ಹೊಸ ಸಚಿವರಿಗೆ ಖಾತೆ ಹಂಚಿಕೆ: ದಿನಾಂಕ ನಿಗದಿಪಡಿಸಿದ ಯಡಿಯೂರಪ್ಪ
ಬೆಂಗಳೂರು, ಫೆಬ್ರವರಿ 08: ಎಲ್ಲ ಅಡೆ-ತಡೆಗಳನ್ನು ದಾಟಿ ಅಂತೂ ಇಂತೂ ಯಡಿಯೂರಪ್ಪ ಅವರು ಎರಡನೇ ಹಂತದ ಸಂಪುಟ ವಿಸ್ತರಣೆ ಮಾಡಿದ್ದಾರೆ. ಈಗ ಖಾತೆ ಹಂಚಿಕೆ ತಲೆನೋವು ಶುರುವಾಗಿದೆ.
ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ, 'ಲಾಭದಾಯಕ' ಖಾತೆಗಳಿಗಾಗಿ ಸಚಿವರುಗಳು ಯಡಿಯೂರಪ್ಪ ಮೇಲೆ ಒತ್ತಡ ಹೇರುತ್ತಿದ್ದಾರೆ. ಪ್ರಭಾವಿ ಖಾತೆಗಳನ್ನು ಹೊಂದಿರುವವರು ಅದನ್ನು ಉಳಿಸಿಕೊಳ್ಳಲು ಪ್ರಯತ್ನಗಳನ್ನು ಆರಂಭಿಸಿದ್ದಾರೆ.
ಹೊಸ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲು ದಿನಾಂಕವನ್ನು ಯಡಿಯೂರಪ್ಪ ಅವರು ನಿಗದಿಪಡಿಸಿದ್ದು, ಸೋಮವಾರ ಹೊಸ ಸಚವರಿಗೆ ಖಾತೆ ಹಂಚಲಾಗುತ್ತದೆ ಎಂದಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಯಾವ ಸಚಿವರಿಗೆ ಯಾವ ಖಾತೆ ನೀಡಬೇಕು ಎಂಬ ಪಟ್ಟಿ ಈಗಾಗಲೇ ತಯಾರಾಗಿದೆ. ಸೋಮವಾರ ಹಂಚಿಕೆ ಮಾಡಲಾಗುವುದು' ಎಂದಿದ್ದಾರೆ.
ಇಂದು ಮತ್ತು ನಾಳೆ (ಶನಿವಾರ ಮತ್ತು ಭಾನುವಾರ) ರಜಾ ದಿನವಾದ್ದರಿಂದ ಪಟ್ಟಿಯನ್ನು ಪ್ರಕಟಿಸಲಾಗುತ್ತಿಲ್ಲ. ಹಾಗಾಗಿ ಸೋಮವಾರ ಪಟ್ಟಿಯನ್ನು ಪ್ರಕಟಿಸುತ್ತೇವೆ ಎಂದು ಮಾಧ್ಯಮದವರಿಗೆ ಭರವಸೆ ನೀಡಿದರು.
ಖಾತೆ ಹಂಚಿಕೆಯಲ್ಲಿ ಹೈಕಮಾಂಡ್ ಪ್ರಭಾವ ಇರುವುದಿಲ್ಲ. ಖಾತೆ ಹಂಚಿಕೆ ಯಡಿಯೂರಪ್ಪ ಅವರದ್ದೇ ನಿರ್ಣಯವಾಗಿರುತ್ತದೆ. ಈ ಬಗ್ಗೆಯೂ ಹೇಳಿದ ಅವರು, ಖಾತೆ ಹಂಚಿಕೆ ಬಗ್ಗೆ ಚರ್ಚೆಗೆ ದೆಹಲಿಗೆ ಹೋಗುವುದಿಲ್ಲ ಎಂದಿದ್ದಾರೆ.
ಉಪಚುನಾವಣೆಯಲ್ಲಿ ಗೆದ್ದು ಬಂದ ಅರ್ಹರಾಗಿರುವ ಹತ್ತು ಶಾಸಕರು ಗುರುವಾರದಂದು ಪ್ರಮಾಣ ವಚನ ಸ್ವೀಕಾರ ಮಾಡಿ ಸಚಿವರಾಗಿದ್ದಾರೆ. ಇವರುಗಳು ಪ್ರಭಾವಿ ಖಾತೆಗಾಗಿ ಈಗಾಲಗೇ ಯಡಿಯೂರಪ್ಪ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾರೆ.












Click it and Unblock the Notifications