Siddaramaiah: ಕೇಂದ್ರದ ವಿರುದ್ಧ ಆರೋಪಿಸಿದ್ದ ಸಿದ್ದರಾಮಯ್ಯಗೆ ಪ್ರಹ್ಲಾದ್ ಜೋಶಿ ಕೌಂಟರ್
ಬೆಂಗಳೂರು, ಸೆಪ್ಟಂಬರ್ 27: ಬಿಜೆಪಿ ಕೇಂದ್ರ ಸರ್ಕಾರ ದೇಶದ ವಿವಿಧೆಡೆ ಕೇಂದ್ರ ತನಿಖಾ ಸಂಸ್ಥೆ, ರಾಜಭವನವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ. 'ಭೂತದ ಬಾಯಲ್ಲಿ ಭಗವದ್ಗೀತೆ' ಇದು ನಿಮಗೇ ಅನ್ವಯವಾಗುತ್ತದೆ ಎಂದು ಅವರು ಲೇವಡಿ ಮಾಡಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮೈಸೂರು ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇದರ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಗೆ ಪ್ರಹ್ಲಾದ್ ಜೋಶಿಯವರು ಟಾಂಗ್ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮಗೆ ವಾಸ್ತವದ ಇತಿಹಾಸದ ಅರಿವೇ ಇಲ್ಲ ಎನ್ನಿಸುತ್ತದೆ. ಸಂವಿಧಾನದ ದುರುಪಯೋಗ ಮಾಡಿದ್ದು ಕಾಂಗ್ರೆಸ್ ಪಕ್ಷ. ಎಮರ್ಜೆನ್ಸಿ ಹೇರಿ ಪ್ರಜಾತಂತ್ರವನ್ನು ಕಗ್ಗೊಲೆ ಮಾಡಿ, ಜನರ ,ಮಾಧ್ಯಮದ ಹಕ್ಕು ದಮನಿಸಿದ್ದು ಇದೇ ಇಂದಿರಾ ಗಾಂಧಿ ನೇತೃತ್ವದ ನಿಮ್ಮ ಕಾಂಗ್ರೆಸ್ ಪಕ್ಷ ಎಂದು ಅವರು ವಾಗ್ದಾಳಿ ನಡೆಸಿದರು.
91ಕ್ಕೂ ಹೆಚ್ಚು ಸರ್ಕಾರ ವಜಾ ಮಾಡಿದ್ದೇ ಕಾಂಗ್ರೆಸ್
ರಾಜ್ಯಪಾಲರನ್ನು ದುರುಪಯೋಗಪಡಿಸಿಕೊಂಡು 91ಕ್ಕೂ ಹೆಚ್ಚು ಚುನಾಯಿತ ರಾಜ್ಯ ಸರ್ಕಾರಗಳನ್ನು ಇದೇ ಕಾಂಗ್ರೆಸ್ ವಜಾಗೊಳಿಸಿತ್ತು. ಇದೀಗ ನೀವು ಭ್ರಷ್ಟಾಚಾರ ಮಾಡಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನಗಳನ್ನು ಕಬಳಿಸಿದ್ದೀರಿ. ಕುಟುಂಬ ಸಮೇತ ಅನ್ಯಾಯ ಮಾಡಿರುವ ನಿಮ್ಮ ಮೇಲೆ ತನಿಖೆಗೆ ಆದೇಶ ನೀಡಿದ್ದ ರಾಜ್ಯಪಾಲರ ನಿರ್ಧಾರವನ್ನು ರಾಜ್ಯದ ಉಚ್ಚ ನ್ಯಾಯಾಲಯವೇ ಎತ್ತಿಹಿಡಿದಿದೆ ಎಂದು ಅವರು ಹೇಳಿದರು.
ಸದ್ಯ ನಿಮ್ಮ ಹೇಳಿಕೆ ನೋಡಿದರೆ ನ್ಯಾಯಾಲಯದ ತೀರ್ಪಿನ ಮೇಲೂ ನಂಬಿಕೆ ಇಲ್ಲವೆಂದರ್ಥವಲ್ಲವೇ?. ದುರಾಡಳಿತದ ನಿಮ್ಮ ಸರ್ಕಾರದ ಮುಖವಾಡ ಜನರ ಮುಂದೆ ಈಗಾಗಲೇ ಕಳಚಿದೆ. ನಿಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಿ ಎಂದು ಅವರು ಆಗ್ರಹಿಸಿದರು.
ಸಿಎಂ ಸಿದ್ದರಾಮಯ್ಯ ಆರೋಪವೇನು?
ಸಂವಿಧಾನದಿಂದ ಆಯ್ಕೆಯಾದ ರಾಜ್ಯಪಾಲರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ದೇಶದಲ್ಲಿ ಎಲ್ಲೆಲ್ಲಿ ವಿರೋಧಪಕ್ಷಗಳ ಸರ್ಕಾರವಿದೆಯೋ, ಅಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಇಡಿ, ಸಿಬಿಐ ಹಾಗೂ ರಾಜಭವನದ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು.
ರಾಷ್ಟ್ರಪತಿಗಳಾಗಲಿ ಅಥವಾ ರಾಜ್ಯಪಾಲರಾಗಲಿ ಸಂವಿಧಾನದ ಪ್ರಕಾರ ಕೆಲಸ ಮಾಡಲು ನೇಮಕಗೊಂಡವರು. ಯಾವುದೇ ಚುನಾವಣೆಯ ಮೂಲಕ ಆಯ್ಕೆಯಾದವರಲ್ಲ. ಅವರು ಸಂವಿಧಾನದಲ್ಲಿ ಪ್ರಮುಖರು. ಆದರೆ ಜನಪ್ರತಿನಿಧಿಗಳು ಚುನಾವಣೆಯ ಮೂಲಕ ಆಯ್ಕೆಯಾಗಿ ಆಡಳಿತದಲ್ಲಿ ಪ್ರಮುಖರು. ಇಂತಹ ಪ್ರಮುಖ ವ್ಯತ್ಯಾಸವಿರುವಾಗ ಯಾವುದೇ ರಾಜ್ಯದ ರಾಜ್ಯಪಾಲರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಈ ವಿಷಯದ ಕುರಿತು ರಾಷ್ಟ್ರದಾದ್ಯಂತ ಚರ್ಚೆ ಆಗಬೇಕು ಎಂದು ಹೇಳಿದ್ದರು.
ಅವರ ಈ ಹೇಳಿಕೆಯನ್ನು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.












Click it and Unblock the Notifications