ನೂತನ ಗೃಹ ಸಚಿವರ ಮುಂದೆ ಕರ್ನಾಟಕ ಪೊಲೀಸರ ಬೇಡಿಕೆಗಳು
ಬೆಂಗಳೂರು, ಆಗಸ್ಟ್ 11; ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಯಾಗಿದೆ. ಹೊಸ ಸಚಿವ ಸಂಪುಟ ರಚನೆಯಾಗಿದೆ. ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಗೃಹ ಸಚಿವರಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಹಲವಾರು ಬದಲಾವಣೆಗಳನ್ನು ತರುವುದಾಗಿ ಘೋಷಣೆ ಮಾಡಿದ್ದಾರೆ.
ಕರ್ನಾಟಕ ಪೊಲೀಸ್ ಮಹಾ ಸಂಘದ ಅಧ್ಯಕ್ಷ ವಿ. ಶಶಿಧರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವರ ಮುಂದೆ ಪೊಲೀಸರ ಬೇಡಿಕೆಗಳ ಪಟ್ಟಿಯನ್ನು ಇಟ್ಟಿದ್ದಾರೆ. ಬೇಡಿಕೆಗಳ ಬಗ್ಗೆ ಅವರು ಫೇಸ್ ಬುಕ್ಪೋಸ್ಟ್ ಹಾಕಿದ್ದಾರೆ.
ರಾಜಕೀಯ ವ್ಯವಸ್ಥೆಯಡಿ ಕೆಲಸ ನಿರ್ವಹಿಸಬೇಕಾದ ಈ ದಿನಮಾನಗಳಲ್ಲಿ ಪೊಲೀಸರು ಒತ್ತಡದ ನಡುವೆ ಸಿಲುಕಿ ಸಮಾಜದಲ್ಲಿ ಇನ್ನಿಲ್ಲದ ಅಪಮಾನ ಮತ್ತು ಟೀಕೆಗೆ ಗುರಿಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ ಎಂದು ವಿ. ಶಶಿಧರ್ ಫೇಸ್ಬುಕ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಪೊಲೀಸ್ ವರ್ಗಾವಣೆ ಮತ್ತು ದಿನನಿತ್ಯದ ಆಡಳಿತ ಎಲ್ಲಿಯವರೆಗೆ ರಾಜಕೀಯ ಒತ್ತಡಗಳ ನಡುವೆ ನಡೆಯುತ್ತದೆಯೋ ಅಲ್ಲಿನವರೆಗೆ ಬಹು ನಿರೀಕ್ಷಿತ ಪೊಲೀಸ್ ಸುಧಾರಣೆ ಎಂಬುದು ಮರೀಚಿಕೆಯಾಗೇ ಉಳಿದುಹೋಗಲಿದೆ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಪೊಲೀಸರ ಸ್ಥಿತಿಗತಿ ಸುಧಾರಿಸಲಿದೆಯೇ?
ವಿ. ಶಶಿಧರ್ ತಮ್ಮ ಫೇಸ್ ಬುಕ್ ಪೋಸ್ಟ್ನಲ್ಲಿ ಆತ್ಮೀಯ ಗೃಹ ಸಚಿವರಿಗೆ ನಮನಗಳು....
ಹಿಂದಿನ ಸಿದ್ದರಾಮಯ್ಯನವರ ಆಳ್ವಿಕಾವಧಿಯಲ್ಲಿ ಇನ್ನಿಲ್ಲದ ಪಾಡು ಪಟ್ಟ ನಾನು ಮತ್ತು ನನ್ನ ಖಾಕಿ ಸಮುದಾಯ ನಿಮ್ಮ ಸರ್ಕಾರದ ಆಳ್ವಿಕಾವಧಿಯಲ್ಲಾದರೂ ಈ ನಾಡಿನ ನತದೃಷ್ಟ ಪೊಲೀಸರ ಸ್ಥಿತಿಗತಿಗಳು ಸುಧಾರಿಸುತ್ತದೆನ್ನುವ ಆಶಾಭಾವನೆ ಹುಸಿಯಾಗತೊಡಗಿದೆ. ಸೌಜನ್ಯಕ್ಕಾದರೂ ನಮ್ಮೊಡನೆ ವ್ಯವಹರಿಸುವ ಅಥವಾ ಚರ್ಚಿಸುವ ವ್ಯವಧಾನ ಹಿಂದಿನ ಗೃಹ ಮಂತ್ರಿಗಳಿಗಾಗಲೀ ಅಥವಾ ಇನ್ನಿತರೆ ಸಂಬಂಧಿಸಿದವರಿಗಾಗಲೀ ಇಲ್ಲವಾಗಿದ್ದು ಈ ನಾಡಿನ ಬಡಪಾಯಿ ಪೊಲೀಸರ ಪಾಲಿಗೆ ದುರಂತವೇ ಹೌದು ಎಂದು ಹೇಳಿದ್ದಾರೆ.

ಪೊಲೀಸರ ಬಹುಮುಖ್ಯ ಬೇಡಿಕೆಗಳು
ವಿ. ಶಶಿಧರ್ ಇಂದು ಪೊಲೀಸರು ಆಡಳಿತಾತ್ಮಕ ಕಾರಣಗಳಿಗಾಗಿ ಹತ್ತು-ಹಲವು ರೀತಿಯ ತೊಂದರೆ ಮತ್ತು ತಾಪತ್ರಯಗಳಿಗೆ ಗುರಿಯಾಗುತ್ತಿದ್ದಾರೆ. ರಾಜಕಾರಣವೇ ಸರ್ವಸ್ವವಾಗಿರುವ ಈ ದಿನಮಾನಗಳಲ್ಲಿ ಪೊಲೀಸರ ಬಗ್ಗೆ ಕಾಳಜಿ ತೋರುವ ವ್ಯವಧಾನ ಸರ್ಕಾರಕ್ಕಿಲ್ಲದಿರುವುದು ಖೇಧದ ಸಂಗತಿಯೇ ಹೌದು. ಬಹು ನಿರೀಕ್ಷಿತ ಪೊಲೀಸ್ ಸುಧಾರಣೆ ಎಂಬುದು ಮರೀಚಿಕೆಯಾಗೇ ಉಳಿದುಹೋಗಲಿದೆ. ಇವೆಲ್ಲವೂ ಒತ್ತಟ್ಟಿಗಿರಲಿ ಪೊಲೀಸರ ಬಹುಮುಖ್ಯ ಬೇಡಿಕೆಗಳನ್ನು ದಾಖಲಿಸಿದ್ದೇನೆ ಎಂದು ಪಟ್ಟಿಯನ್ನು ನೀಡಿದ್ದಾರೆ.

ಪೊಲೀಸರ ಬೇಡಿಕೆಗಳು
1. ಔರಾದ್ಕರ್ ವರದಿಯಲ್ಲಿ ಸೇವಾ ಹಿರಿತನ ಹೊಂದಿದ ಸಿಬ್ಬಂದಿಗೆ ಸಾಕಷ್ಟು ಅವಮಾನ ಮತ್ತು ಅನ್ಯಾಯವಾಗಿದೆ.
2 ಅಂತರ ಜಿಲ್ಲಾ ಪೊಲೀಸ್ ವರ್ಗಾವಣೆಗಳಿಗೆ ವಿಧಿಸಲಾಗಿರುವ 7 ವರುಷಗಳ ಕಾಲಮಿತಿಯ ನಿರ್ಭಂದ ಅವೈಜ್ಞಾನಿಕವಾಗಿದ್ದು ಇದು ಪೊಲೀಸರ ಪಾಲಿಗೆ ಮರಣ ಶಾಸನವಾಗಿದೆ.
3 ಪಿಎಸ್ಐಗಳ ವರ್ಗಾವಣೆಗಳಿಗೆ ಸಂಬಂಧಪಟ್ಟಂತೆ ಕಮೀಷನರೇಟ್ ಮತ್ತು ರೇಂಜ್ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ನಡುವೆ ತಾರತಮ್ಯವೆಸಗಲಾಗುತ್ತಿದ್ದು ಇದು ನಿಲ್ಲಬೇಕಿದೆ.
4 ಪೊಲೀಸ್ ನೇಮಕಾತಿಗಳಲ್ಲಿ ಅರ್ಹ ಪೊಲೀಸರ ಮಕ್ಕಳಿಗೆ ಕನಿಷ್ಠ 10% ಒಳಮೀಸಲಾತಿಯನ್ನಾದರೂ ದೊರಕಿಸಿಕೊಡಬೇಕು.
5 ಪೊಲೀಸ್ ವರ್ಗಾವಣೆಗಳಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ ಧಿಕ್ಕರಿಸಿ ನಡೆಯುತ್ತಿರುವ ಮಿನಿಟ್ ಅಥವಾ ಶಿಫಾರಸ್ಸು ಆಧಾರಿತ ವರ್ಗಾವಣೆಗಳು ನಿಲ್ಲಬೇಕು.
Recommended Video

ಗೃಹ ಸಚಿವರ ಮುಂದೆ ಬೇಡಿಕೆಗಳು
6 ಪೊಲೀಸ್ ಅಧಿಕಾರಿಗಳ ವರ್ಗಾವಣೆಯ ಕಾಲಮಿತಿ ಕನಿಷ್ಠ ಪಕ್ಷ ಎರಡು ವರುಷಗಳಿಗಾದರೂ ವಿಸ್ತರಿಸಬೇಕು ಘನ ನ್ಯಾಯಲಯದ ಆದೇಶದನುಸಾರ.
7 ಪೊಲೀಸ್ ಆಡಳಿತ ಸುಧಾರಣಾ ದಿಸೆಯಲ್ಲಿ ಕೈಗೊಳ್ಳಲಾಗುವ ಸರ್ಕಾರೀ ತಿದ್ದುಪಡಿ, ಬದಲಾವಣೆಗಳ ವಿಷಯದಲ್ಲಿ ಪೊಲೀಸ್ ಮಹಾ ಸಂಘವನ್ನೂ ಒಳಗೊಂಡಂತೆ ಎಲ್ಲ ಆಸಕ್ತ ವ್ಯಕ್ತಿ ಮತ್ತು ಸಂಘಟನೆಗಳೊಡನೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕು ಎಂದು ಪೋಸ್ಟ್ನಲ್ಲಿ ಹೇಳಿದ್ದಾರೆ.
ಈ ಎಲ್ಲ ಪ್ರಮುಖ ಬೇಡಿಕೆಗಳ ಈಡೇರಿಕೆಯ ಒತ್ತಾಯಕ್ಕಾಗಿ ಮತ್ತು ಸಾರ್ವಜನಿಕ ಚರ್ಚೆಯ ವಿಷಯವನ್ನಾಗಿಸುವ ಸಲುವಾಗಿ ನಾನು ಮತ್ತು ನನ್ನ ಸಂಗಡಿಗರು ದಿನಾಂಕ 1/11/2021 ರಂದು ಬೆಳಗಾವಿಯ ಸುವರ್ಣಸೌಧದ ಮುಂಭಾಗದಲ್ಲಿ ಆಮರಣಾಂತ ಉಪವಾಸವನ್ನು ಕೈಗೊಳ್ಳುತ್ತೇವೆ ಎಂದು ಸಹ ಹೇಳಿದ್ದಾರೆ.












Click it and Unblock the Notifications