ಅಮಿತ್ ಶಾ ರ್ಯಾಲಿಯಲ್ಲಿನ ಈ ಫೋಟೋ ಹೇಳುತ್ತೆ '108' ಕಥೆಯಾ!
ತೆರೆದ ವ್ಯಾನಿನಲ್ಲಿ ಅಮಿತ್ ಶಾ, ಬಿಎಸ್ವೈ ಮುಂತಾದವರು ಇದ್ದರೆ, ವ್ಯಾನಿನ ಕೆಳಗೆ ನಿಂತು ಮೆರವಣಿಗೆಯದ್ದಕ್ಕೂ ಕಾರ್ಯಕರ್ತರನ್ನು ಹುರಿದುಂಬಿಸುತ್ತಾ ಬರುತ್ತಿದ್ದದ್ದು ಬಿಜೆಪಿಯ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್.
Recommended Video
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಶಿವಮೊಗ್ಗ ರೋಡ್ ಶೋ ಎಷ್ಟರ ಮಟ್ಟಿಗೆ ಯಶಸ್ವಿಯಾಗಿತ್ತು ಅಂದರೆ ಬಹುಷ: ಒಬ್ಬರೊನ್ನೊಬ್ಬರು ಮುನಿಸಿಕೊಂಡು ಕೂತಿದ್ದ ಯಡಿಯೂರಪ್ಪ ಮತ್ತು ಈಶ್ವರಪ್ಪನವರೂ ಅಂದುಕೊಂಡಿದ್ದರೋ ಇಲ್ಲವೋ ಅಷ್ಟರಮಟ್ಟಿಗೆ ಯಶಸ್ವಿಯಾಗಿತ್ತು.
ಈ ರೋಡ್ ಶೋಗೆ ಯಾವ ಪಾಟಿ ಜನ ಸೇರಿದ್ದರೆಂದರೆ ನಗರದ ರಾಮಣ್ಣ ಶೆಟ್ಟಿ ಉದ್ಯಾನವನದಿಂದ ಹೊರಟ ರ್ಯಾಲಿ ಗಾಂಧಿ ಬಜಾರ್ ಮೂಲಕ ಸಮಾವೇಶ ನಡೆದ ಮೈದಾನ ಅಂದರೆ ಸುಮಾರು ಒಂದು ಕಿಲೋಮೀಟರ್ ದಾರಿಯನ್ನು ಕ್ರಮಿಸಲು ಒಂದೂವರೆ ಗಂಟೆ ತೆಗೆದುಕೊಂಡಿತು. ರೋಡ್ ಶೋಗೆ ಹರಿದುಬಂದ ಜನವನ್ನು ನೋಡಿ ಫುಲ್ ಖುಷ್ ಆದ ಅಮಿತ್ ಶಾ ರ್ಯಾಲಿ ಉದ್ದಕ್ಕೂ ಕಾರ್ಯಕರ್ತರನ್ನು ಹುರಿದುಂಬಿಸುತ್ತಲೇ ಸಾಗಿದರು. (ಶಾಗೆ ಧರ್ಮ ಸಂಕಟ ತಂದ ಮುರುಘಾಶ್ರೀಗಳ ಮನವಿ)
ವಿಚಾರಕ್ಕೆ ಬರುವುದಾದರೆ, ಈ ಮಟ್ಟಿಗೆ ಸಮಾವೇಶ ಮತ್ತು ರೋಡ್ ಶೋ ಯಶಸ್ವಿಗೊಳಿಸಿದ ಹಿಂದಿನ ವ್ಯಕ್ತಿಯಾರು? ಯಡಿಯೂರಪ್ಪ, ಈಶ್ವರಪ್ಪ ಅಥವಾ ಈ ಕೆಳಗಿನ ಚಿತ್ರದಲ್ಲಿ ವ್ಯಾನಿನ ಮುಂದೆ ನಿಂತು ಕಾರ್ಯಕರ್ತರನ್ನು ಹುರಿದುಂಬಿಸುತ್ತಿರುವವರಾ?
" A picture is worth a thousand words" ಅನ್ನುವ ಮಾತಿನಂತೆ, ತೆರೆದ ವ್ಯಾನಿನಲ್ಲಿ ಅಮಿತ್ ಶಾ, ಬಿಎಸ್ವೈ, ಈಶ್ವರಪ್ಪ, ಅನಂತ್ ಕುಮಾರ್ ಮುಂತಾದವರು ಇದ್ದರೆ, ವ್ಯಾನಿನ ಕೆಳಗೆ ನಿಂತು ಮೆರವಣಿಗೆಯದ್ದಕ್ಕೂ ಕಾರ್ಯಕರ್ತರನ್ನು ಹುರಿದುಂಬಿಸುತ್ತಾ ಬರುತ್ತಿದ್ದದ್ದು ಬಿಜೆಪಿಯ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್.
ಪಕ್ಷ ಸಂಘಟನೆಗೆ ತಂತ್ರಗಳನ್ನು ರೂಪಿಸುವಲ್ಲಿ ಸಿದ್ಧ ಹಸ್ತರಾದ ಸಂತೋಷ್ ಅವರಿಗೆ ರಾಜ್ಯದಲ್ಲಿ ಪಕ್ಷ ಸಂಘಟನೆಯ ಹೊಣೆಯನ್ನು ನೀಡಲಾಗಿತ್ತು. ಸಂತೋಷ್ಗೆ ಅಗತ್ಯ ಸಹಕಾರ ನೀಡಿ ಎಂದು ಯಡಿಯೂರಪ್ಪಗೆ ಅಮಿತ್ ಶಾ ಸೂಚನೆಯನ್ನೂ ನೀಡಿದ್ದರು. ಇದು ಒಂದು ರೀತಿ ಬಿಎಸ್ವೈಗೆ ಸೆಟ್ ಬ್ಯಾಕ್ ಅನ್ನೋ ನಿರ್ಧಾರ ಎಂದೇ ವ್ಯಾಖ್ಯಾನಿಸಲಾಗಿತ್ತು.
ಯಡಿಯೂರಪ್ಪ ಮತ್ತು ಸಂತೋಷ್ ಒಬ್ಬರಿಗೊಬ್ಬರು ಆಗಿಬರೋಲ್ಲ ಎನ್ನುವ ವಿಷಯ ಹೊಸದೇನಲ್ಲ. ಆದರೆ, ಯಡಿಯೂರಪ್ಪನವರ ರಾಜಕೀಯ ಕರ್ಮಭೂಮಿ ಶಿವಮೊಗ್ಗದಲ್ಲೇ ಸಂತೋಷ್ ಭರ್ಜರಿ ರೋಡ್ ಶೋ ಆಯೋಜಿಸಿ, ತನ್ನ ಶಕ್ತಿಪ್ರದರ್ಶನ ಮಾಡಿದರು. (ಜೆಡಿಎಸ್ ಜತೆ ಮೈತ್ರಿ ಇಲ್ಲ: ಸ್ಪಷ್ಟಪಡಿಸಿದ ಅಮಿತ್ ಶಾ)
ರೋಡ್ ಶೋ ಉದ್ದಕ್ಕೂ ಯಡಿಯೂರಪ್ಪ ಅದ್ಯಾಕೋ ಬೇಸರದಿಂದ ಇದ್ದ ಹಾಗೇ ಅನಿಸಿದರೆ, ಸಂತೋಷ್ ಮಾತ್ರ ಉತ್ಸಾಹಭರಿತರಾಗಿ ವ್ಯಾನಿನ ಮುಂದೆ ನಡೆದುಕೊಂಡು ಬರುತ್ತಿದ್ದರು. ಚುನಾವಣೆಯ ವೇಳೆ ತಮ್ಮ ಈ ಕಾರ್ಯಕ್ರಮ ಯಶಸ್ವಿಯಾಗುವುದು ಅತ್ಯವಶ್ಯಕ ಎಂದು ಸಂತೋಷ್ ಅವರಿಗೇ ಕಾರ್ಯಕ್ರಮವನ್ನು ಆಯೋಜಿಸಲು ಅಮಿತ್ ಶಾ ಸೂಚಿಸಿದ್ದರು ಎನ್ನುವ ಮಾತು ಕೇಳಿಬರುತ್ತಿತ್ತು.
ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ವೈಮನಸ್ಸು, ಪಕ್ಷದ ಕಾರ್ಯಕ್ರಮಕ್ಕೆ ಅಡ್ಡಿಯಾಗಬಾರದೆಂದು, ಕಾರ್ಯಕರ್ತರ ಜೊತೆಗೂಡಿ ಪಕ್ಷದ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಎತ್ತಿದ ಕೈಯಾಗಿರುವ ಸಂತೋಷ್ ಅವರಿಗೇ ಬಿಜೆಪಿ ರಾಷ್ಟ್ರಾಧ್ಯಕ್ಷರು ರೋಡ್ ಶೋ ಮತ್ತು ಸಮಾವೇಶದ ಉಸ್ತುವಾರಿಯನ್ನು ನೀಡಿದ್ದರು ಎನ್ನಲಾಗುತ್ತಿದೆ.
ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ಪರಿವರ್ತನಾ ರ್ಯಾಲಿಯ ಸಮಾರೋಪದಲ್ಲೂ, ಪ್ರಧಾನಿ ಮೋದಿ ಅರಮನೆ ಮೈದಾನದೊಳಗೆ ಕಾಂಗ್ರೆಸ್ ವಿರುದ್ದ ಘರ್ಜಿಸುತ್ತಿದ್ದರೆ, ಬಿ ಎಲ್ ಸಂತೋಷ್ ಮೈದಾನದ ಹೊರಗೆ ನಿಂತು, ಟ್ರಾಫಿಕ್ ಮತ್ತು ಕಾರ್ಯಕರ್ತರನ್ನು ನಿಯಂತ್ರಿಸುತ್ತಿದ್ದರು. ಒಟ್ಟಾರೆಯಾಗಿ, ಮೇಲಿನ ಈ ಫೋಟೋ, ಹಲವು ಕಥೆಗಳನ್ನು ಹೇಳುತ್ತೆ.