ಸಿಎಂ ಸಿದ್ದರಾಮಯ್ಯ ಅವರ ನಡೆಯ ಸುತ್ತ ಪ್ರಶ್ನೆಗಳ ಹುತ್ತ!
ಬೆಂಗಳೂರು, ಏಪ್ರಿಲ್ 29: ಒಂದು ಪಕ್ಷ ಅಧಿಕಾರಕ್ಕೆ ಬಂದ ನಂತರ ಏನೇ ರಾಜಕೀಯ ಮಾಡಿದರೂ ಆಡಳಿತ ನಡೆಸುವ ವೇಳೆ ರಾಜಕೀಯ ಮುಕ್ತವಾಗಿರಬೇಕು. ಟೀಕೆ, ಟಿಪ್ಪಣಿಗಳು ಬಂದಾಗಲೂ ಅದೆಲ್ಲವನ್ನು ಆರೋಗ್ಯಕರವಾಗಿ ಸ್ವೀಕರಿಸಬೇಕಾಗುತ್ತದೆ. ಆದರೆ ಅದ್ಯಾಕೋ ಗೊತ್ತಿಲ್ಲ ರಾಜ್ಯ ರಾಜಕೀಯದಲ್ಲಿ ಅದರಲ್ಲೂ ಆಡಳಿತರೂಢ ನಾಯಕರು ಎಲ್ಲವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಿದ್ದರೇನೋ ಎಂಬ ಭಾವನೆ ಮೂಡಲಾರಂಭಿಸಿದೆ. ಈ ರೀತಿಯ ವರ್ತನೆಗಳೇಕೆ? ಇದು ಎಷ್ಟರ ಮಟ್ಟಿಗೆ ಸರಿ ಎಂಬಿತ್ಯಾದಿ ಪ್ರಶ್ನೆಗಳು ಜನರಲ್ಲಿ ಹುಟ್ಟಿಕೊಳ್ಳಲಾರಂಭಿಸಿದೆ. ಅದರಲ್ಲೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ, ನಡೆ ನುಡಿಗಳು ಅಚ್ಚರಿ ಹುಟ್ಟಿಸುತ್ತಿವೆ.
ಯಾವುದೇ ರಾಜಕೀಯ ಪಕ್ಷವಿರಲಿ ಅದು ಅಧಿಕಾರ ಹಿಡಿದ ಬಳಿಕ ಸರ್ವಜನರ ಪಕ್ಷವಾಗಬೇಕು. ವಿಪಕ್ಷ, ಜನ ಎಲ್ಲರಿಂದಲೂ ಹೊಗಳಿಕೆ ಮಾತ್ರವಲ್ಲದೆ ಟೀಕೆ, ವಿರೋಧ, ಆರೋಪ, ಪ್ರತಿಭಟನೆ ಹೀಗೆ ಎಲ್ಲವನ್ನು ಸಮವಾಗಿ ಸ್ವೀಕರಿಸುವ ತಾಳ್ಮೆಯನ್ನು ಹೊಂದಿರಬೇಕಾಗುತ್ತದೆ. ಜತೆಗೆ ಎಲ್ಲವನ್ನೂ ಜಾಗರೂಕತೆಯಿಂದ ನಿಭಾಯಿಸುವ ಶಕ್ತಿಯನ್ನು ಹೊಂದಿರ ಬೇಕಾಗುತ್ತದೆ. ಪ್ರತಿಭಟನೆ ಮಾಡಿದ ತಕ್ಷಣ ಪ್ರತಿಭಟನಾಕಾರರ ಮೇಲೆ ಗೋಲಿಬಾರ್ ಮಾಡಿಸಲು ಸಾಧ್ಯವಿಲ್ಲ. ಪ್ರತಿಭಟನೆಯ ಹಕ್ಕನ್ನು ಹತ್ತಿಕ್ಕಲು ಸಾಧ್ಯವೇ ಇಲ್ಲ ಏಕೆಂದರೆ ಪ್ರತಿಭಟನೆಯ ಹಕ್ಕನ್ನು ಸಂವಿಧಾವೇ ನೀಡಿದೆ. ಹೀಗಾಗಿ ಪ್ರತಿಭಟನೆ ಮಾಡುವವರ ಮನವೊಲಿಸಿ ಅದನ್ನು ತಡೆಯುವ ಜಾಣ್ಮೆ ಬೆಳೆಸಿಕೊಳ್ಳಬೇಕಾಗುತ್ತದೆ.

ಇನ್ನು ರಾಜಕೀಯವಾಗಿ ನಾಯಕರು ಆ ಪಕ್ಷ, ಈ ಪಕ್ಷವೆಂದು ಕಿತ್ತಾಡುವುದು ಇದ್ದದ್ದೇ.. ಇದನ್ನು ಜನ ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂದರೆ ಅದು ಮೂರ್ಖತನವಾಗಿ ಬಿಡುತ್ತದೆ. ರಾಜಕಾರಣಿಗಳು ವೇದಿಕೆಯಲ್ಲಿ ಏನೇನೋ ಹೇಳಬಹುದು ಆದರೆ ಅದೆಲ್ಲವೂ ಆಗುವುದಿಲ್ಲ. ಮತ್ತು ರಾಜಕಾರಣಿಗಳು ಹೇಳಿದ ತಕ್ಷಣವೇ ಎಲ್ಲವೂ ಆಗಿಹೋಯಿತು ಎಂದು ನಂಬುವಷ್ಟರ ಮಟ್ಟಿಗೆ ಜನರೂ ದಡ್ಡರಾಗಿಲ್ಲ. ಎಲ್ಲರೂ ಅವರವರ ರಾಜಕೀಯ ಲಾಭಕ್ಕಾಗಿ ಮಾಡುತ್ತಾರೆ ಎಂಬುದು ಜನರೆಲ್ಲರಿಗೂ ಗೊತ್ತಿರುವ ವಿಚಾರವೇ.
2013ರಿಂದ 2018ರವರೆಗೆ ಸಿಎಂ ಆಗಿ ಆಡಳಿತ ನಡೆಸಿದ ಸಿದ್ದರಾಮಯ್ಯರವರನ್ನು ನೋಡಿದರೆ 2023ರಿಂದ ಆರಂಭದವಾದ ಆಡಳಿತದಲ್ಲಿ ಹಿಂದಿನ ಆ ಸಿದ್ದರಾಮಯ್ಯರನ್ನು ನೋಡಲು ಸಾಧ್ಯವೇ ಇಲ್ಲದಾಗಿದೆ. ಈಗಿನ ಅವರ ಸರ್ಕಾರದಲ್ಲಿ ಹಗರಣಗಳ ಆರೋಪಗಳು ಕೇಳಿ ಬರುತ್ತಿವೆ ಬೆಲೆ ಏರಿಕೆಯ ಬಿಸಿ ಮುಟ್ಟುತ್ತಿದೆ. ಓಲೈಕೆಯ ರಾಜಕೀಯ ಎದ್ದು ಕಾಣಿಸುತ್ತಿದೆ. ಅದಕ್ಕಿಂತ ಹೆಚ್ಚಾಗಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಅವರ ನಡೆಯಂತು ಆಕ್ರೋಶಕ್ಕೆ ಕಾರಣವಾಗುತ್ತಿದೆ. ಅಧಿಕಾರಿಗಳ ಜತೆ ನಡೆದುಕೊಳ್ಳುವ ರೀತಿ, ನೀತಿಗಳು ಅವರ ವ್ಯಕ್ತಿತ್ವವನ್ನು ಪ್ರಶ್ನಿಸುವಂತೆ ಮಾಡಿದೆ. ಏಕೆ ಹೀಗೆ?

ಸಮಾಜವಾದದ ಹಿನ್ನಲೆಯಲ್ಲಿ ಬಂದಿದ್ದ ಸಿದ್ದರಾಮಯ್ಯರವರು ಒಂದು ಕಾಲದಲ್ಲಿ ಇಂದಿರಾಗಾಂಧಿ ವಿರುದ್ಧವೇ ಹೋರಾಟ ಮಾಡಿದ್ದವರು. ಅವರಿಗೆ ಕಪ್ಪುಪಟ್ಟಿ ಪ್ರದರ್ಶನ ಮಾಡಿ ಜೈಲಿಗೆ ಹೋಗಿದ್ದರು. ಅಂತಹ ಸಿದ್ದರಾಮಯ್ಯರವರು ಇವತ್ತು ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಕಪ್ಪುಪಟ್ಟಿ ತೋರಿಸಿದ ತಕ್ಷಣ ರೊಚ್ಚಿಗೆದ್ದು ಒಬ್ಬ ಪೊಲೀಸ್ ಅಧಿಕಾರಿಗೆ ಕೈಎತ್ತಲು ಹೋಗುವುದೆಷ್ಟು ಸರಿ? ಈ ಸಂದೇಶ ಸಮಾಜಕ್ಕೆ ಯಾವ ರೀತಿಯಲ್ಲಿ ರವಾನೆಯಾಗುತ್ತದೆ ಎಂಬುದು ಗೊತ್ತಾಗುವುದಿಲ್ಲವೆ? ಈ ಘಟನೆ ಬಳಿಕ ಆಡಳಿತ ಪಕ್ಷವಾಗಿ ಸಿಎಂ, ಡಿಸಿಎಂ ಮತ್ತು ಸಚಿವರು ನೀಡಿರುವ ಹೇಳಿಕೆಗಳು ರಾಜ್ಯದಲ್ಲಿ ನಾಳೆ ಸಂಘರ್ಷಕ್ಕೆ ದಾರಿ ಮಾಡಿಕೊಡುವುದಿಲ್ಲವೆ?
ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆವೇಶದ ಮಾತುಗಳನ್ನಾಡುವ ಬದಲಿಗೆ ಎಲ್ಲವನ್ನೂ ಸಮಾಧಾನವಾಗಿ ನಿಭಾಯಿಸುವುದು ಹೇಗೆ ಎಂಬುದನ್ನು ಅರಿತು ಅದರಂತೆ ನಡೆದುಕೊಳ್ಳುವುದೇ ನಿಜವಾದ ಆಡಳಿತದ ವೈಖರಿಯಾಗುತ್ತದೆ. ಅದರಲ್ಲೂ ಅಧಿಕಾರಿಗಳಿಗೆ ಸಾರ್ವಜನಿಕವಾಗಿ ಏಕವಚನದಲ್ಲಿ ಮಾತನಾಡುವುದು, ಅವಮಾನ ಮಾಡುವುದು, ಕೈಎತ್ತುವುದು ಯಾವ ನಾಗರಿಕ ಸಮಾಜವೂ ಒಪ್ಪುವುದಿಲ್ಲ. ಇಷ್ಟಕ್ಕೂ ಸಿದ್ದರಾಮಯ್ಯರವರು ಸಿಎಂ ಆದ ಬಳಿಕ ನೆಮ್ಮದಿಯಾಗಿದ್ದಂತೆ ಕಾಣುತ್ತಿಲ್ಲ. ವಿವಾದಗಳು ಅವರನ್ನು ಸುತ್ತಿಕೊಳ್ಳುತ್ತಿದೆ. ಅವರ ಮಾತುಗಳು ವಿವಾದವಾಗಿ ರೂಪುಗೊಳ್ಳುತ್ತಿದೆ. ಹೀಗಾಗಿಯೇ ಅವರು ಈ ವರ್ತಿಸುತ್ತಿದ್ದಾರಾ?

ಈ ಹಿಂದೆಯೇ ರಾಜಕೀಯದಿಂದ ದೂರವಾಗುತ್ತೇನೆ ಎಂದು ಘೋಷಣೆ ಮಾಡಿದ್ದ ಅವರು 2023ರಲ್ಲಿ ಅತ್ಯಧಿಕ ಸ್ಥಾನ ಪಡೆದು ಕಾಂಗ್ರೆಸ್ ಆಡಳಿತದ ಅಧಿಕಾರ ಹಿಡಿದಾಗ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯರ ನಡುವೆ ಸಿಎಂ ಸ್ಥಾನಕ್ಕಾಗಿ ಜಟಾಪಟಿ ನಡೆದಿತ್ತು. ಅದಾದ ನಂತರ ಸಿಎಂ ಆದರು. ಆದರೆ ಅಧಿಕಾರ ಹಂಚಿಕೆಯ ಒಪ್ಪಂದ ನಡೆದಿದೆ ಎನ್ನುವುದು ಗುಸುಗುಸು ಸುದ್ದಿಯಾಗಿಯೇ ಉಳಿದಿದೆ. ಅದು ನಿಜವೇ ಆದರೆ ಐದು ವರ್ಷಗಳ ಅವಧಿಯ ಅಧಿಕಾರವನ್ನು ಪೂರ್ಣಗೊಳಿಸಬೇಕೆನ್ನುವ ಅವರ ಬಯಕೆ ಈಡೇರುವುದಿಲ್ಲ. ಆ ವಿಚಾರವೂ ಅವರಿಗೆ ಇರಿಸುಮುರಿಸು ತರುತ್ತಿದೆಯಾ?
ಸದ್ಯದ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಬಗ್ಗೆ ನೋಡಿದ್ದೇ ಆದರೆ ಅವರಿಗೆ ಎಲ್ಲೋ ಒಂದು ಕಡೆ ರಾಜಕೀಯ ಅಸ್ಥಿರತೆಯ ಭಯ ಹುಟ್ಟಿಕೊಂಡಿದೆಯಾ? ಎಂಬ ಪ್ರಶ್ನೆ ಕಾಡದಿರದು. ಸಿಎಂ ಅವಧಿಯನ್ನು ಪೂರ್ಣಗೊಳಿಸುತ್ತೇನೆ ಎಂಬ ನಂಬಿಕೆ ಇದ್ದಂತೆ ಕಾಣಿಸುತ್ತಿಲ್ಲ. ಜತೆಗೆ ಅವರು ರಾಷ್ಟ್ರರಾಜಕಾರಣಕ್ಕೆ ಹೋಗಿ ಅಲ್ಲಿ ನೆಲೆಯೂರಲು ಸಾಧ್ಯವಿದೆಯಾ ಅದು ಕಷ್ಟವೇ. ಹೀಗಾಗಿ ಅಧಿಕಾರ ಹಂಚಿಕೆಯಾಗದಂತೆ ನೋಡಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿದ್ದಾರಾ?. ಹೀಗಾಗಿಯೇ ಒಂದಲ್ಲ ಒಂದು ರೀತಿಯ ರಾಜಕೀಯ ಸರ್ಕಸ್ ಮಾಡುತ್ತಿದ್ದಾರಾ? ಹೀಗೆ ಮಾಡುವಾಗ ಎಡವಟ್ಟುಗಳನ್ನು ಮಾಡಿ ಬಿಜೆಪಿಗೆ ಅಸ್ತ್ರಕೊಡುತ್ತಿದ್ದಾರಾ? ಸದ್ಯಕ್ಕೆ ಸಿದ್ದರಾಮಯ್ಯನವರ ಸುತ್ತಲೂ ಬರೀ ಪ್ರಶ್ನೆಗಳೇ ಹುಟ್ಟಿಕೊಳ್ಳುತ್ತಿವೆ. ಮುಂದೇನು? ಕಾದು ನೋಡೋಣ.












Click it and Unblock the Notifications