'ಉಗ್ರಭಾಗ್ಯ' ಯೋಜನೆಯಡಿ ಸಾಕಿದ್ದ ಪಿಎಫ್ಐ ಬ್ಯಾನ್: ಸಿದ್ದುಗೆ ಬಿಜೆಪಿ ತಿರುಗೇಟು
ಬೆಂಗಳೂರು, ಸೆಪ್ಟಂಬರ್ 27: ನಾವು ನುಡಿದಂತೆ ನಡೆದಿದ್ದೇವೆ. ನೀವು 'ಉಗ್ರಭಾಗ್ಯ' ಯೋಜನೆಯಡಿ ಸಾಕಿದ ರಣಹದ್ದುಗಳನ್ನು ಭೇಟೆಯಾಡಿದ್ದೇವೆ ಎಂದು ವಿರೋಧ ಪಕ್ಷದ ನಾಯಕರು ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ.
ಕೇಂದ್ರ ಗೃಹ ಸಚಿವಾಲಯವು ಬುಧವಾರದಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸೇರಿ ಎಂಟು ಸಂಘಟನೆಯನ್ನು ನಿಷೇಧಿಸಿ ಆದೇಶಿಸಿತು. ಇದರ ಬೆನ್ನಲ್ಲೆ ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಸಿದ್ದರಾಮಯ್ಯ ಸೇರಿದಂತೆ ಪ್ರತಿಪಕ್ಷ ಕಾಂಗ್ರೆಸ್ಗೆ ತಿರುಗೇಟು ನೀಡಿದೆ.
ದೇಶದಾದ್ಯಂತ ಗಲಭೆ, ದಂಗೆ ಕಾರ್ಯದಲ್ಲಿ ಪಿಎಫ್ಐ ನಿರತವಾಗಿತ್ತು. ಸಮಾಜ ವಿದ್ರೋಹಿ ಕೆಲಸಗಳಲ್ಲಿ ತೊಡಗಿಕೊಂಡಿತ್ತು. ಆತಂಕವಾದಿ ಘಟನೆಗಳಲ್ಲೂ ಅದು ಒಳಗೊಂಡಿತ್ತು. ದೇಶವನ್ನು ಅಸ್ಥಿರಗೊಳಿಸಲು ವಿದೇಶದಿಂದ ಹಣ ಪಡೆಯುತ್ತಿದ್ದ ಈ ಸಂಸ್ಥೆಯನ್ನು ಇದೀಗ ನಿಷೇಧಿಸಿದ್ದು ಅತ್ಯಂತ ಉತ್ತಮ ನಿರ್ಧಾರ ಎಂದು ರಾಜ್ಯ ಬಿಜೆಪಿ ಹೇಳಿದೆ.
ಆಗಸ್ಟ್ನಲ್ಲಿ ಬಿಜೆಪಿ ಯುವ ಮೋರ್ಚಾ ಘಟಕದ ದಕ್ಷಿಣ ಕನ್ನಡದ ಪ್ರವೀಣ್ ನೆಟ್ಟಾರು ಹತ್ಯೆಗೈದ ಸಂದರ್ಭದಲ್ಲಿ ಎಂದಿನಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ), ಸೊಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಸಂಘಟನೆಗಳ ಹೆಸರು ಕೇಳಿ ಬಂದಿತ್ತು.

ನಿಷೇಧಿಸದೇ ಯಾಕೆ ಸುಮ್ಮನಿದ್ದೀರಿ: ಸಿದ್ದು
ಅಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪಿಎಫ್ಐ, ಎಸ್ಡಿಪಿಐ ಈ ಯಾವ ಸಂಘಟನೆಗಳೇ ಆಗಲಿ ಸಮಾಜದ ಸಾಮರಸ್ಯ ಹಾಳುಮಾಡುತ್ತಿವೆ, ಗಲಭೆಗಳಿಗೆ ಕಾರಣವಾಗುತ್ತಿವೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಇದ್ದರೆ ನಿಷೇಧಿಸಲಿ. ಬಿಜೆಪಿ ಸರ್ಕಾರ ಅಂತಹ ಸಂಘಟನೆಗಳನ್ನು ನಿಷೇಧ ಮಾಡಲಿ. ಕೇಂದ್ರ ಮತ್ತು ರಾಜ್ಯದ ಎರಡು ಕಡೆಗಳಲ್ಲಿ ನಿಮ್ಮದೇ ಬಿಜೆಪಿ ಸರ್ಕಾರ ಇದೆ. ನಿಷೇಧಿಸಿದೇ ಯಾಕೆ ಸುಮ್ಮನಿದ್ದೀರಿ ಎಂದು ಅವರು ಟ್ವಿಟ್ ಮಾಡಿದ್ದರು.
ಪಿಎಫ್ಐ ಮೇಲೆ ಕಣ್ಣಿಟ್ಟಿದ್ದ ಕೇಂದ್ರ ಗೃಹ ಸಚಿವಾಲಯವು ಬುಧವಾರ ಪಿಎಫ್ಐ ನಿಷೇಧಿಸಿ ಆದೇಶ ಹೊರಡಿಸಿದೆ. ಹೀಗಾಗಿ ಉಗ್ರಭಾಗ್ಯ ಯೋಜನೆಯಡಿ ಸಾಕಿದ ರಣಹದ್ದುಗಳನ್ನು, ದೇಶ ವಿರೋಧಿ ಸಂಘಟನೆಯನ್ನು ಭೇಟಿ ಆಡಿದ್ದೇವೆ. ಬಿಜೆಪಿ ಸರ್ಕಾರ ನುಡಿದಂತೆ ನಡೆದಿದೆ ಎಂದ ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

ಪಿಎಫ್ಐ ವಿರುದ್ಧ 175 ಕೇಸ್ ಹಿಂಪಡೆದಿದ್ದ ಕಾಂಗ್ರೆಸ್
ಇನ್ನೂ ಸಿದ್ದರಾಮಯ್ಯ ಅವರು ಮಾಡಿದ ಅಂದಿನ ಟ್ವೀಟ್ಗೆ ಸಾಕಷ್ಟು ಮಂದಿ ಕಾಮೆಂಟುಗಳನ್ನು ಮಾಡಿದ್ದು, ದಾಖಲೆಗಳು ಇದ್ದರೆ ಸಾಮರಸ್ಯ ಕದಡುವ ಸಂಘಟನೆಗಳನ್ನು ಬ್ಯಾನ್ ಮಾಡಿ ಎಂಬ ನಿಮ್ಮ ಆಸೆ ಈಡೇರಿದೆ ಎಂದಿದ್ದಾರೆ. 2015ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಇದೇ ಪಿಎಫ್ಐ ಸಂಘಟನೆ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ಪೈಕಿ 175 ಪ್ರಕರಣಗಳನ್ನು ಕಾಂಗ್ರೆಸ್ ಕೈಬಿಡಲು ಆದೇಶಿಸಿತ್ತು. ಈ ಬಗ್ಗೆ ಅಂದು ವರದಿಯಾಗಿದ್ದ ಪೇಪರ್ ಕಟಿಂಗ್ಸ್ಗಳನ್ನು ಕಾಮೆಂಟ್ ಹಾಕಿದ್ದಾರೆ.

ಕೇಸ್ ವಾಪಾಸ್ ಪಡೆದಿದ್ದೆ ಅಶಾಂತಿಗೆ ಕಾರಣ
ಇನ್ನೂ ಕೆಲವರು ಕಾಂಗ್ರೆಸ್ ಸರ್ಕಾರ ಪಿಎಫ್ಐ, ಎಸ್ಡಿಪಿಐ ವಿರುದ್ಧದ ಪ್ರಕರಣಗಳನ್ನು ವಾಪಾಸ್ ಪಡೆದಿರುವುದು ಸಮಾಜದ ಅಶಾಂತಿಗೆ ಕಾರಣವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಈ ಕಾರಣಕ್ಕೆ ಇದೀಗ ಬಿಜೆಪಿಯು ನಿವು ಸಾಕಿದ ಸಂಘಟನೆಗಳು ಎಂದು ಸಿದ್ದರಾಮಯ್ಯ ಅವರ ಕಾಲೆಳೆದಿದೆ. ಅಂದು ಎರಡು ಕಡೆ ನಿಮ್ಮದೇ ಸರ್ಕಾರವಿದೇ ನಿಷೇಧ ಮಾಡಿ ಎಂದು ಸಿದ್ದರಾಮ್ಯಯ ಹಾಕಿದ್ದ ಟ್ವೀಟ್ ಪೋಸ್ಟ ಅನ್ನು ಬಿಜೆಪಿ ಮರಳಿ ಟ್ವೀಟ್ ಮಾಡಿದೆ.

ಪಿಎಫ್ಐ ಮೇಲೆ ಕರುಣೆ ತೋರಲು ಕಾರಣವೇನು?
ಅಧಿಕಾರದಲ್ಲಿದ್ದಾಗ 'ಉಗ್ರಭಾಗ್ಯ' ಯೋಜನೆಯಡಿ ಪಿಎಫ್ಐ ಮತಾಂಧರ 175 ಕೇಸುಗಳನ್ನು ರದ್ದುಗೊಳಿಸಿದ್ದು ಯಾಕೆ?.
ಕೊಲೆ, ಹಿಂಸಾಚಾರ, ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರೂ ಅಂದು ಕಾಂಗ್ರೆಸ್ ಪಕ್ಷ ಅನುಕಂಪ ತೋರಿದ್ದು ಏಕೆ?. ಅಲ್ಲದೇ ನಿಮ್ಮ ಆಡಳಿತದಲ್ಲೇ ಪಿಎಫ್ಐ ಮೇಲಿನ 175 ಕೇಸ್ ಹಿಂಪಡೆದಿದ್ದು ಏಕೆ? ಎಂದು ಪ್ರಶ್ನಿಸಿರುವ ಬಿಜೆಪಿ ಈ ಬಗ್ಗೆ ನಿಮ್ಮ ಬಳಿ ಉತ್ತರಿವಿದೇಯೆ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಸರಣಿ ಟ್ವೀಟ್ಗಳ ಮೂಲಕ ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.
ಇದೀಗ ಪಿಎಫ್ಐ ನಿಷೇಧವಾಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರು, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಬಾಯಿ ಬಿಡದಿರುವುದು ಏಕೆ ಎಂದು ಬಿಜೆಪಿ ಪ್ರಶ್ನಿಸಿದೆ.












Click it and Unblock the Notifications