Breaking; ರಾಷ್ಟ್ರಪತಿ ಚುನಾವಣೆ, ಬೆಂಗಳೂರಲ್ಲಿ ಇಬ್ಬರು ಸಂಸದರ ಮತದಾನ
ಬೆಂಗಳೂರು, ಜುಲೈ 18; ರಾಷ್ಟ್ರಪತಿ ಚುನಾವಣೆಗೆ ಮತದಾನ ಸೋಮವಾರ ನಡೆಯಲಿದೆ. ಎನ್ಡಿಎ ಮೈತ್ರಿಕೂಟದಿಂದ ದ್ರೌಪದಿ ಮುರ್ಮು ಮತ್ತು ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಯಶವಂತ ಸಿನ್ಹಾ ಕಣದಲ್ಲಿದ್ದಾರೆ.
ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ಮಾಡಲು ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ.
ಶಾಸಕರು, ಸಂಸದರು, ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದ ಸದಸ್ಯರು ಮತದಾನ ಮಾಡಲಿದ್ದಾರೆ. ವಿಧಾನಸಭೆಯ ಸದಸ್ಯರು ಆಯಾ ರಾಜ್ಯಗಳ ಮತಗಟ್ಟೆಯಲ್ಲಿಯೇ ಮತ ಚಲಾವಣೆ ಮಾಡಬೇಕಿದೆ.

ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಸಂಸತ್ತಿನಲ್ಲಿ ಮತದಾನ ಮಾಡಬೇಕು. ತೀರಾ ಅನಿವಾರ್ಯ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗದ ಅನುಮತಿ ಪಡೆದು ರಾಜ್ಯಗಳಲ್ಲಿ ಮತದಾನ ಮಾಡಬಹುದಾಗಿದೆ.
ಇಬ್ಬರು ಸಂಸದರ ಮತದಾನ; ಜೆಡಿಎಸ್ ವರಿಷ್ಠ ಮತ್ತು ರಾಜ್ಯಸಭೆ ಸದಸ್ಯ ಎಚ್. ಡಿ. ದೇವೇಗೌಡ ಮತ್ತು ಮೈಸೂರು-ಚಾಮರಾಜನಗರ ಕ್ಷೇತ್ರದ ಸಂಸದ ವಿ. ಶ್ರೀನಿವಾಸ ಪ್ರಸಾದ್ ವಿಧಾನಸೌಧದಲ್ಲಿ ಮತದಾನ ಮಾಡಲು ಅನುಮತಿ ಪಡೆದುಕೊಂಡಿದ್ದಾರೆ.
ರಾಷ್ಟ್ರಪತಿ ಚುನಾವಣೆ ಸಹಾಯಕ ಚುನಾವಣಾಧಿಕಾರಿ ಎಂ. ಕೆ. ವಿಶಾಲಾಕ್ಷಿ ಈ ಕುರಿತು ಮಾಹಿತಿ ನೀಡಿದ್ದಾರೆ, "ರಾಜ್ಯದ ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಲು ಕೇಂದ್ರ ಚುನಾವಣಾ ಆಯೋಗದ ಒಪ್ಪಿಗೆ ಬೇಕು. ಶ್ರೀನಿವಾಸ ಪ್ರಸಾದ್ಗೆ ಇಲ್ಲಿ ಮತಚಲಾವಣೆ ಮಾಡಲು ಅನುಮತಿ ಸಿಕ್ಕಿತ್ತು. ಭಾನುವಾರ ದೇವೇಗೌಡರಿಗೂ ಇಲ್ಲಿಯೇ ಮತ ಚಲಾವಣೆ ಮಾಡಲು ಅವಕಾಶ ನೀಡಲಾಗಿದೆ" ಎಂದು ಹೇಳಿದ್ದಾರೆ.
ಸೋಮವಾರ ಸಂಜೆ ಮತದಾನ ಪೂರ್ಣಗೊಂಡ ಬಳಿಕ ಮತಪೆಟ್ಟಿಗೆಯನ್ನು ಮೊಹರು ಮಾಡಲಾಗುತ್ತದೆ. ರಾತ್ರಿ 9.20ರ ವಿಮಾನದಲ್ಲಿ ದೆಹಲಿಗೆ ತೆಗೆದುಕೊಂಡು ಹೋಗಲಾಗುತ್ತದೆ. ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆಯ ವೀಕ್ಷಕರಾಗಿ ಅಮಿತ್ ಕುಮಾರ್ ಘೋಷ್ ನೇಮಕಗೊಂಡಿದ್ದಾರೆ.
ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಜುಲೈ 21ರಂದು ನಡೆಯಲಿದ್ದು, ಅಂದೆಯೇ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications