ಅಳತೆ ಮತ್ತು ತೂಕ ಇಲಾಖೆ ಲಂಚಾವತಾರ ಬಗ್ಗೆ ಎಸಿಬಿಗೆ ದೂರು
ಬೆಂಗಳೂರು, ಆಗಸ್ಟ್ 07: ಪೆಟ್ರೋಲ್ ಬಂಕ್ ನಿಂದ ಹಫ್ತಾ ವಸೂಲಿ ಮಾಡಿದ ಆರೋಪ ಎದುರಿಸುತ್ತಿರುವ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿ ಸೀಮಾ ಕೆ. ಮ್ಯಾಗಿ ಹಾಗೂ ಏಜೆಂಟ್ ಶಿವಕುಮಾರ್ ವಿರುದ್ಧ ಎಸಿಬಿ ಬೆಂಗಳೂರು ಘಟಕದಲ್ಲಿ ದೂರು ದಾಖಲಾಗಿದೆ. ಆರ್ಟಿಐ ಕಾರ್ಯಕರ್ತ ಪಿಳ್ಳಯ್ಯ ಎಂಬುವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದಾರೆ.
ನಾನು ನೀಡಿದ ದೂರಿನ ಆಧಾರದ ಮೇಲೆ ಕಾನೂನು ಮತ್ತು ಮಾಪನ ಶಾಸ್ತ್ರ ( ಅಳತೆ ಮತ್ತು ತೂಕ) ಇಲಾಖೆಯಲ್ಲಿದ್ದ 20 ಏಜೆಂಟರನ್ನು ಎಸಿಬಿ ಪೊಲೀಸರು 2019 ರಲ್ಲಿ ಬಂಧಿಸಿದ್ದರು. ಲಕ್ಷಾಂತರ ರೂಪಾಯಿ ಲಂಚವನ್ನು ಸಹ ವಶಪಡಿಸಿಕೊಂಡಿದ್ದರು.
ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲಿಗೆ ಹೋಗಿದ್ದ ಏಜೆಂಟ್ ಶಿವಕುಮಾರ್ ಸರ್ಕಾರಿ ಜೀಪಿನಲ್ಲಿ ಮತ್ತೆ ಓಡಾಡುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿರುವುದು ಆಕಸ್ಮಿಕ ಗೊತ್ತಾಯಿತು. ಇದರ ಬೆನ್ನು ಬಿದ್ದಾಗ ಬೂದಿಗೆರೆ ಕ್ರಾಸ್ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನ ಮಾಲೀಕರಿಂದ ಹಫ್ತಾ ವಸೂಲಿ ಮಾಡಿದ್ದಕ್ಕೆ ಸಾಕ್ಷ ಸಂಗ್ರಹಿಸಿ ದೂರು ನೀಡಿದ್ದೇನೆ ಎಂದು ದೂರುದಾರ ಪಿಳ್ಳಯ್ಯ "ಒನ್ ಇಂಡಿಯಾ ಕನ್ನಡ"ಕ್ಕೆ ತಿಳಿಸಿದ್ದಾರೆ.

ಎಸಿಬಿಗೆ ದೂರು ಸಲ್ಲಿಸಿದ ದೂರುದಾರ
ವೃತ್ತಿಯಲ್ಲಿ ಪತ್ರಕರ್ತನೂ ಆಗಿರುವ ಪಿಳ್ಳಯ್ಯ ದಿ. ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪ್ರತಿಮೆ ಅನಾವರಣ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಕೆ.ಆರ್. ಪುರಂನಲ್ಲಿ ಮಂಗಗಳಿಗೆ ಆಹಾರ ನೀಡುವ ಜತೆಗೆ ಮೃತ ಮಂಗಕ್ಕೆ ಅಂತ್ಯ ಸಂಸ್ಕಾರ ಮಾಡಿಸುವ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಪಿಳ್ಯಯ್ಯ ಗುರುತಿಸಿಕೊಂಡಿದ್ದಾರೆ. ಕಾನೂನು ಮಾಪನ ಇಲಾಖೆಯಲ್ಲಿ ಬೇರು ಬಿಟ್ಟಿದ್ದ 20 ಭ್ರಷ್ಟ ಏಜೆಂಟರನ್ನು ಎಸಿಬಿ ಬಲೆಗೆ ಕೆಡವಿದ್ದರು.
ಇತ್ತೀಚೆಗೆ ಹಾಸನದಲ್ಲಿ ಹೊರ ಬಂದ ಬೇಬಿ ಟ್ಯಾಂಕ್ ಪೆಟ್ರೋಲ್ ಕದಿಯವ ದಂಧೆ ಹೊರ ಬರುವಂತೆ ಮಾಡಿದ್ದು ಪಿಳ್ಳಯ್ಯ ಅವರೇ. ಇವರು ನೀಡಿದ ದೂರಿನ ಮೇರೆಗೆ ಹಾಸನ ಪೊಲೀಸರು ಪೊಲೀಸ್ ಪೇದೆಯ ಬೇಬಿ ಟ್ಯಾಂಕ್ ಪೆಟ್ರೋಲ್ ದಂಧೆಯನ್ನು ಬಯಲಿಗೆ ಎಳೆದಿದ್ದರು. ಇದೀಗ ಕೆಎಎಸ್ ಅಧಿಕಾರಿ ಶೀಮಾ ಕೆ. ಮಾಗಿ ಅವರ ಭ್ರಷ್ಟಾಚಾರವನ್ನು ಬೀದಿಯಲ್ಲೇ ಸೆರೆ ಹಿಡಿದು ಇಲಾಖೆಗೆ ದೂರು ನೀಡಿದ್ದರು. ಇಲಾಖೆಯಿಂದ ಯಾವುದೇ ಕ್ರಮ ಜರುಗಿಸದೇ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ಎಸಿಬಿಗೆ ಹದಿನಾರು ನಿಮಿಷದ ವಿಡಿಯೋ ಸಮೇತ ಪಿಳ್ಳಯ್ಯ ದೂರು ನೀಡಿದ್ದಾರೆ.

ದಾರಿಯಲ್ಲಿ ಹೋಗುವಾಗ ಅಕ್ರಮ ಸೆರೆ
ಕೆಲಸದ ನಿಮಿತ್ತ ನಾನು ಬೂದಿಗೆರೆಯಿಂದ ದೇವನಹಳ್ಳಿಗೆ ಹೋಗುತ್ತಿದ್ದೆ. ಪೆಟ್ರೋಲ್ ಬಂಕ್ ಸಮೀಪ ಸರ್ಕಾರಿ ಜೀಪು ಪಾಸ್ ಆಯಿತು. ನಾನು ನನ್ನ ವಾಹನಕ್ಕೆ ಪೆಟ್ರೊಲ್ ಹಾಕಿಸುವಾಗ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಜೀಪು ಅಲ್ಲಿಯೇ ಬಂದು ನಿಂತಿತು.
ಅದರಿಂದ ಒಬ್ಬ ಅಧಿಕಾರಿ ಕೆಳಗೆ ಇಳಿದು ಪೆಟ್ರೋಲ್ ಬಂಕ್ ಕಚೇರಿಗೆ ಹೋದರು. ಕಾರಿನಿಂದ ಏಜೆಂಟ್ ಶಿವಕುಮಾರ್ ಇಳಿದಿದ್ದು ನನಗೆ ಅನುಮಾನ ಮೂಡಿಸಿತು. ನಾನು ನೀಡಿದ್ದ ದೂರಿನ ಮೇರೆಗೆ ಎರಡು ವರ್ಷದ ಹಿಂದೆ ಎಸಿಬಿ ಪೊಲೀಸರ ಬಂಧನಕ್ಕೆ ಒಳಗಾಗಿದ್ದವ. ನನಗೆ ಅನುಮಾನ ಬಂದು ವಿಡಿಯೋ ರೆಕಾರ್ಡ್ ಮಾಡಿಕೊಂಡೆ.
ಕಾನೂನು ಮಾಪನ ಇಲಾಖೆಯ ಅಧಿಕಾರಿ ಹೆಸರಿನಲ್ಲಿ ಮಾಮೂಲಿ ವಸೂಲಿ ಮಾಡುತ್ತಿದ್ದನ್ನು ಸೆರೆ ಹಿಡಿದಿದ್ದು, ಇಲಾಖೆಯ ಕೆಲವು ಪ್ರಾಮಾಣಿಕ ಇನ್ಸ್ ಪೆಕ್ಟರ್ ಗಳ ಹೆಸರು ಹೇಳಿಕೊಂಡು ಏಜೆಂಟರು ಪೆಟ್ರೋಲ್ ಬಂಕ್ ನಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಅಕ್ರಮದ ಬಗ್ಗೆ ಕಾನೂನು ಮಾಪನ ಶಾಸ್ತ್ರದ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ಕೊಟ್ಟರೂ ಯಾವುದೇ ಕ್ರಮ ಜರುಗಿಸಲಿಲ್ಲ. ಹೀಗಾಗಿ ಎಸಿಬಿಗೆ ದೂರು ನೀಡಿದ್ದೇನೆ. ಕೂಡಲೇ ಆರೋಪಿತ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಮನ್ಸ್ ಉತ್ತರ ಕೊಡದೇ ಪ್ರಭಾವ
ಸಹಾಯಕ ನಿಯಂತ್ರಕಿ ಸೀಮಾ ಮಾಗಿ ಲಂಚ ಪ್ರಕರಣ ಸಂಬಂಧ ಒನ್ ಇಂಡಿಯಾ ಕನ್ನಡ ವರದಿ ಮಾಡಿದ ಬೆನ್ನಲ್ಲೇ ಇಲಾಖೆಯ ಮುಖ್ಯ ನಿಯಂತ್ರಕರು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಆದರೆ, ತನ್ನ ಮೇಲೆ ಯಾವುದೇ ಕ್ರಮ ಜರುಗಿಸದಂತೆ ಸೀಮಾ ಪರ ಕೆಲವರು ಶಾಸಕರು ಹಾಗೂ ಉನ್ನತ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೆಳಗಾವಿ ಮೂಲದ ಶಾಸಕರೊಬ್ಬರು ಸೀಮಾ ಮಾಗಿ ಮೇಲೆ ಯಾವುದೇ ಕ್ರಮ ಜರುಗಿಸದಂತೆ ದೊಟ್ಟ ಮಟ್ಟದಲ್ಲಿ ಪ್ರಭಾವ ಹಾಕಿಸುತ್ತಿದ್ದಾರೆ. ಇನ್ನು ಸೀಮಾ ಅವರ ಪತಿ ಕೂಡ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದು, ಅವರಿಗೆ ಪರಿಚಿತ ಅಧಿಕಾರಿ ವಲಯದಿಂದಲೂ ಪ್ರಭಾವ ಹಾಕಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಎಸಿಬಿಯಲ್ಲಿ ದಾಖಲಾಗಿರುವ ದೂರಿನ ಸಂಬಂಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲು ಎಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ.
Recommended Video

OneIndiakananda Report
ಸಹಾಯಕ ನಿಯಂತ್ರಣಾಧಿಕಾರಿ ಸೀಮಾ ಮ್ಯಾಗಿ ಲಂಚಾವತಾರ ವರದಿ ಮಾಡಿದ್ದು ಒನ್ ಇಂಡಿಯಾ ಕನ್ನಡ. ಏಜೆಂಟ್ ಶಿವಕುಮರ್ ಮೂಲಕ ಬೂದಿಗೆರೆ ಕ್ರಾಸ್ ಬಳಿಯಿರುವ ಪೆಟ್ರೋಲ್ ಬಂಕ್ ನಲ್ಲಿ ಹಣ ವಸಲಿ ಮಾಡಿ ಸಿಕ್ಕಿಬಿದ್ದಿದ್ದರು. ಈ ಕುರಿತ ವಿಡಿಯೊ ಆಧರಿಸಿ ಒನ್ ಇಂಡಿಯಾ ಕನ್ನಡ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಬಿತ್ತರಿಸುತ್ತಿದ್ದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆಯ ಉನ್ನತ ಅಧಿಕಾರಿಗಳು ಮೂರು ಅಂಶಗಳನ್ನು ಮುಂದಿಟ್ಟು ಉತ್ತರ ನೀಡುವಂತೆ ಸೂಚಿಸಿದ್ದರು. ಹಫ್ತಾ ವಸೂಲಿ ಮಾಡಿರುವ ಘಟನೆ ಸಂಬಂಧ ಒಂದಡೆ ಇಲಾಖಾ ವಿಚಾರಣೆ ನಡೆಯುತ್ತಿದೆ. ಮತ್ತೊಂದಡೆ ಎಸಿಬಿ ಅಧಿಕಾರಿಗಳ ತನಿಖೆಯೂ ಶುರುವಾಗಿದೆ.












Click it and Unblock the Notifications