ರಾಘವೇಶ್ವರ ಶ್ರೀಗಳಿಗೆ ಬ್ಯ್ಲಾಕ್ ಮೇಲ್ ಆರೋಪ : ಪ್ರೇಮಲತಾ ಅರ್ಜಿ ವಜಾ
ಬೆಂಗಳೂರು, ಫೆಬ್ರವರಿ 03 : ಹೊಸನಗರದ ರಾಮಚಂದ್ರಾಪುರ ಮಠದ ಸ್ವಾಮೀಜಿಗಳಿಗೆ ಬ್ಯ್ಲಾಕ್ ಮೇಲ್ ಮಾಡಿದ ಆರೋಪದಲ್ಲಿ ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಮತ್ತು ಅವರ ಪತಿ ದಿವಾಕರ ಶಾಸ್ತ್ರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಧಾರವಾಡದ ಸಂಚಾರಿ ಪೀಠದಲ್ಲಿ ಈ ಪ್ರಕರಣದ ಕುರಿತು ವಿಚಾರಣೆ ನಡೆಯುತ್ತಿತ್ತು. ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಅವರಿದ್ದ ಏಕಸದಸ್ಯ ಪೀಠ ವಿಡಿಯೋ ಕಾನ್ಪರೆನ್ಸ್ ಮೂಲಕ ಬೆಂಗಳೂರಿನಿಂದ ಆದೇಶವನ್ನು ಪ್ರಕಟಿಸಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಪ್ರೇಮಲತಾ ಶಾಸ್ತ್ರಿ, ದಿವಾಕರ ಶಾಸ್ತ್ರಿ ಮತ್ತು ನಾರಾಯಣ ಶಾಸ್ತ್ರಿ ವಿರುದ್ಧದ ವಿಚಾರಣೆ ಮುಂದುವರೆಯಲಿ ಎಂದು ಹೇಳಿರುವ ಕೋರ್ಟ್, ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಪ್ರಕರಣದ ಇತರ ಆರೋಪಿಗಳಾದ ಬಿ.ಟಿ.ವೆಂಕಟೇಶ್, ಗಂಗಾಧರ ಶಾಸ್ತ್ರಿ, ಪದ್ಮನಾಭ ಶರ್ಮ, ಚ.ಮೂ.ಕೃಷ್ಣಮೂರ್ತಿ ವಿರುದ್ಧದ ವಿಚಾರಣೆಯನ್ನು ಕೈ ಬಿಡುವಂತೆ ಹೊನ್ನಾವರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಪ್ರಕರಣವೇನು? : 2014ರಲ್ಲಿ ಕೆಕ್ಕಾರು ಶಾಖಾಮಮಠದಲ್ಲಿ ನಡೆದ ಚಾತುರ್ಮಾಸ್ಯದ ವೇಳೆ ದಿವಾಕರ ಶಾಸ್ತ್ರಿ, ಪ್ರೇಮಲತಾ ಶಾಸ್ತ್ರಿ ಅವರು ಬೆಂಗಳೂರಿನ ಬನಶಂಕರಿ ಪ್ರದೇಶದಿಂದ ಮಠದ ಭದ್ರತಾ ವಿಭಾಗದ ಕಾರ್ಯದರ್ಶಿ ಬಿ.ಆರ್.ಚಂದ್ರಶೇಖರ್ ಅವರಿಗೆ ಕರೆ ಮಾಡಿ 3 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಕಾಯಿನ್ ಬೂತ್ನಿಂದ ಕರೆ ಮಾಡಿದ್ದ ಆರೋಪಿಗಳು ಹಣ ನೀಡದಿದ್ದರೆ ಸ್ವಾಮೀಜಿಗಳ ವಿರುದ್ಧ ಅತ್ಯಾಚಾರದ ಕೇಸ್ ದಾಖಲಿಸುತ್ತೇವೆ ಎಂದು ಬ್ಯ್ಲಾಕ್ ಮೇಲ್ ಮಾಡಿದ್ದರು. ಬಿ.ಆರ್.ಚಂದ್ರಶೇಖರ್ ಈ ಕುರಿತು ಹೊನ್ನಾವರವ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿವಾಕರ ಶಾಸ್ತ್ರಿ ಮತ್ತು ಪ್ರೇಮಲತಾ ಅವರ ಬಂಧನವಾಗಿತ್ತು. ನಂತರ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಸಿಐಡಿ ಬಿ ರಿಪೋರ್ಟ್ ಸಲ್ಲಿಸಿತ್ತು. ಇದನ್ನು ಹೊನ್ನಾವರದ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಬಿ.ಆರ್.ಚಂದ್ರಶೇಖರ್ ಪ್ರಶ್ನಿಸಿದ್ದರು.
ದಿವಾಕರ ಶಾಸ್ತ್ರಿ ಮತ್ತು ಪ್ರೇಮಲತಾ ಅವರು ಹೊನ್ನಾವರದ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.












Click it and Unblock the Notifications