮೂಢನಂಬಿಕೆಗಳು ವ್ಯಾಪಕವಾಗಿ ಹಬ್ಬಿದೆ. ಬಾಗಲಕೋಟೆ, ಬಿಜಾಪುರ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಮೂಢನಂಬಿಕೆಗಳಿಂದ ಜನ ಕೆಲವೊಂದು ನಂಬಿಕೆಗಳನ್ನೇ ಬೆಳೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೂಢನಂಬಿಕೆ ನಿಷೇಧಕ್ಕೆ ಕಾನೂನು ಜಾರಿ ಮಾಡಲು ಹೊರಟಿದೆ ಎಂದರು.
ಮಸೂದೆ ಮಂಡನೆಗೂ ಮುನ್ನ ನ್ಯಾಷನಲ್ ಲಾ ಸ್ಕೂಲ್, ಲಾ ಯೂನಿವರ್ಸಿಟಿ ಸೇರಿದಂತೆ ವಿವಿಧ ವಿಶ್ವವಿದ್ಯಾನಿಲಯಗಳಿಂದ ಅಭಿಪ್ರಾಯ ಸಂಗ್ರಹ ಮಾಡಲಾಗುವುದು. ಸಾಹಿತಿಗಳು, ಪ್ರಜ್ಞಾವಂತರು, ವಕೀಲರ ಸಲಹೆಗಳನ್ನು ಪಡೆಯಲಾಗುವುದು. ಸಾರ್ವಜನಿಕ ಚರ್ಚೆಗೂ ಆಸ್ಪದ ನೀಡಲಾಗುವುದು ಎಂದರು.
ಇದಲ್ಲದೆ, ಈ ವಿಚಾರವಾಗಿ ಇದುವರೆಗೂ ಪ್ರಕಟಗೊಂಡಿರುವ ಪುಸ್ತಕಗಳು ಸುಪ್ರೀಂಕೋರ್ಟ್ ಹಾಗೂ ಹೈ ಕೋರ್ಟ್ ಗಳಲ್ಲಿ ಬಂದಿರುವಂತಹ ತೀರ್ಪುಗಳನ್ನು ಪರಿಶೀಲಿಸಿ ನಂತರ ಮಸೂದೆ ಮಂಡಿಸಲಾಗುವುದು ಎಂದು ವಿವರಿಸಿದರು. ಮಸೂದೆ ಮಂಡನೆಗೆ ಇದೀಗ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದ್ದೇವೆಯೇ ಹೊರತು ಇದು ಇನ್ನೂ ಅಂತಿಮವಾಗಿಲ್ಲ.
ಈ ಎಲ್ಲ ಪ್ರಕ್ರಿಯೆಗಳನ್ನು ಪರಿಶೀಲಿಸಲು ನ್ಯಾಯಾಂಗ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ಈ ಮಸೂದೆ ಮಂಡನೆಯ ಪ್ರಸ್ತಾವನೆಯನ್ನು ಇನ್ನು ನಾನೇ ಓದಿಲ್ಲ, ಆಗಲೇ ಮಾಧ್ಯಮಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ ಎಂದರು.
ಮುಖ್ಯವಾಗಿ ಈ ಪ್ರಸ್ತಾವನೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬರಬೇಕು. ನಂತರ ಸಮಿತಿಯಲ್ಲಿ ಇದನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುವುದು. ಸಂವಿಧಾನ ಚೌಕಟ್ಟಿನಲ್ಲಿ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗದ ರೀತಿಯಲ್ಲಿ ಮಸೂದೆ ಜಾರಿಗೊಳಿಸಲು ಎಲ್ಲ ರೀತಿಯ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಿಯೂ ಸಹ ಮಸೂದೆ ಮಂಡನೆ ಕಾರ್ಯ ಸಂಪೂರ್ಣವಾಗಿದೆ ಎಂದು ಹೇಳಿಲ್ಲ. ಆದರೆ ಮಾಧ್ಯಮಗಳಲ್ಲಿ ಮಾತ್ರ ಈ ವಿಷಯ ಪ್ರಸ್ತಾಪಿಸಲಾಗುತ್ತಿದೆ ಎಂದು ಟಿ.ಬಿ.ಜಯಚಂದ್ರ ಹೇಳಿದರು.












Click it and Unblock the Notifications