ಪರಿಷತ್ ಚುನಾವಣೆ ಫಲಿತಾಂಶ ಪ್ರಕಟ; ಯಾರು, ಏನು ಹೇಳಿದರು?
ಬೆಂಗಳೂರು, ಡಿಸೆಂಬರ್ 14; ಕರ್ನಾಟಕದ ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ ಮಂಗಳವಾರ ನಡೆಯಿತು. ಆಡಳಿತಾರೂಢ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆದ್ದು, ವಿಧಾನ ಪರಿಷತ್ನಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ.
25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ ಎದುರಾಗಿತ್ತು. 6 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದ ಜೆಡಿಎಸ್ ಹಾಸನದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ದೇವೇಗೌಡ ಕುಟುಂಬದ ಮತ್ತೊಂದು ಕುಡಿ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದೆ. ಹಾಸನದಲ್ಲಿ ಎಚ್. ಡಿ. ರೇವಣ್ಣ ಪುತ್ರ ಡಾ. ಸೂರಜ್ ರೇವಣ್ಣ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಬೀದರ್, ವಿಜಯಪುರ (ದ್ವಿ-ಸದಸ್ಯ ಕ್ಷೇತ್ರ), ದಕ್ಷಿಣ ಕನ್ನಡ (ದ್ವಿ-ಸದಸ್ಯ ಕ್ಷೇತ್ರ), ಕೋಲಾರ, ಬೆಂಗಳೂರು ಗ್ರಾಮಾಂತರ, ಧಾರವಾಡ (ದ್ವಿ-ಸದಸ್ಯ ಕ್ಷೇತ್ರ), ರಾಯಚೂರು, ಬೆಳಗಾವಿ, ಮಂಡ್ಯ, ಮೈಸೂರು, ತುಮಕೂರು ಸೇರಿ 11 ಸ್ಥಾನಗಳಲ್ಲಿ ಜಯಗಳಿಸಿದೆ. ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲಿನ ರುಚಿ ತೋರಿಸಿದೆ.
ಬಿಜೆಪಿ ಕೊಡಗು, ಬೆಂಗಳೂರು, ಚಿತ್ರದುರ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಬಳ್ಳಾರಿ, ಶಿವಮೊಗ್ಗ, ಕಲಬುರಗಿ, ದಕ್ಷಿಣ ಕನ್ನಡ (ದಿ-ಸದಸ್ಯ ಕ್ಷೇತ್ರ), ಧಾರವಾಡ (ದ್ವಿ-ಸದಸ್ಯ ಕ್ಷೇತ್ರ), ವಿಜಯಪುರ (ದ್ವಿ-ಸದಸ್ಯ ಕ್ಷೇತ್ರ)ದಲ್ಲಿ ಗೆಲುವು ಸಾಧಿಸಿದೆ. ಬೆಳಗಾವಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ.
ಚುನಾವಣೆ ಫಲಿತಾಂಶದ ಬಗ್ಗೆ ವಿವಿಧ ನಾಯಕರು ಪತಿಕ್ರಿಯೆ ನೀಡಿದ್ದಾರೆ.

ಇದು ಜನಾಭಿಪ್ರಾಯವಲ್ಲ
ವಿಧಾನ ಪರಿಷತ್ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, "ಇದು ಜನಾಭಿಪ್ರಾಯವಲ್ಲ. ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ನೀಡಿರುವ ತೀರ್ಪು, ಅದು ನಮ್ಮ ಪರವಾಗಿದೆ" ಎಂದು ಹೇಳಿದರು.
"ನಾವು 12 ಸ್ಥಾನಗಳಲ್ಲಿ ಗೆಲ್ಲಬಹುದು ಎಂಬ ನಿರೀಕ್ಷೆ ಇತ್ತು. ಚಿಕ್ಕಮಗಳೂರಿನಲ್ಲಿ ಗಾಯತ್ರಿ ಕೇವಲ 6 ಮತಗಳಲ್ಲಿ ಸೋತರು. ಅಲ್ಲಿ 10 ಮಂದಿ ನಾಮ ನಿರ್ದೇಶಿತ ಸದಸ್ಯರು ಮತ ಹಾಕಿಲ್ಲ, ಮತದಾನ ಮಾಡಿದ್ದರೆ ಅವರು ಗೆಲ್ಲುತ್ತಿದ್ದರು. ಉಳಿದ ಕಡೆ ನಾವು ಉತ್ತಮ ಪೈಪೋಟಿ ನೀಡಿದ್ದೇವೆ" ಎಂದರು.

ಕಾಂಗ್ರೆಸ್ಗೆ ಭವಿಷ್ಯವಿಲ್ಲ; ಶ್ರೀರಾಮುಲು
ಸಾರಿಗೆ ಸಚಿವ ಬಿ. ಶ್ರೀರಾಮುಲು ಫಲಿತಾಂಶದ ಬಗ್ಗೆ ಮಾತನಾಡಿ, "ಸುಮಾರು 14 ಕ್ಷೇತ್ರಗಳನ್ನು ಗೆಲ್ಲುವ ಸನಿಹದಲ್ಲಿದ್ದೇವೆ. ಪರಿಷತ್ನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗುತ್ತೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಟ್ಟ ಉತ್ತಮ ಆಡಳಿತವನ್ನು ನೋಡಿ ಜನರು ಉತ್ತಮ ಫಲಿತಾಂಶ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ಗೆ ಭವಿಷ್ಯ ಇಲ್ಲ" ಎಂದು ಹೇಳಿದರು.

ಕಳೆದ ಬಾರಿ ಸೋತ ಕ್ಷೇತ್ರ ಗೆದ್ದಿದ್ದೇವೆ
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾತನಾಡಿ, "ಡಬಲ್ ಡಿಜಿಟ್ ಅಂತೂ ನಾವು ಕ್ರಾಸ್ ಮಾಡುತ್ತೇವೆ. ಈ ಬಗ್ಗೆ ನಮಗೆ ಖಂಡಿತ ವಿಶ್ವಾಸವಿದೆ. ಪರಿಷತ್ನಲ್ಲಿ ಬಹುಮತ ಇದೆಯೋ, ಇಲ್ಲವೋ ಎಂಬುದನ್ನು ನಾವು ತಲೆಯಲ್ಲಿ ಇಟ್ಟುಕೊಂಡಿಲ್ಲ. ಅವರ ಸರ್ಕಾರಕ್ಕೆ ಬಹುಮತವಿಲ್ಲ, ವಾಮ ಮಾರ್ಗದ ಮೂಲಕ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕಳೆದ ಬಾರಿ ಸೋತ ಕ್ಷೇತ್ರಗಳಲ್ಲಿ ಈ ಬಾರಿ ನಾವು ಗೆದ್ದಿದ್ದೇವೆ. ಜನರ ನಮ್ಮ ಪರವಾಗಿದ್ದಾರೆ" ಎಂದರು.

ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಫೇಸ್ಬುಕ್ ಪೋಸ್ಟ್ ಹಾಕಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಗೆದ್ದ ಬಿಜೆಪಿಯ ಗಣಪತಿ ಉಳ್ವೇಕರ್ಗೆ ಸಮಸ್ತ ಕಾರ್ಯಕರ್ತರ ಪರವಾಗಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪನವರಿಗೆ ಕೊಟ್ಟ ಮಾತಿನಂತೆ ಅಭ್ಯರ್ಥಿ ಗಣಪತಿ ಉಳ್ವೇಕರ್ ಅವರ ಗೆಲುವಿಗೆ ಶ್ರಮಿಸಿದ ಜಿಲ್ಲೆಯ ಸಂಸದರು, ಶಾಸಕರು, ಜಿಲ್ಲಾಧ್ಯಕ್ಷರು, ಪಕ್ಷದ ವಿವಿಧಸ್ತರದ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
|
ಹಣಬಲ, ಜನಬಲ
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, "ಹಣ ಬಲ ಮತ್ತು ಜನ ಬಲದ ನಡುವಿನ ಹೋರಾಟದಲ್ಲಿ ಜನ ಬಲಕ್ಕೆ ಸೋಲಾಗಿರುವುದು ಬೇಸರ ತಂದಿದೆ. ರಾಷ್ಟ್ರೀಯ ಪಕ್ಷಗಳ ಹಣದ ಅಬ್ಬರದಲ್ಲಿ ನಾವು ಹಿನ್ನಡೆ ಅನುಭವಿಸಿದ್ದೇವೆ. ಆಣೆ, ಪ್ರಮಾಣಗಳ ನಡುವೆಯೂ ನೈತಿಕ ನೆಲೆಯಲ್ಲಿ ಸೆಣಸಿದ್ದೇವೆ" ಎಂದು ಹೇಳಿದ್ದಾರೆ.












Click it and Unblock the Notifications