ಶ್ರೀನಿವಾಸ್ ಪ್ರಸಾದ್ ಅಗಲಿಕೆ ಬಗ್ಗೆ ಪ್ರಲ್ಹಾದ ಜೋಶಿ ಹೇಳಿದ್ದೇನು?
ಹುಬ್ಬಳ್ಳಿ: ದಲಿತ ನಾಯಕ ಮತ್ತು ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ನಿಧನಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು. ಶ್ರೀನಿವಾಸ ಪ್ರಸಾದ್ ಅವರು ದಲಿತ ಸಮಾಜದ ಶಕ್ತಿಯಾಗಿದ್ದರು. ರಾಜ್ಯದ ಹಿರಿಯ ನಾಯಕರಾಗಿ ಅಪೂರ್ವ ಸೇವೆಯ ಸಲ್ಲಿಸಿದ್ದಾರೆ. ಇವರ ಅಗಲಿಕೆಯಿಂದ ಸಮಾಜಕ್ಕೆ ತೀವ್ರ ನಷ್ಟ ಉಂಟಾಗಿದೆ ಎಂದು ಜೋಶಿ ವಿಷಾದವನ್ನು ಈ ವೇಳೆ ವ್ಯಕ್ತಪಡಿಸಿದ್ದಾರೆ.
ಸಮಾಜದಲ್ಲಿ ನಿರಂತರವಾಗಿ ಅನ್ಯಾಯ ಮತ್ತು ಅಸಮಾನತೆ ವಿರುದ್ಧ ಹೋರಾಡುತ್ತಾ ದಲಿತರ ಪರ ಗಟ್ಟಿ ಧ್ವನಿಯಾಗಿ ಇದ್ದರು. ಸುದೀರ್ಘ ಕಾಲ ಲೋಕಸಭೆ ಸದಸ್ಯರಾಗಿಯು ಜನ ಸೇವೆಗೈದ ಇವರು, ಪ್ರಗತಿಪರ ಚಿಂತನೆ ಉಳ್ಳ ರಾಜಕಾರಣಿ ಆಗಿದ್ದರೆಂದು ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಸ್ಮರಿಸಿದರು. ಶ್ರೀನಿವಾಸ ಪ್ರಸಾದ್ ಅವರ ಕುಟುಂಬ & ಸಮಾಜಕ್ಕೆ ಈ ಹೋರಾಟಗಾರನ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿ ತುಂಬಲಿ. ಭಗವಂತ ಅವರ ಆತ್ಮಕ್ಕೆ ಚಿರ ಶಾಂತಿ ನೀಡಲೆಂದು ಸಚಿವ ಜೋಶಿ ಪ್ರಾರ್ಥಿಸಿದರು.

ಶ್ರೀನಿವಾಸ್ ಪ್ರಸಾದ್ ಅವರಿಗೆ ಏನಾಗಿತ್ತು?
ಏಪ್ರಿಲ್ 22 ರಂದು ಬೆಂಗಳೂರಿನ ಓಲ್ಡ್ ಏರ್ಪೋರ್ಟ್ ರಸ್ತೆಯ ಖಾಸಗಿ ಆಸ್ಪತ್ರೆಗೆ ಶ್ರೀನಿವಾಸ್ ಪ್ರಸಾದ್ ಅವರನ್ನು ದಾಖಲು ಮಾಡಲಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀನಿವಾಸ್ ಪ್ರಸಾದ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಮೂತ್ರಕೋಶ ಸಂಬಂಧಿ ಸಮಸ್ಯೆಗೆ ಸಿಲುಕಿದ್ದ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಇದೇ ಕಾರಣಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು ಎನ್ನಲಾಗಿದೆ. ಆದರೆ ರಾತ್ರಿ 1.20ರ ಸುಮಾರಿಗೆ ತೀವ್ರ ಹೃದಯಾಘಾತ ಎದುರಾದ ಹಿನ್ನೆಲೆ ಕೊನೆಯುಸಿರು ಎಳೆದಿದ್ದಾರೆ. ಇನ್ನು ಈ ವಿಚಾರವನ್ನು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಮೈಸೂರಿನಲ್ಲಿ ಅಂತಿಮ ದರ್ಶನ
ಇನ್ನು ಇದೀಗ ಮೈಸೂರಿನ ಜಯಲಕ್ಷ್ಮೀಪುರ ನಿವಾಸಕ್ಕೆ ಶ್ರೀನಿವಾಸ್ ಪ್ರಸಾದ್ ಪಾರ್ಥಿವ ಶರೀರ ರವಾನೆ ಮಾಡಲಾಗಿದೆ. ಇಂದು ಮೈಸೂರಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ, ಎಂಬ ಮಾಹಿತಿಯನ್ನ ನೀಡಲಾಗಿದೆ. ಶ್ರೀನಿವಾಸ್ ಪ್ರಸಾದ್ರ ಪಾರ್ಥಿವ ಶರೀರವನ್ನ ಈಗಾಗಲೇ ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಮೈಸೂರಿಗೆ ಅಂಬ್ಯುಲೆನ್ಸ್ ಮೂಲಕ ಕಳುಹಿಸಲಾಗಿದ್ದು. ಅಂತಿಮ ದರ್ಶನಕ್ಕೆ ಗಣ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಬರುವ ನಿರೀಕ್ಷೆ ಇದೆ. ಹೀಗಾಗಿ ಭದ್ರತೆ ಕೈಗೊಳ್ಳಲಾಗಿದ್ದು, ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಣ್ಯರು ಹಾಗೂ ರಾಜಕೀಯ ಪ್ರಮುಖರು ಸಂತಾಪ ಸೂಚಿಸಿದ್ದಾರೆ.












Click it and Unblock the Notifications