ಪ್ರಜ್ವಲ್ ರೇವಣ್ಣ ಸೂಟ್ಕೇಸ್ ಹೇಳಿಕೆಯ ಹಿಂದಿನ ಕಾಣದ 'ಕೈ'ಗಳು?
ಪ್ರಜ್ವಲ್ ರೇವಣ್ಣ ಸೂಟ್ ಕೇಸ್ ಹೇಳಿಕೆಯ ಹಿಂದೆ ಕಾಣದ 'ಕೈ'ಗಳ ಮಸಲತ್ತು ಅಡಗಿದೆ ಎನ್ನುವ ಮೂಲಕ ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ವಿವಾದವನ್ನೂ ಇನ್ನೂ ಜೀವಂತವಾಗಿಟ್ಟಿದ್ದಾರೆ.
ಪ್ರಜ್ವಲ್ ಆದರೇನು, ನಿಖಿಲ್ ಆದರೇನು, ಕುಮಾರಸ್ವಾಮಿಗೆ ಇಬ್ಬರೂ ಮಕ್ಕಳಲ್ಲವೇ, ಪ್ರಜ್ವಲ್ ಗೆ ಕರೆದು ಬುದ್ದಿ ಹೇಳಿದ್ದೇನೆಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ, ಪ್ರಜ್ವಲ್ ರೇವಣ್ಣ ಸೂಟ್ ಕೇಸ್ ವಿವಾದಕ್ಕೆ ತೆರೆ ಎಳೆದಿದ್ದಾರೆ.
ದೊಡ್ಡ ಗೌಡ್ರು ವಿವಾದಕ್ಕೆ ತೆರೆ ಎಳೆದರೂ, ಪುತ್ರ ಎಚ್ ಡಿ ರೇವಣ್ಣ, ಸೂಟ್ ಕೇಸ್ ವಿವಾದದ ಹಿಂದೆ ಕಾಣದ 'ಕೈ'ಗಳ ಮಸಲತ್ತು ಅಡಗಿದೆ ಎನ್ನುವ ಮೂಲಕ ವಿವಾದವನ್ನೂ ಇನ್ನೂ ಜೀವಂತವಾಗಿಟ್ಟಿದ್ದಾರೆ.
JDSನಲ್ಲಿ ಸೂಟ್ ಕೇಸ್ನವರಿಗೆ ಮನ್ನಣೆ' ಸಿಡಿದೆದ್ದ ಪ್ರಜ್ವಲ್
ಮೊಮ್ಮಗ ಪ್ರಜ್ವಲ್ ಹೇಳಿಕೆ ಪಕ್ಷದ ಇಮೇಜಿಗೆ ಧಕ್ಕೆ ತಂದಿದ್ದು ಹೌದು ಎಂದು ಒಪ್ಪಿಕೊಂಡಿರುವ ದೇವೇಗೌಡ್ರು, ಅವನನ್ನು ಕರೆದು ಎರಡು ತಾಸು ಬುದ್ದಿ ಹೇಳಿದ್ದೇನೆ. ಪಕ್ಷಕ್ಕೆ ಮುಜುಗರ ತರುವ ಯಾವುದೇ ಕೆಲಸವನ್ನು ಇನ್ನು ಮುಂದೆ ಮಾಡುವುದಿಲ್ಲ ಎಂದು ಪ್ರಜ್ವಲ್ ಹೇಳಿದ್ದಾನೆಂದು ದೇವೇಗೌಡ್ರು ಹೇಳಿದ್ದಾರೆ.
ಪ್ರಜ್ವಲ್ ಹೇಳಿಕೆಯಿಂದ ಕುಮಾರಸ್ವಾಮಿಯೂ ನೊಂದು ಕೊಂಡಿದ್ದಾರೆ. ವಿದೇಶ ಪ್ರವಾಸದಿಂದ ಕುಮಾರಸ್ವಾಮಿ ಬಂದ ನಂತರ ಖುದ್ದಾಗಿ ನೀನೇ ಹೋಗಿ, ಚಿಕ್ಕಪ್ಪನ ಕ್ಷಮೆಯಾಚಿಸು ಎಂದು ಪ್ರಜ್ವಲ್ ಗೆ ಸೂಚಿಸಿದ್ದೇನೆಂದು ಗೌಡ್ರು ಹೇಳಿದ್ದಾರೆ.
ಪ್ರಜ್ವಲ್ ಸೂಟ್ಕೇಸ್ ವಿವಾದವನ್ನು ಲಘು ಹಾಸ್ಯದ ಮೂಲಕ ವಿವರಿಸಿದ ದೇವೇಗೌಡ್ರು, ಪಕ್ಷ ಸಂಘಟನೆ ಮಾಡಿ ಎಂದು ಯಾರಾದರೂ ಸೂಟ್ಕೇಸ್ ಕೊಟ್ಟರೆ ಮುಕ್ತವಾಗಿ ಸ್ವೀಕರಿಸುತ್ತೇನೆಂದು ಹೇಳಿದ್ದಾರೆ. ರೇವಣ್ಣ ಗುಮಾನಿ ಯಾರ ಮೇಲೆ?
ರೇವಣ್ಣ ಗುಮಾನಿ
ರಾಜ್ಯದಲ್ಲಿ ನಮ್ಮ ಪಕ್ಷಕ್ಕೆ ಇತ್ತೀಚೆಗೆ ಉತ್ತಮ ಜನಾಭಿಪ್ರಾಯ ವ್ಯಕ್ತವಾಗುತ್ತಿದೆ. ನಮ್ಮ ಏಳಿಗೆಯನ್ನು ಸಹಿಸದ ಜಿಲ್ಲೆಯ ರಾಷ್ಟ್ರೀಯ ಪಕ್ಷದ ಮುಖಂಡರೊಬ್ಬರ ಅಣತಿಯಂತೆ ಸೂಟ್ ಕೇಸ್ ವಿವಾದ ದೊಡ್ಡ ರಂಪವಾಯಿತು ಎಂದು ರೇವಣ್ಣ ಕಾಂಗ್ರೆಸ್ ಪಕ್ಷದ ಮೇಲೆ ತಮ್ಮ ಗುಮಾನಿ ಹೊರಹಾಕಿದ್ದಾರೆ.
ನನ್ನ ಮಗ ಏನು ಮಾತನಾಡಿದ್ದಾನೆಂದು ಗೊತ್ತಿದೆ
ನನ್ನ ಮಗ ಏನು ಭಾಷಣ ಮಾಡಿದ್ದಾನೆಂದು ನನಗೆ ಗೊತ್ತಿದೆ. ಕುಮಾರಸ್ವಾಮಿಯೇ ಮುಂದಿನ ಸಿಎಂ ಆಗಬೇಕೆಂದು ಭಾಷಣದಲ್ಲಿ ಪ್ರಜ್ವಲ್ ಹೇಳಿದ್ದ. ಆದರೆ ಮಾಧ್ಯಮಗಳು ಉದ್ದೇಶಪೂರ್ವಕವಾಗಿಯೇ ಅದನ್ನು ಬಿತ್ತರಿಸಿಲ್ಲ ಎಂದು ರೇವಣ್ಣ ಹೇಳಿದ್ದಾರೆ.
ಪ್ರಜ್ವಲ್ ಭಾಷಣ ಮೂರಕ್ಕೆ ಮುಕ್ತಾಯವಾಗಿತ್ತು
ಪ್ರಜ್ವಲ್ ಕಾರ್ಯಕ್ರಮ ಅಂದು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಮುಕ್ತಾಯಗೊಂಡಿತ್ತು. ಆಗಲೇ ಪ್ರಜ್ವಲ್ ಭಾಷಣವನ್ನು ಪ್ರಸಾರ ಮಾಡಲಿಲ್ಲ. ಸಂಜೆಯ ಹೊತ್ತಿಗೆ ಅದನ್ನು ಎಡಿಟ್ ಮಾಡಿ ಪ್ರಸಾರ ಮಾಡಲಾಯಿತು. ಇದು ನಮ್ಮ ಕುಟುಂಬವನ್ನು ಒಡೆಯುವ ಪ್ರಯತ್ನ - ರೇವಣ್ಣ.
ಕೇಬಲ್ ವಾಹಿನಿ ಪ್ರಸಾರ ಮಾಡಿತ್ತು
ಪ್ರಜ್ವಲ್ ಭಾಷಣವನ್ನು ಪ್ರಸಾರ ಮಾಡುತ್ತಿದ್ದದ್ದು ಸ್ಥಳೀಯ ಕೇಬಲ್ ವಾಹಿನಿಯೊಂದು ಮಾತ್ರ. ಅದು ಅಲ್ಲಿನ ಕಾಂಗ್ರೆಸ್ ಮುಖಂಡರೊಬ್ಬರ ಒಡೆತನದ್ದು. ಪ್ರಜ್ವಲ್ ಭಾಷಣವನ್ನು ಪೂರ್ಣವಾಗಿ ಪ್ರಸಾರ ಮಾಡದೇ, ತಮಗೆ ಬೇಕಾದಂತೆ ಎಡಿಟ್ ಮಾಡಿ, ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ - ರೇವಣ್ಣ.
ಕೈ ಮುಖಂಡರ ಕೆಲಸ
ಕೇಬಲ್ ವಾಹಿನಿಯ ಮುಖ್ಯಸ್ಥರ ಹೆಸರನ್ನು ಬಹಿರಂಗಪಡಿಸದ ರೇವಣ್ಣ, ಇದು ಪಕ್ಷಕ್ಕೆ ಮತ್ತು ನಮ್ಮ ಕುಟುಂಬದ ಇಮೇಜಿಗೆ ಧಕ್ಕೆ ತರುವ ಸಂಚು, ರಾಜ್ಯದ ಜನತೆ ಇದನ್ನೆಲ್ಲಾ ಗಮನಿಸುತ್ತಿದ್ದಾರೆ. ದೇವೇಗೌಡ ಮತ್ತು ಕುಮಾರಸ್ವಾಮಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲಾ ಬದ್ದ ಎಂದು ರೇವಣ್ಣ ಹೇಳಿದ್ದಾರೆ.