'ಕಾಲಾ' ಬಿಡುಗಡೆಗೆ ಬಿಡಿ: ಪ್ರಕಾಶ್ ರೈ ಮತ್ತೆ ಸರಣಿ ಟ್ವೀಟ್
Recommended Video
ಬೆಂಗಳೂರು, ಜೂನ್ 5: ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡುವುದಕ್ಕೆ ವಿಧಿಸಿರುವ ನಿರ್ಬಂಧವನ್ನು ಪುನಃ ಪ್ರಶ್ನಿಸಿರುವ ನಟ ಪ್ರಕಾಶ್ ರೈ, ಸಿನಿಮಾ ಪರ ಬ್ಯಾಟಿಂಗ್ ಮುಂದುವರಿಸಿದ್ದಾರೆ.
'ಕಾಲಾ' ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆ ಮಾಡದಂತೆ ನಿಷೇಧಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧಾರ ತೆಗೆದುಕೊಂಡಿದೆ. ಇದಕ್ಕೆ ವಿವಿಧ ಕನ್ನಡ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಕಾವೇರಿಗೂ 'ಕಾಲಾ' ಸಿನಿಮಾಕ್ಕೂ ಏನು ಸಂಬಂಧ?: ಪ್ರಕಾಶ್ ರೈ
ಆದರೆ, 'ಕಾಲಾ' ಮೇಲಿನ ನಿರ್ಬಂಧವನ್ನು ಪ್ರಶ್ನಿಸಿರುವ ಪ್ರಕಾಶ್ ರೈ, ಸಿನಿಮಾಕ್ಕೂ ರಾಜಕೀಯಕ್ಕೂ ತಳುಕು ಹಾಕುವುದು ಬೇಡ ಎಂದಿದ್ದಾರೆ. ಸಿನಿಮಾ ಬಿಡುಗಡೆಗೆ ಅಡ್ಡಿಪಡಿಸುವುದು ಕಾನೂನಿಗೆ ವಿರುದ್ಧ.
ಸಿನಿಮಾ ನೋಡುವುದು ಬಿಡುವುದು ಜನರ ಹಕ್ಕು. ಜನರು ಸಿನಿಮಾ ನೋಡಬೇಕೇ ಬೇಡವೇ ಎಂದು ಕೆಲವೇ ಮಂದಿ ನಿರ್ಧರಿಸುವುದು ಸರಿಯಲ್ಲ. ಸಿನಿಮಾ ನಿರ್ಬಂಧಿಸಿರುವುದರಿಂದ ಕಾವೇರಿ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಪ್ರಕಾಶ್ ರೈ ಸುದೀರ್ಘ ಬರಹ ಪ್ರಕಟಿಸಿದ್ದರು.
ಪ್ರಕಾಶ್ ರೈಗೆ ಕಾವೇರಿಗಿಂತ ಕಾಸು ಮುಖ್ಯ ಎಂದ ಸಂಸದ ಪ್ರತಾಪ್ ಸಿಂಹ
ರೈ ಅವರ ಟ್ವೀಟ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. 'ಕಾಲಾ' ಪರ ಬ್ಯಾಟಿಂಗ್ ಮುಂದುವರಿಸಿರುವ ರೈ, ಸೋಮವಾರ ರಾತ್ರಿ ಮತ್ತೆ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ.
|
ಹೇಗೆ ಅಭಿವ್ಯಕ್ತಗೊಳಿಸುವುದು?
ಕಾಲಾ ನಿಷೇಧ. ನಟನ ಹೇಳಿಕೆಯಿಂದ ನಮಗೆ ನೋವಾಗಿರುವುದು ನಿಜ. ಹೌದು...ನಾವು ಅದನ್ನು ಅಭಿವ್ಯಕ್ತಗೊಳಿಸಬೇಕು. ಆದರೆ, ಹೇಗೆ? ಅದಕ್ಕೆ ಹೊಣೆಗಾರರಲ್ಲದ ನಮ್ಮಂತಹ ಜನರಿಗೆ ನೋವು ಉಂಟು ಮಾಡುವುದರ ಮೂಲಕವೇ? ಎರಡು ರಾಜ್ಯಗಳ ನಡುವೆ ದ್ವೇಷವನ್ನು ಬಿತ್ತುವುದರ ಮೂಲಕವೇ? ನಾವು ಹೇಗೆ ಪ್ರತಿಭಟನೆ ಮಾಡಬೇಕು ಎಂಬುದನ್ನು ಎಷ್ಟು ಕಾಲದವರೆಗೆ ದಮನಕಾರಿ ಅಂಶಗಳು ನಿರ್ಧರಿಸಲು ಬಿಡಬೇಕು?
|
ಸಿನಿಮಾ ಬಿಡುಗಡೆಯಾಗಲಿ
ಸಿನಿಮಾ ಬಿಡುಗಡೆ ಮಾಡಲು ಬಿಡಿ... ಸಿನಿಮಾವನ್ನು ನೋಡದೆ ಇರುವುದರ ಮೂಲಕ ಜನರು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಬಯಸುತ್ತಾರೆಯೇ ಎಂದು ನೋಡೋಣ. ಸಿನಿಮಾವೊಂದನ್ನ ನಿರ್ಬಂಧಿಸುವುದರ ಮೂಲಕ ಸಮಸ್ಯೆ ಪರಿಹಾರವಾಗುತ್ತದೆಯೇ ಎಂಬುದನ್ನು ಜನರು ನಿಜಕ್ಕೂ ನಂಬುತ್ತಾರೆಯೇ ಎಂಬುದನ್ನು ತಿಳಿದುಕೊಳ್ಳೋಣ. ಎಲ್ಲರನ್ನೂ ಬ್ಲ್ಯಾಕ್ಮೇಲ್ ಮಾಡಲು ಮತ್ತು ನಮ್ಮ ಪರವಾಗಿ ನಿರ್ಧಾರ ತೆಗೆದುಕೊಳ್ಳಲು ಈ ಸಂಘಟನೆಗಳು ಯಾರು?
|
ಜನರ ಆಯ್ಕೆ ಸ್ವಾತಂತ್ರ್ಯ ಕಾಪಾಡಬೇಕು
ಚುನಾಯಿತ ಸರ್ಕಾರವೊಂದು ನಾವು ಸಿನಿಮಾವನ್ನು ನಿಷೇಧಿಸಿಲ್ಲ ಎಂದು ಹೇಳುವ ಮೂಲಕ ಕೈತೊಳೆದುಕೊಳ್ಳಲು ಸಾಧ್ಯವಿಲ್ಲ. ನಾಗರಿಕರ ಆಯ್ಕೆಯ ಹಕ್ಕನ್ನು ಅದು ರಕ್ಷಿಸಬೇಕು. ಕಾನೂನನ್ನು ಕೈಗೆತ್ತಿಕೊಂಡು ಸಿನಿಮಾವನ್ನು ನಿಷೇಧಿಸುವ ದಮನಕಾರಿ ಸಂಘಟನೆಗಳಿಗೆ ಹಿಡಿತಕ್ಕೆ ಸಿಲುಕಬಾರದು. ಇಲ್ಲಿ ಯಾರು ಆಡಳಿತ ನಡೆಸುತ್ತಿದ್ದಾರೆ? ನಾವು ಚುನಾಯಿಸಿದವರೇ ಅಥವಾ ಬೆದರಿಕೆ ಹಾಕುತ್ತಿರುವವರೇ?
ಕರ್ನಾಟಕ, ಕಾವೇರಿಯನ್ನು ಕೆಣಕುತ್ತಿದ್ದಾರೆ
ಸಿನಿಮಾ ಬಿಡುಗಡೆ ಪರವಾಗಿ ಮಾತನಾಡಿದ್ದ ಪ್ರಕಾಶ್ ರೈ ಅವರ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಸೋಮವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರಕಾಶ್ ರೈ ಅವರಿಗೆ ಕಾಸೇ ಮುಖ್ಯವಾಗಿದೆ. ನಮಗೆ ಕಾಸಿಗಿಂತ ಕಾವೇರಿ ಮುಖ್ಯ.
ಈ ಹಿಂದೆ ಕಾವೇರಿ ಬಗ್ಗೆ ಚರ್ಚೆ ಮಾಡೊಲ್ಲ ಎಂದಿದ್ದ ರೈ, ಈಗ ಸಿನಿಮಾಕ್ಕೂ ಕಾವೇರಿಗೂ ಏನು ಸಂಬಂಧ ಎನ್ನುತ್ತಿದ್ದಾರೆ. ಈ ಮೂಲಕ ಕರ್ನಾಟಕ ಹಾಗೂ ಕಾವೇರಿಯನ್ನು ಪದೇ ಪದೇ ಕೆಣಕುತ್ತಿದ್ದಾರೆ ಎಂದು ಆರೋಪಿಸಿದ್ದರು.
ಪ್ರಕಾಶ್ ರೈ ಕರ್ನಾಟಕದ ಪಾಲಿಗೆ ಒಬ್ಬ ಖಳನಾಯಕ. ಕಾವೇರಿ ವಿಚಾರದಲ್ಲಿ ರಜನಿಕಾಂತ್ ಅಷ್ಟೇ ಅಲ್ಲ. ಯಾರೇ ಲಘುವಾಗಿ ಮಾತನಾಡಿದರೂ ಖಂಡಿಸುತ್ತೇವೆ ಎಂದು ಪ್ರತಾಪ್ ಸಿಂಹ ಹೇಳಿದ್ದರು.