ವಿಧಾನಸಭಾ ಚುನಾವಣೆ 2023: ಪ್ರಧಾನಿ ಮೋದಿ ಅವರ ಆಕ್ಷೇಪವೇ ಬಿಜೆಪಿ ಪಟ್ಟಿ ವಿಳಂಬಕ್ಕೆ ಕಾರಣವಾಯ್ತಾ?
ಬೆಂಗಳೂರು ಏಪ್ರಿಲ್ 11: ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕರು ಮತ್ತು ಸಂಸದರ ಮಕ್ಕಳಿಗೆ ಟಿಕೆಟ್ ನೀಡಲು ಪ್ರಧಾನಿ ನರೇಂದ್ರ ಮೋದಿ ಅಸಮ್ಮತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಬಿಜೆಪಿಯ ಮೊದಲ ಪಟ್ಟಿಯನ್ನು ಸಿದ್ದ ಪಡಿಸಲು ರಾಜ್ಯ ನಾಯಕರು ಮತ್ತೆ ಚರ್ಚೆ ನಡೆಸುತ್ತಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ. ಇದರಿಂದಾಗಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಲು ಒಂದು ಅಥವಾ ಎರಡು ದಿನ ವಿಳಂಬವಾಗುವ ನಿರೀಕ್ಷೆಯಿದೆ. ಮಾತ್ರವಲ್ಲದೆ ಕೆಲವು ಸ್ಥಾನಗಳಿಗೆ ಹೊಸ ಮುಖಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ.
ಭಾನುವಾರ ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ, ಹಾಲಿ ಶಾಸಕರು ಅಥವಾ ಸಂಸದರ ಮಕ್ಕಳಿಗೆ ಸ್ಥಾನ ನೀಡುವುದಕ್ಕೆ ಅಸಮ್ಮತಿ ಸೂಚಿಸಿದ ಪ್ರಧಾನಿ ಮೋಡಿ, ಬದಲಿಗೆ ಪಕ್ಷದ ಕಾರ್ಯಕರ್ತರಿಗೆ ಸ್ಥಾನ ನೀಡಲು ಆದ್ಯತೆ ನೀಡುವುದಾಗಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಬಿವೈ ವಿಜಯೇಂದ್ರಗೆ ಕೈತಪ್ಪಿತಾ ಟಿಕೆಟ್?
ಮಾಜಿ ಮುಖ್ಯಮಂತ್ರಿ ಮತ್ತು ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಅವರು ಪ್ರಧಾನ ಮಂತ್ರಿಯವರ ಕಠಿಣ ನಿಲುವಿನಿಂದ ಅಸಮಾಧಾನಗೊಂಡಿದ್ದಾರೆ ಎಂಬ ಊಹಾಪೋಹಗಳೂ ಎದ್ದಿವೆ. ಇದರಿಂದಾಗಿ ಭಾನುವಾರದಂದು ಸಿಇಸಿ ಸಭೆಯ ಮಧ್ಯದಲ್ಲಿಯೇ ಬಿ ಎಸ್ ಯಡಿಯೂರಪ್ಪ ಎದ್ದು ಹೋಗಿದ್ದಾರೆ ಎನ್ನಲಾಗುತ್ತಿದೆ. ನಾಯಕರ ಮಕ್ಕಳಿಗೆ ಟಿಕೆಟ್ ನಿರಾಕರಣೆ ವಿಚಾರದಲ್ಲಿ ಬಿಜೆಪಿ ಕಠಿಣ ನಿಲುವು ತಾಳಿದರೆ ಬಿವೈ ವಿಜಯೇಂದ್ರಗೆ ಟಿಕೆಟ್ ಸಿಗುವುದು ಅನುಮಾನ ಎಂಬ ಊಹಾಪೋಹ ದೆಹಲಿಯಲ್ಲಿ ಇತ್ತು. ಈಗ ಮೋದಿ ಅವರು ಹೇಳಿದಂತೆ ಆದರೆ ಬಿವೈ ವಿಜಯೇಂದ್ರ ಅವರಿಗೆ ಟಿಕೆಟ್ ಕೈತಪ್ಪಲಿದೆ.
ತಡರಾತ್ರಿಯವರೆಗೂ ಸಭೆ
ಸೋಮವಾರ ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಿರಿಯ ನಾಯಕರು ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣಾ ಕಾರ್ಯತಂತ್ರದ ಕುರಿತು ಚರ್ಚಿಸಲು ರಾಜ್ಯ ನಾಯಕರೊಂದಿಗೆ ಸಭೆ ನಡೆಸಿದಾಗಲೂ ಯಡಿಯೂರಪ್ಪ ಅವರು ಹಾಜರಾಗಲಿಲ್ಲ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಮತ್ತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಭೆಯಲ್ಲಿ ಉಪಸ್ಥಿತರಿದ್ದರು.

ಮಧ್ಯಾಹ್ನ ನಡ್ಡಾ ಅವರೊಂದಿಗೆ ವಿಶೇಷ ಸಭೆ ನಡೆಸಿದ ಯಡಿಯೂರಪ್ಪ ಅವರು ತರಾತುರಿಯಲ್ಲಿ ಬೆಂಗಳೂರಿಗೆ ತೆರಳಿದರು. ನಡ್ಡಾ ತಡರಾತ್ರಿಯವರೆಗೂ ರಾಜ್ಯ ನಾಯಕರ ಜತೆ ಸಭೆ ಮುಂದುವರಿಸಿದರು. ಶಿಕಾರಿಪುರದಿಂದ ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ಯಡಿಯೂರಪ್ಪ ಪಟ್ಟು ಹಿಡಿದಿದ್ದು, ತಮ್ಮ 15 ಮಂದಿಗೆ ಸೀಟು ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಸಭೆಯಲ್ಲಿ ವಿಜಯೇಂದ್ರಗೆ ಟಿಕೆಟ್ ನೀಡುವ ನಿರ್ಧಾರವನ್ನು ಪ್ರಧಾನಿಗೆ ಬಿಟ್ಟಿದ್ದು, ಯಡಿಯೂರಪ್ಪ ಅವರ ಹಿಂಬಾಲಕರಿಗೆ ಟಿಕೆಟ್ ನೀಡುವ ಪ್ರಸ್ತಾಪವನ್ನು ನಾಯಕರು ತಳ್ಳಿಹಾಕಿದ್ದಾರೆ ಎನ್ನಲಾಗುತ್ತಿದೆ.
ರಾಜಕಾರಣಿಗಳ ಮಕ್ಕಳಿಗೆ ಟಿಕೆಟ್ ನೀಡುವುದು ಎಂದರೆ ಪಕ್ಷದಲ್ಲಿ ರಾಜವಂಶವನ್ನು ಬೆಂಬಲಿಸಿದಂತೆ. ಇದರ ವಿರೋಧಿ ನೀತಿಗೆ ಬೆಲೆ ಇಲ್ಲ ಎಂದು ಪ್ರಧಾನಿ ಸಭೆಯಲ್ಲಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಹಲವು ಹಿರಿಯ ನಾಯಕರ ಮಕ್ಕಳಿಗೆ ಪಕ್ಷದ ಟಿಕೆಟ್ ಸಿಗುವ ನಿರೀಕ್ಷೆ ದಟ್ಟವಾಗಿತ್ತು. ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದ ಯಡಿಯೂರಪ್ಪ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಈ ಹಿಂದೆಯೇ ಘೋಷಿಸಿದ್ದರು.

ಟಿಕೆಟ್ ಆಕಾಂಕ್ಷಿಗಳು ಯಾರು?
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ, ವಸತಿ ಸಚಿವ ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ, ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ ಅವರ ಪುತ್ರ ಗೋಪಾಲ್ ಕಾರಜೋಳ, ದಾವಣಗೆರೆ ಲೋಕಸಭಾ ಸದಸ್ಯ ಜಿ ಎಂ ಸಿದ್ದೇಶ್ವರ ಅವರ ಪುತ್ರ ಅನಿತ್ ಕುಮಾರ್, ಮಾಜಿ ಮುಖ್ಯಮಂತ್ರಿ ಕೆ ಇ ಕಾಂತೇಶ್ ಅವರ ಪುತ್ರ ಕೆ ಇ ಕಾಂತೇಶ್ ಸೇರಿದಂತೆ ಹಲವು ಹಿರಿಯ ನಾಯಕರ ಮಕ್ಕಳು ಟಿಕೆಟ್ ಗಾಗಿ ಸಚಿವರು ಲಾಬಿ ನಡೆಸಿದ್ದು ಕೇಂದ್ರ ನಾಯಕತ್ವಕ್ಕೆ ಅಸಮಾಧಾನ ತಂದಿದೆ ಎಂದು ಮುಖಂಡರು ಹೇಳಿದ್ದಾರೆ.
ಕೇಂದ್ರ ಚುನಾವಣಾ ಸಮಿತಿಯು ಭಾನುವಾರ 175 ಅಭ್ಯರ್ಥಿಗಳ ಅನುಮೋದಿತ ಪಟ್ಟಿಯನ್ನು ಹೊಂದಿದ್ದರೂ, ಉಳಿದ 49 ಸ್ಥಾನಗಳನ್ನು ಅಂತಿಮಗೊಳಿಸಲು ಕೇಂದ್ರ ನಾಯಕರು ರಾಜ್ಯ ನಾಯಕರೊಂದಿಗೆ ಒಂದು ದಿನ ಸಭೆ ನಡೆಸಿದರು. ಭ್ರಷ್ಟಾಚಾರದ ಆರೋಪಗಳಿಲ್ಲದೆ ಹೊಸ ಮುಖಗಳನ್ನು ಕಣಕ್ಕಿಳಿಸುವಂತೆ ಪಕ್ಷದ ಉನ್ನತ ನಾಯಕರು ರಾಜ್ಯ ನಾಯಕರಿಗೆ ಸೂಚಿಸಿದ್ದರಿಂದ, ಹೆಸರುಗಳನ್ನು ಅಂತಿಮಗೊಳಿಸಲು ನಾಯಕರು ತಡರಾತ್ರಿಯವರೆಗೂ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.
ಕೆಲವು ಕ್ಷೇತ್ರಗಳಿಗೆ ನಾಯಕರು ಇನ್ನೂ ಅಭ್ಯರ್ಥಿಗಳನ್ನು ನಿರ್ಧರಿಸಿಲ್ಲ, ಆ ಕ್ಷೇತ್ರಗಳಿಗೆ ನಾವು ವಿಸ್ತೃತ ಸಭೆ ನಡೆಸಿದ್ದೇವೆ, ಮೊದಲ ಪಟ್ಟಿಯನ್ನು ಒಂದೆರೆಡು ದಿನದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಚುನಾವಣೆಯಲ್ಲಿ ತಮ್ಮ ಹಿಂಬಾಲಕರಿಗೆ ಅವಕಾಶ ನೀಡದಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ ಎಂಬ ವದಂತಿಯನ್ನು ತಳ್ಳಿಹಾಕಿದ ಯಡಿಯೂರಪ್ಪ, ನಾನು ಅಸಮಾಧಾನಗೊಂಡಿಲ್ಲ. ನಾನು ಯಾವಾಗಲೂ ಸಂತೋಷದ ವ್ಯಕ್ತಿ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ ಎಂದಿದ್ದಾರೆ.












Click it and Unblock the Notifications