ಇವರೇನು ತಾಲಿಬಾನಿಗಳಲ್ಲ, ದೇಶದ್ರೋಹದ ಕೆಲಸ ಮಾಡಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್
ಮಂಗಳೂರು, ಮೇ 19: ಹಿಂದು ಕಾರ್ಯಕರ್ತರ ಮೇಲೆ ಪೊಲೀಸರ ದೌರ್ಜನ್ಯ ನಡೆಯುತ್ತಿದೆ. ಹಿಂದು ಕಾರ್ಯಕರ್ತರು ತಾಲಿಬಾನಿಗಳಲ್ಲ, ದೇಶದ್ರೋಹಿ ಕೆಲಸ ಮಾಡಿದವರಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.
ಬ್ಯಾನರ್ ವಿಚಾರದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೋಲೀಸ್ ದೌರ್ಜನ್ಯ ವಿಚಾರವಾಗಿ ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಟೀಕೆ, ಟಿಪ್ಪಣಿ, ಹೋರಾಟ, ಸಂಘರ್ಷ ಇರುತ್ತದೆ. ದೂರು ಬಂದಾಗ ತನಿಖೆ ಮಾಡಬೇಕು, ಎಚ್ಚರಿಕೆ ಕೊಡಬೇಕೇ ಹೊರತು ಚರ್ಮ ಸುಲಿಯುವಂತೆ ಹೊಡೆಯುವುದಲ್ಲ ಎಂದು ಪೋಲಿಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದ ಯತ್ನಾಳ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಹಿಂದೂ ಕಾರ್ಯಕರ್ತರ ಮಾರಣಹೋಮ ಆಗಿತ್ತು. ಇದೀಗ ಮತ್ತೆ ಅದೇ ನಾಯಕತ್ವದಲ್ಲಿ ಸರ್ಕಾರ ಬಂದಿದೆ. ನಮ್ಮ ಕಾರ್ಯಕರ್ತರಿಗೆ ಭಯ ಮತ್ತು ಅನಾಥ ಪ್ರಜ್ಞೆ ಮೂಡ್ತಾ ಇದೆ. ತಾಲಿಬಾನ್ ಸರ್ಕಾರ ಬರ್ತಾ ಇದೆ ಅಂತ ಹಿಂದೂ ಕಾರ್ಯಕರ್ತರು ಭಯಭೀತರಾಗಿದ್ದಾರೆ ಎಂದು ಟೀಕಿಸಿದರು.
ನಾವು ಹಿಂದೂಗಳು ಯಾರಿಗೂ ತೊಂದರೆ ಕೊಡುವವರಲ್ಲ, ಯಾವುದೇ ಧರ್ಮದ ವಿರುದ್ದ ಅಲ್ಲ, ನಮ್ಮ ಹೋರಾಟ ಹಿಂದುತ್ವಕ್ಕೆ. ಆದರೆ ಕೆಲವೊಂದು ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಬಂತು ಅಂತ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡಿದ್ರೆ, ನಾವು ಸಹಿಸಲ್ಲ ಎಂದು ಯತ್ನಾಳ್ ಎಚ್ಚರಿಕೆ ನೀಡಿದರು.
ಬಿಜೆಪಿ ಮತ್ತು ಹಿಂದು ಸಂಘಟನೆಗಳು ಬೇರೆ ಬೇರೆ ಎಂದು ಬಿಂಬಿಸಲಾಗಿದೆ. ಆದರೆ ಅವೆರಡೂ ಒಂದೇ ಬೇರೆ ಬೇರೆಯಲ್ಲ. ದೇಶದಲ್ಲಿ ಹಿಂದುಗಳ ರಕ್ಷಣೆ ಮಾಡುವುದು ಬಿಜೆಪಿ ನಾಯಕರ ಕೆಲಸವಾಗಿದೆ. ಹೊಡೆತಕ್ಕೆ ಒಳಗಾದ ಕಾರ್ಯಕರ್ತರಿಗೆ ಸರ್ಕಾರದಿಂದ ಪರಿಹಾರ ಸಿಗಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನೂ ರಾಜ್ಯಾಧ್ಯಕ್ಷ ಸ್ಥಾನ ವಿಚಾರವಾಗಿ ಮಾತನಾಡಿ, ನಾನು ರಾಜ್ಯಾಧ್ಯಕ್ಷ ಅಥವಾ ವಿರೋಧ ಪಕ್ಷದ ನಾಯಕನ ಸ್ಥಾನದ ಅಪೇಕ್ಷೆ ಮಾಡಿಲ್ಲ ಪಕ್ಷ ಒಂದಾಗಬೇಕು, ಪಕ್ಷದಿಂದ ದೂರವಾದ ಒಳ್ಳೆಯ ಕಾರ್ಯಕರ್ತರು ಒಟ್ಟಾಗಬೇಕು, ಮತ್ತೆ ಪಕ್ಷ ಕಟ್ಟಬೇಕಿದೆ ಎಂದು ಹೇಳಿದರು.












Click it and Unblock the Notifications