ಜನತಾ ಕರ್ಫ್ಯೂ: ಕರ್ನಾಟಕದ ಜಿಲ್ಲೆಗಳ ರಿಪೋರ್ಟ್...

ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು, ಪ್ರಧಾನಿ ನರೇಂದ್ರ ಮೋದಿ ಭಾರತದಾದ್ಯಂತ ಜನತಾ ಕರ್ಫ್ಯೂಗೆ ಕೊಟ್ಟಿದ್ದರು. ಇಂದು ಬೆಳಗ್ಗೆ 7 ರಿಂದ ರಾತ್ರಿ 9 ರ ತನಕ ಎಲ್ಲರೂ ಮನೆಯಲ್ಲೇ ಇರಬೇಕು. ಈ ಮೂಲಕ ವಿಶ್ವವ್ಯಾಪಿ ಹರಡುತ್ತಿರುವ ಕೊರೊನಾ ಸೋಂಕಿನ ವಿರುದ್ಧ ಹೋರಾಡಬೇಕು ಎಂದು ತಿಳಿಸಿದ್ದರು.

ಸಾಮಾಜಿಕ ಅಂತರ ಈ ಸೋಂಕಿನ ವಿರುದ್ಧ ಹೋರಾಡಲು ಬಹುಮುಖ್ಯ ಅಸ್ತ್ರವಾಗಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಜನಜಂಗುಳಿಯನ್ನು ತಡೆಯಲು ಇಂದು ಜನತಾ ಕರ್ಫ್ಯೂ ಆಚರಿಸಲಾಗುತ್ತಿದೆ. ಯಾರೂ ಮನೆಯಿಂದ ಹೊರಗೆ ಬರದಂತೆ ತಿಳಿಸಲಾಗಿದೆ. ಮೋದಿ ಕರೆ ಕೊಟ್ಟಿದ್ದ ಈ ಜನತಾ ಕರ್ಫ್ಯೂಗೆ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರತಿಕ್ರಿಯೆ ಹೇಗಿದೆ? ಜನ ಈ ಕರ್ಫ್ಯೂ ಅನ್ನು ಹೇಗೆ ಸ್ವೀಕರಿಸಿದ್ದಾರೆ, ಇಲ್ಲಿ ನೋಡೋಣ...

 ಜನತಾ ಕರ್ಫ್ಯೂಗೆ ಶಿವಮೊಗ್ಗ ಜನರಿಂದ ವ್ಯಾಪಕ ಬೆಂಬಲ

ಜನತಾ ಕರ್ಫ್ಯೂಗೆ ಶಿವಮೊಗ್ಗ ಜನರಿಂದ ವ್ಯಾಪಕ ಬೆಂಬಲ

ಪ್ರಧಾನ‌ ಮಂತ್ರಿ ನರೇಂದ್ರ‌ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಶಿವಮೊಗ್ಗ ಜನತೆ ವ್ಯಾಪಕ ಬೆಂಬಲ ಸೂಚಿಸಿದ್ದಾರೆ. ನಗರದ ಪೆಟ್ರೋಲ್ ಬಂಕ್, ಹೋಟೆಲ್, ಬೀದಿ ಬದಿ ವ್ಯಾಪಾರ, ಆಟೋ- ಬಸ್ ಸಂಚಾರ ಬಂದ್‌ ಮಾಡಲಾಗಿದ್ದು, ಎಲ್ಲಾ ಹೋಟೆಲ್, ಬಾರ್ ಗಳು ಬಂದ್‌ ಆಗಿವೆ. ಖಾಸಗಿ ಹಾಗೂ ಕೆಎಸ್ಆರ್ ಟಿಸಿ ಬಸ್ ಗಳ ಸಂಚಾರ ಇಲ್ಲ. ಬೀದಿ ಬದಿ ವ್ಯಾಪರಸ್ಥರೂ ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿದ್ದಾರೆ. ಮೆಡಿಕಲ್ ಶಾಪ್ ಹಾಗೂ ಆಸ್ಪತ್ರೆಗಳು ತೆರೆದಿವೆ. ಆದರೆ ರಾಜ್ಯದ ಬೇರೆ ಬೇರೆ ಭಾಗದಿಂದ ಬಂದವರು ಬಸ್ ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಆಟೋ, ಲಾರಿ, ಟೆಂಪೊ ಹತ್ತಿ ಜನರು ಮನೆಗೆ ಪಯಣಿಸುತ್ತಿರುವ ದೃಶ್ಯ ಕಂಡುಬಂದಿತು.

 ಜನತಾ ಕರ್ಫ್ಯೂಗೆ ಕೃಷ್ಣನಗರಿ ಸ್ತಬ್ಧ

ಜನತಾ ಕರ್ಫ್ಯೂಗೆ ಕೃಷ್ಣನಗರಿ ಸ್ತಬ್ಧ

ದೇಶಾದ್ಯಂತ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಕೃಷ್ಣನಗರಿ ಸಂಪೂರ್ಣ ಸ್ತಬ್ಧಗೊಂಡಿದೆ. ಕೊರೊನಾ ವಿರುದ್ಧದ ಹೋರಾಟಕ್ಕೆ ಉಡುಪಿ ಜನತೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ನಗರ ಮತ್ತು ವಸತಿ ಪ್ರದೇಶಗಳು ಸಂಪೂರ್ಣ ಬಂದ್ ಆಗಿವೆ. ಭಾರತ್ ಬಂದನ್ನೂ ಮೀರಿಸುವ ಮೌನ ಆವರಿಸಿದೆ. ಏಳರ ನಂತರ ಜನರು
ಮನೆಗಳಿಂದ ಹೊರಬಾರದೇ ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿದರು. ಬಸ್ ,ಕ್ಯಾಬ್, ಆಟೋ ರಿಕ್ಷಾಗಳೂ ಕೂಡ ರಸ್ತೆಗಿಳಿಯಲಿಲ್ಲ.ಇದೇ ಮೊದಲ ಬಾರಿಗೆ ಕ್ರಿಶ್ಚಿಯನ್ ಬಾಂಧವರು ಅಧಿಕ ಸಂಖ್ಯೆಯಲ್ಲಿರುವ ಉಡುಪಿಯಲ್ಲಿ ಭಾನುವಾರದ ಸಾಮೂಹಿಕ ಪ್ರಾರ್ಥನೆ ಇರಲಿಲ್ಲ. ಮಾರ್ಚ್ ಮೂವತ್ತೊಂದರ ತನಕ‌ ಚರ್ಚ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸ್ಥಗಿತಗೊಳಿಸಲಾಗಿದೆ.

 ಬಿಕೋ ಎನ್ನುತ್ತಿದೆ ಕೋಟೆನಾಡು

ಬಿಕೋ ಎನ್ನುತ್ತಿದೆ ಕೋಟೆನಾಡು

ಚಿತ್ರದುರ್ಗ ಜಿಲ್ಲೆಯಲ್ಲಿ ಜನರು ಕರ್ಫ್ಯೂಗೆ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಬಸ್ ಗಳು ರಸ್ತೆಗಿಳಿದಿಲ್ಲ. ಹೀಗಾಗಿ ಜಿಲ್ಲೆಯ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿವೆ. ಜನ ಸಂಚಾರವೂ ಇಲ್ಲ. ಚಿತ್ರದುರ್ಗ ಸೇರಿದಂತೆ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಹೊಸದುರ್ಗ, ಹೊಳಲ್ಕೆರೆ ಸಂಪೂರ್ಣ ನಿಶ್ಶಬ್ದವಾಗಿದೆ. ಪ್ರತಿ ನಿತ್ಯ ಜನ ಜಂಗುಳಿಯಿಂದ ತುಂಬಿರುತ್ತಿದ್ದ ಚಿತ್ರದುರ್ಗದ ಪ್ರಮುಖ ಗಾಂಧಿ ಸರ್ಕಲ್, ಮದಕರಿ ಸರ್ಕಲ್, ಕನಕ ವೃತ್ತ, ಲಕ್ಷ್ಮಿ ಬಜಾರ್, ಡಿ.ಸಿ. ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಹೋಟೆಲ್ ಗಳು ಬಂದ್ ಆಗಿದ್ದವು. ರೈಲ್ವೆ ನಿಲ್ದಾಣ ಸಹ ಜನರಿಲ್ಲದೆ ಖಾಲಿ ಖಾಲಿ ಕಾಣುತ್ತಿತ್ತು. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಹಳ್ಳಿಗಳ ಕಡೆ ಹಬ್ಬದ ತಯಾರಿ ನಡೆಯುತ್ತಿತ್ತು. ಕೆಲವರು ಮನೆ ಸ್ವಚ್ಛಗೊಳಿಸಿ ಸುಣ್ಣ, ಬಣ್ಣ ಬಳಿಯುತಿದ್ದರು. ಹಳ್ಳಿ ಜನತೆ ಹಬ್ಬದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ದೃಶ್ಯ ಕಂಡುಬಂದಿತು.

 ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕರ್ಫ್ಯೂಗೆ ಬೆಂಬಲ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕರ್ಫ್ಯೂಗೆ ಬೆಂಬಲ

ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ಹೋಟೆಲ್, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಕೆಎಸ್ಆರ್ ಟಿಸಿ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದೆ. ಆದರೂ ನಿಲ್ದಾಣದಲ್ಲಿ ಬಸ್ ಗಾಗಿ ಕೆಲ ಪ್ರಯಾಣಿಕರು ಕಾಯುತ್ತಿದ್ದ ದೃಶ್ಯ ಕಂಡುಬಂತು. ಆಟೋಗಳು, ಖಾಸಗಿ ಬಸ್ ಗಳು, ಟ್ಯಾಕ್ಸಿಗಳು ರಸ್ತೆಗೆ ಇಳಿದಿಲ್ಲ. ಜನರು ಹೊರಗೆ ಬರದೇ ತಮ್ಮ ಬೆಂಬಲ ಸೂಚಿಸಿದ್ದಾರೆ. ಚಿಕ್ಕಮಗಳೂರಿನ ಎಪಿಎಂಸಿ ಮಾರುಕಟ್ಟೆಯನ್ನು ಸಂಪೂರ್ಣ ಬಂದ್ ಮಾಡಿ ವರ್ತಕರು ಬೆಂಬಲ ಸೂಚಿಸಿದ್ದಾರೆ.

 ಕಲಬುರಗಿಯಲ್ಲಿ ಎಲ್ಲವೂ ಬಂದ್

ಕಲಬುರಗಿಯಲ್ಲಿ ಎಲ್ಲವೂ ಬಂದ್

ಬಿಸಿಲನಾಡು ಕಲಬುರಗಿಯಲ್ಲಿ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಬೆಳಗ್ಗೆಯಿಂದಲೇ ನಗರದ ಕೇಂದ್ರ ಬಸ್ ನಿಲ್ದಾಣ, ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ, ಜಗತ್ ವೃತ್ತ, ಸೂಪರ್ ಮಾರ್ಕೆಟ್ ಸೇರಿದಂತೆ ನಗರದ ಬಹುತೇಕ ಪ್ರಮುಖ ಪ್ರದೇಶಗಳು ವಾಹನ ಸಂಚಾರವಿಲ್ಲದೆ ಹಾಗೂ ಸಾರ್ವಜನಿಕರಿಲ್ಲದೆ ಬಿಕೋ ಎನ್ನುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕಫ್ಯೂ೯ಗೆ ಬೆಂಬಲ ವ್ಯಕ್ತಪಡಿಸಿ ಸಾರ್ವಜನಿಕರು ರಸ್ತೆಗಿಳಿಯದೇ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಜನತಾ ಕಫ್ಯೂ೯ಗೆ ಬೆಂಬಲ ವ್ಯಕ್ತಪಡಿಸಿ ನಗರದ ಎಲ್ಲಾ ವರ್ತಕರು ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿದ್ದು, ಇಡೀ ನಗರ ಸಂಪೂರ್ಣ ಸ್ಥಬ್ದವಾಗಿದೆ.

 ವಾಣಿಜ್ಯ ನಗರಿಯಲ್ಲಿ ತುರ್ತು ಸೇವೆ ಹೊರತುಪಡಿಸಿ ಇನ್ನೆಲ್ಲ ಬಂದ್

ವಾಣಿಜ್ಯ ನಗರಿಯಲ್ಲಿ ತುರ್ತು ಸೇವೆ ಹೊರತುಪಡಿಸಿ ಇನ್ನೆಲ್ಲ ಬಂದ್

ಪ್ರಧಾನಿ ಮನವಿಗೆ ವಾಣಿಜ್ಯ ನಗರಿ ಹುಬ್ಬಳ್ಳಿ ಜನರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹೋಟೆಲ್, ಬೀದಿ ಬದಿ ವ್ಯಾಪಾರ, ಆಟೋ, ಬಸ್ ಯಾವ ಸೇವೆಯೂ ಹುಬ್ಬಳ್ಳಿಯಲ್ಲಿ ನಡೆಯುತ್ತಿಲ್ಲ. ನಗರದ ಎಲ್ಲ ಹೋಟೆಲ್, ಬಾರ್ ಅನ್ನು ಬಂದ್ ಮಾಡಲಾಗಿದೆ. ಮುಂಗಡ ಟಿಕೆಟ್ ಕಾಯ್ದುಕೊಂಡವರಿಗೆ ಮಾತ್ರ NWKSRTC ಬಸ್ ಸೇವೆ ನೀಡಲಾಗಿದೆ. ಪೆಟ್ರೋಲ್ ಬಂಕ್ ತೆರೆದಿದ್ದು, ಕೆಲಸಗಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಮೆಡಿಕಲ್ ಶಾಪ್, ಆಸ್ಪತ್ರೆಗಳು ತೆರೆದಿವೆ. ಇದಲ್ಲದೇ ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟನ್ನು ನಡೆಸದಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಾರಸ್ಥರು ಸಂದೇಶ ಹರಿಬಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+