ಪಿಎಸ್ಐ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಪೊಲೀಸ್, ಶಿಕ್ಷಕರು ಭಾಗಿ
ಬೆಂಗಳೂರು, ಜನವರಿ 15 : ಪಿಎಸ್ಐ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಶಿಕ್ಷಕರು ಭಾಗಿಯಾಗಿದ್ದಾರೆ ಎಂದು ಸಿಸಿಬಿ ಶಂಕಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 16 ಜನರನ್ನು ಇದುವರೆಗೂ ಬಂಧಿಸಲಾಗಿದೆ.
ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸುತ್ತಿರುವ ಸಿಸಿಬಿ 16 ಜನರನ್ನು ಬಂಧಿಸಿದ್ದು, 41.20 ಲಕ್ಷ ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದೆ. ಬಂಧಿತರು ಬಾಗಲಕೋಟೆ, ಕೊಪ್ಪಳ, ವಿಜಯಪುರ, ಬೆಳಗಾವಿ ಮತ್ತು ರಾಯಚೂರು ಜಿಲ್ಲೆಗೆ ಸೇರಿದವರು.
ಪ್ರಶ್ನೆ ಪತ್ರಿಕೆ ನಮ್ಮ ಬಳಿ ಇದೆ ಎಂದು ನಂಬಿಸಿ ಅಭ್ಯರ್ಥಿಗಳಿಂದ ಹಣ ಪಡೆದಿದ್ದರು. ಖಾಲಿ ಚೆಕ್, ಲ್ಯಾಪ್ಟಾಪ್, ಅಭ್ಯರ್ಥಿಗಳ ಎಸ್ಎಸ್ಎಲ್ಸಿ, ಪಿಯುಸಿ ಅಂಕಪಟ್ಟಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರ ಬಳಿ ಯಾವುದೇ ಪ್ರಶ್ನೆ ಪತ್ರಿಕೆ ಇರಲಿಲ್ಲ. ಆದರೆ, 12 ಮೊದಲು ಪ್ರಶ್ನೆ ಪತ್ರಿಕೆ ನೀಡುತ್ತೇವೆ ಎಂದು ಭರವಸೆ ನೀಡಿ ಹಣವನ್ನು ಪಡೆದಿದ್ದರು. ಕೆಲವು ಶಿಕ್ಷಕರು ಮತ್ತು ಪೊಲೀಸ್ ಅಧಿಕಾರಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಸಿಬಿ ಪೊಲೀಸರು ಶಂಕಿಸಿದ್ದಾರೆ.
ಸಿಕ್ಕಿದ್ದು ಹೇಗೆ? : ಬಿಎಂಟಿಸಿ ಚಾಲಕ/ನಿರ್ವಾಹಕ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಸಂಬಂಧ ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿ ಮಾಜಿ ನೌಕರ ಬಸವರಾಜ ಭಜಂತ್ರಿ ಎಂಬಾತನನ್ನು ಬಂಧಿಸಲಾಗಿತ್ತು.
ವಿಚಾರಣೆ ವೇಳೆ ಪಿಎಸ್ಐ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ನಡೆದಿರುವ ಪ್ರಯತ್ನದ ಬಗ್ಗೆ ಆತ ಮಾಹಿತಿ ನೀಡಿದ್ದ. ಆಗ ಸಿಸಿಬಿ ಪೊಲೀಸರು ಎಂಟು ತಂಡಗಳನ್ನು ರಚನೆ ಮಾಡಿ, ರಾಜ್ಯಾದ್ಯಂತ ಕಳುಹಿಸಿದ್ದರು. ಈ ತಂಡ ಅಭ್ಯರ್ಥಿಗಳಿಂದ ಹಣ ಪಡೆದ ಸ್ಥಳಗಳ ಮೇಲೆ ದಾಳಿ ಮಾಡಿತ್ತು.
ಅಭ್ಯರ್ಥಿಗಳಿಂದ ಹಣ ಪಡೆದ ಬಗ್ಗೆ ಬಂಧಿಸಲಾದ ಆರೋಪಿಗಳನ್ನು ಎಎಸ್ಐ ಮತ್ತು ಶಿಕ್ಷಕರೊಬ್ಬರು ಸಿಕ್ಕಿಬಿದ್ದಿದ್ದಾರೆ. ಬಂಧಿತದಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಇಬ್ಬರು ಕಾನ್ಸ್ಟೇಬಲ್ಗಳು ಭಾಗಿಯಾದ ಶಂಕೆ ಇದ್ದು ಹುಡುಕಾಟ ನಡೆದಿದೆ.












Click it and Unblock the Notifications