'ಅವರು ಬೈಯ್ತಾರೆ' ಎನ್ನುವ ಮೂಲಕ 'ಕರುಣೆ' ಗಿಟ್ಟಿಸಿಕೊಳ್ಳುವ ಹಳೆಯ ಚಾಳಿ ಮುಂದುವರಿಸಿದ ಮೋದಿ
ಬೀದರ್, ಏಪ್ರಿಲ್ 29: ಕರ್ನಾಟಕ ಚುನಾವಣೆ ಪ್ರಚಾರ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಬೀದರ್ ಜಿಲ್ಲೆಯ ಹುಮನಾಬಾದ್ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. 'ಅವರು ನನ್ನನ್ನು ಬೈಯುತ್ತಾರೆ' ಎನ್ನುವ ಹಳೆಯ ಕಥಾನಕವನ್ನೇ ಮತ್ತೆ ಜನರ ಮುಂದೆ ಬಿಚ್ಚಿಟ್ಟರು. ಈ ಮೂಲಕ 'ಕರುಣೆ' ಗಿಟ್ಟಿಸಿಕೊಳ್ಳುವ ಯತ್ನವನ್ನು ಪ್ರಧಾನಿ ಮೋದಿ ಮುಂದುವರಿಸಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ.
ಪ್ರಧಾನಿ ಮೋದಿ ಹೇಳಿದ್ದೇನು?
ಕಾಂಗ್ರೆಸ್ ಮತ್ತೆ ನನ್ನನ್ನು ನಿಂದಿಸಲು ಆರಂಭಿಸಿದೆ. ಪ್ರತಿ ಬಾರಿ ಕಾಂಗ್ರೆಸ್ ನನ್ನನ್ನು ನಿಂದಿಸಿದಾಗ ಕಮಲ ಅರಳುತ್ತದೆ. ಕಾಂಗ್ರೆಸ್ ನನ್ನನ್ನು 91 ಬಾರಿ ನಿಂದಿಸಿದೆ. ಕಾಂಗ್ರೆಸ್ ನಿಂದಿಸಲಿ, ನಾನು ಕರ್ನಾಟಕದ ಜನರಿಗಾಗಿ ಕೆಲಸ ಮಾಡುತ್ತಲೇ ಇರುತ್ತೇನೆ' ಎಂದು ಮೋದಿ ಹೇಳಿದರು.

'ಅವರ ಪ್ರಮುಖ ನಾಯಕರು ನನ್ನನ್ನು ನಿಂದಿಸಿದಾಗ, ಈ ಪಕ್ಷವು ಬಾಬಾ ಸಾಹಬ್ ಅಂಬೇಡ್ಕರ್ ಅವರನ್ನು ಹೇಗೆ ನಿಂದಿಸಿತು ಎಂಬುದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಕಾಂಗ್ರೆಸ್ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ರಾಕ್ಷಸ (ರಾಕ್ಷಸ), ರಾಷ್ಟ್ರದ್ರೋಹಿ (ದೇಶದ ದ್ರೋಹಿ), ದಗಾಬಾಜ್ ದೋಸ್ತ್ (ವಂಚಕ ಸ್ನೇಹಿತ) ಎಂದು ಕರೆದಿದೆ. ಈಗ ಅವರು ವೀರ್ ಸಾವರ್ಕರ್ ಅವರನ್ನು ನಿಂದಿಸುತ್ತಿದ್ದಾರೆ' ಎಂದು ಮೋದಿ ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕುರಿತು ಸಿದ್ದರಾಮಯ್ಯ ಹೇಳಿಕೆಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಕರ್ನಾಟಕದ ಲಿಂಗಾಯತರನ್ನು ಕಾಂಗ್ರೆಸ್ ಕಳ್ಳರು ಎಂದು ಟೀಕಿಸಿದೆ. ಕಾಂಗ್ರೆಸ್ನ ದೊಡ್ಡ ನಾಯಕರು ಅನಿಸಿಕೊಂಡವರೇ ಹೀಗೆ ಮಾತನಾಡುತ್ತಾರೆ. ಕಾಂಗ್ರೆಸ್ನವರು ಅಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ. ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಅವರನ್ನೂ ಬೈಯುತ್ತಿರುವ ಪಕ್ಷವದು' ಎಂದು ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರನ್ನು ವಿಷದ ಹಾವು ಎಂದಿದ್ದರು. ಖರ್ಗೆ ಅವರ ಹೆಸರನ್ನು ಉಲ್ಲೇಖಿಸಿದ ವಾಗ್ದಾಳಿ ನಡೆಸಿದ ಅವರು ಕಾಂಗ್ರೆಸ್ನವರು ದಲಿತರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಯಾರು ದೇಶಕ್ಕಾಗಿ ಕೆಲಸ ಮಾಡುತ್ತಾರೋ ಅವರನ್ನು ಅಪಮಾನಿಸುವುದು ಕಾಂಗ್ರೆಸ್ನ ಪರಂಪರೆ ಎಂದಿರುವ ಪ್ರಧಾನಿ ಮೋದಿ, 'ನನ್ನನ್ನು ನಿಂದಿಸಲು ವ್ಯರ್ಥಮಾಡುವ ಸಮಯವನ್ನು ಕಾಂಗ್ರೆಸ್ ನಾಯಕರು ಅವರ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ವಿನಿಯೋಗಿಸಿದ್ದರೆ ಅವರ ಪರಿಸ್ಥಿತಿ ಇಂದು ತುಸು ಉತ್ತಮವಿರುತ್ತಿತ್ತು. ಯಾರು ದೇಶಕ್ಕಾಗಿ ಕೆಲಸ ಮಾಡುತ್ತಾರೋ ಅವರನ್ನು ಅಪಮಾನಿಸುವುದು ಕಾಂಗ್ರೆಸ್ ಪರಂಪರೆ' ಎಂದು ಹೇಳಿದರು.
ಈ ಹಿಂದಿನಿಂದಲೂ ಪ್ರಧಾನಿ ಮೋದಿ ಅವರು ತಮ್ಮನ್ನು ಕಾಂಗ್ರೆಸ್ನವರು ಬೈಯುತ್ತಾರೆ ಎನ್ನುವ ಮೂಲಕ ಕರುಣೆ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದರು ಎಂಬುದನ್ನು ಸಾರ್ವಜನಿಕರು ಸ್ಮರಿಸಿದ್ದಾರೆ. ಈ ಹಿಂದೆ ಗುಜರಾತ್ನಲ್ಲಿ ಕಾಂಗ್ರೆಸ್ ಸೋನಿಯಾ ಗಾಂಧಿ ಅವರು 'ಮೌತ್ ಕಾ ಸೌದಾಗರ್' ಎಂಬುದನ್ನು ಚುನಾವಣೆ ಪ್ರಚಾರಕ್ಕೆ ಮೋದಿ ಬಳಸಿಕೊಂಡಿದ್ದರು.

ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ 'ನೀಚ' ಎನ್ನವ ಪದವನ್ನು ಇಟ್ಟುಕೊಂಡೇ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಈಗ ಖರ್ಗೆ ಅವರ 'ವಿಷದ ಹಾವು' ಪದವನ್ನು ಮುಂದಿಟ್ಟುಕೊಂಡು ಭಾಷಣ ಆರಂಭಿಸಿದ್ದಾರೆ. ಚುನಾವಣಾ ಪ್ರಚಾರದಾದ್ಯಂತ ಇದನ್ನೇ ಹೇಳಬಹುದು ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರ, ಹಗರಣ, ಅಭಿವೃದ್ದಿ ಕಾರ್ಯಗಳ ಬಗ್ಗೆ ಮಾತನಾಡದ ಮೋದಿ ಹಳೆಯ ನಿರೂಪಣೆ ಬಿಂಬಿಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆಗಳೂ ಎದ್ದಿವೆ. ಮೋದಿ ಅವರ ಹಳೆಯ ನಿರೂಪಣೆ ಈ ಬಾರಿಯ ಕರ್ನಾಟಕ ಚುನಾವಣೆಯಲ್ಲಿ ಕೆಲಸ ಮಾಡಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications