ಕರ್ನಾಟಕ; ಆ.10ರಂದು ವಿದ್ಯುತ್ ಕ್ಷೇತ್ರದ ನೌಕರರಿಂದ ಕೆಲಸ ಬಹಿಷ್ಕಾರ
ಬೆಂಗಳೂರು, ಆಗಸ್ಟ್ 09; ದೇಶದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಕೆಲಸ ಮಾಡುವ ಇಂಜಿನಿಯರ್ಗಳು, ಉದ್ಯೋಗಿಗಳು ಆಗಸ್ಟ್ 10ರ ಮಂಗಳವಾರ ದೇಶಾದ್ಯಂತ ಮುಷ್ಕರ ನಡೆಸಲಿದ್ದಾರೆ. ಕರ್ನಾಟಕದಲ್ಲಿಯೂ ಉದ್ಯೋಗಿಗಳು ಕೆಲಸ ಬಹಿಷ್ಕಾರ ಮಾಡಿ ಮುಷ್ಕರಕ್ಕೆ ಬೆಂಬಲ ನೀಡಲಿದ್ದಾರೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ನೌಕರರು ಮತ್ತು ಅಧಿಕಾರಿಗಳ ಒಕ್ಕೂಟದ ಅಧ್ಯಕ್ಷ ಟಿ. ಆರ್. ರಾಮಕೃಷ್ಣಯ್ಯ ಈ ಕುರಿತು ಮಾಹಿತಿ ನೀಡಿದ್ದಾರೆ. "ವಿದ್ಯುಚ್ಛಕ್ತಿ ಕಾಯ್ದೆ (ತಿದ್ದುಪಡಿ) ಮಸೂದೆ 2021 ವಿರೋಧಿಸಿ ಆಗಸ್ಟ್ 10ರಂದು ವಿದ್ಯುತ್ ಕ್ಷೇತ್ರದ ನೌಕರರು ಹಾಗೂ ಅಧಿಕಾರಿಗಳು ಕೆಲಸ ಬಹಿಷ್ಕಾರ ಮಾಡಲಿದ್ದೇವೆ" ಎಂದು ರಾಮಕೃಷ್ಣಯ್ಯ ಹೇಳಿದ್ದಾರೆ.
"ನೂತನ ಕಾಯ್ದೆ ಖಾಸಗೀಕರಣಕ್ಕೆ ಪೂರಕವಾಗಿದೆ. ಇದು ವಿದ್ಯುತ್ ಕ್ಷೇತ್ರವನ್ನು ಅಪಾಯಕ್ಕೆ ಸಿಲುಕಿಸಲಿದೆ. ಸಾರ್ವಜನಿಕರಿಗೆ ಅಗತ್ಯವಾಗಿರುವ ವಿದ್ಯುತ್ ಸೌಲಭ್ಯ ಭವಿಷ್ಯದಲ್ಲಿ ದುಬಾರಿಯಾಗಲಿದೆ" ಎಂದು ಆತಂಕ ವ್ಯಕ್ತಪಡಿಸಿದರು.

"ವಿದ್ಯುತ್ ವಲಯದ ಎಲ್ಲಾ ಸಿಬ್ಭಂದಿಗಳು ಕೆಲಸ ಬಹಿಷ್ಕಾರ ಮಾಡಿ ಚಳವಳಿ ನಡೆಸಲಿದ್ದೇವೆ. ವಿದ್ಯುತ್ ವಲಯ ಬಂಡವಾಳಶಾಹಿಗಳ ಅಧೀನಕ್ಕೆ ಒಳಪಟ್ಟರೆ ಜನರಿಗೆ ಮಾರಕವಾಗಿ ಪರಿಣಮಿಸಲಿದೆ" ಎಂದುದ ರಾಮಕೃಷ್ಣಯ್ಯ ಹೇಳಿದರು.
ಸಂಸತ್ನಲ್ಲಿ ಮಂಡನೆ; ಕೇಂದ್ರ ಸರ್ಕಾರ ವಿದ್ಯುತ್ (ತಿದ್ದುಪಡಿ) ಮಸೂದೆ-2021 ಅನ್ನು ಮಂಗಳವಾರ ಸಂಸತ್ನಲ್ಲಿ ಮಂಡಿಸಲು ಚಿಂತನೆ ನಡೆಸಿದೆ. ಇದನ್ನು ವಿರೋಧಿಸಿ ವಿದ್ಯುತ್ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನಲೆಯಲ್ಲಿ ಮಂಗಳವಾರ ಮುಷ್ಕರಕ್ಕೆ ಕರೆ ನೀಡಲಾಗಿದೆ.
ವಿದ್ಯುತ್ ಉದ್ಯೋಗಿಗಳು ಮತ್ತು ಇಂಜಿನಿಯರ್ಗಳ ರಾಷ್ಟ್ರೀಯ ಸಹಕಾರ ಸಮಿತಿ (ಎನ್ಸಿಸಿಒಇಇಇ) ಸಹ ಸಂಚಾಲಕ ಶೈಲೇಂದ್ರ ದುಬೆ ಈ ಕುರಿತು ಮಾತನಾಡಿದ್ದಾರೆ. "ಸರ್ಕಾರ ಸದ್ಯ ಇರುವ ವಿದ್ಯುತ್ ಪೂರೈಕೆಯ ಹಂಚಿಕಾ ವ್ಯವಸ್ಥೆಯನ್ನು ವಿಂಗಡಿಸಲು ಏಕಪಕ್ಷೀಯವಾಗಿ ನಿರ್ಧರಿಸಿದರೆ ಎನ್ಸಿಸಿಒಇಇಇಯ 25 ಲಕ್ಷ ಸದಸ್ಯರು ಒಂದು ದಿನದ ಬಂದ್ ಆಚರಣೆ ಮಾಡುತ್ತೇವೆ" ಎಂದು ಹೇಳಿದ್ದಾರೆ.
ಬಂದ್ ನಡೆಸುವ ಕುರಿತು ಸರ್ಕಾರಕ್ಕೆ ಈಗಾಗಲೇ ಸರ್ಕಾರಕ್ಕೆ ನೋಟಿಸ್ ನೀಡಲಾಗಿದೆ. ಸರ್ಕಾರ ತನ್ನ ನಿರ್ಧಾರ ಬದಲಿಸದಿದ್ದರೆ ಮುಂದಿನ ಹೋರಾಟದ ಯೋಜನೆ ರೂಪಿಸಲಾಗುತ್ತದೆ. ಮಸೂದೆ ಜನವಿರೋಧಿ ಮತ್ತು ಕಾರ್ಪೊರೇಟ್ ಕಂಪನಿಗಳ ಪರವಾಗಿದೆ ಎಂದು ಉದ್ಯೋಗಿಗಳು ಆರೋಪಿಸುತ್ತಿದ್ದಾರೆ.
ಉದ್ಯೋಗಿಗಳ ವಿರೋಧ ಏಕೆ?; ಕೇಂದ್ರ ಸರ್ಕಾರ ವಿದ್ಯುತ್ (ತಿದ್ದುಪಡಿ) ಮಸೂದೆ-2021 ಮೂಲಕ ವಿದ್ಯುತ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಹೊರಟಿದೆ. ಆದರೆ, ಉದ್ಯೋಗಿಗಳು ಮಸೂದೆ ಮಂಡನೆಗೂ ಮುನ್ನವೇ ಇದನ್ನು ವಿರೋಧಿಸುತ್ತಿದ್ದಾರೆ.
ನೂತನ ಮಸೂದೆ ಅನ್ವಯ ಮೊಬೈಲ್ ಕಂಪನಿಗಳ ಮಾದರಿಯಲ್ಲಿ ಗ್ರಾಹಕರು ವಿದ್ಯುತ್ ಒದಗಿಸುವ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಇದರ ಜೊತೆಗೆ ವಿದ್ಯುತ್ ಕ್ಷೇತ್ರದಲ್ಲಿ ಸ್ಪರ್ಧೆ, ಮೇಲ್ಮನವಿ ನ್ಯಾಯಮಂಡಳಿಯನ್ನು ಬಲಪಡಿಸುವುದು, ನವೀಕರಿಸಬಹುದಾದದ ವಿದ್ಯುತ್ ಖರೀದಿ ಒಪ್ಪಂದ ಸೇರಿದಂತೆ ಹಲವಾರು ಹೊಸ ಅಂಶಗಳಿವೆ.
ಸರ್ಕಾರ ಈಗಾಗಲೇ ನೂತನ ಮಸೂದೆ ಟಿಪ್ಪಣಿಯನ್ನು ವಿವಿಧ ಸಚಿವಾಲಯಗಳಿಗೆ ಕಳಿಸಿದೆ. ಕಾನೂನು ಸಚಿವಾಲಯ ಮಾತ್ರ ಕೆಲವು ವಿವರಣೆಗಳನ್ನು ಕೇಳಿ ಪಡೆದುಕೊಂಡಿದೆ. ಆಗಸ್ಟ್ 10ರಂದು ಮೂಸೂದೆ ಲೋಕಸಭೆಯಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ.
ಮಸೂದೆಯಿಂದಾಗಿ ವಿದ್ಯುತ್ ಕ್ಷೇತ್ರ ಖಾಸಗೀಕರಣವಾಗುತ್ತದೆ ಎಂದು ಉದ್ಯೋಗಿಗಳು ಆರೋಪವನ್ನು ಮಾಡುತ್ತಿದ್ದಾರೆ. ಆದ್ದರಿಂದ ಮಸೂದೆ ವಿರೋಧಿಸಿ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದಾರೆ. ದೇಶಾದ್ಯಂತ ಉದ್ಯೋಗಿಗಳು ಕೆಲಸವನ್ನು ಬಹಿಷ್ಕಾರ ಮಾಡಿ ಮಂಗಳವಾರ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ.
ನೌಕರರು ಕೆಲಸ ಬಹಿಷ್ಕಾರ ಮಾಡುವುದರಿಂದ ಮಂಗಳವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ. ಒಂದು ವೇಳೆ ವಿದ್ಯುತ್ ಪೂರೈಕೆಯಲ್ಲಿ ತಡೆ ಉಂಟಾದರೆ ನೌಕರರು ಅದನ್ನು ಸರಿಪಡಿಸಲು ಮುಂದಾಗುವ ಸಾಧ್ಯತೆ ಕಡಿಮೆ ಇದೆ. ಕರ್ನಾಟಕದಲ್ಲಿಯೂ ನೌಕರರು ಕೆಲಸ ಬಹಿಷ್ಕಾರ ಮಾಡಿ ಮುಷ್ಕರಕ್ಕೆ ಬೆಂಬಲ ನೀಡಲಿದ್ದಾರೆ.












Click it and Unblock the Notifications