ಮಾನನಷ್ಟ ಮೊಕದ್ದಮೆ ಬೆನ್ನಲ್ಲೇ ಎಸಿಬಿ ತನಿಖೆಗೆ ಡಿ. ರೂಪಾ ಆಗ್ರಹ
Recommended Video

ಬೆಂಗಳೂರು, ನವೆಂಬರ್ 29: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಬಯಲಿಗೆಳೆದಿದ್ದ ಡಿಐಜಿ ಡಿ. ರೂಪಾ ಈ ಸಂಬಂಧ ಎಸಿಬಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಡಿ. ರೂಪಾ ವಿರುದ್ಧ ಬಂಧೀಖಾನೆ ವಿಭಾಗದ ಮುಖ್ಯಸ್ಥರಾಗಿದ್ದು ನಿವೃತ್ತರಾಗಿರುವ ಎಂಎನ್ ಸತ್ಯನಾರಾಯಣ ರಾವ್ 20 ಕೋಟಿ ರೂಪಾಯಿ ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬೆನ್ನಿಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಜೈಲಿನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಎಸಿಬಿ ತನಿಖೆಯಾಗಬೇಕು ಎಂದು ರೂಪಾ ಒತ್ತಾಯಿಸಿದ್ದಾರೆ. "ಜೈಲಿನಲ್ಲಿ ಅಕ್ರಮಗಳು ನಡೆದಿವೆ ಮತ್ತು ಕೆಲವು ಖೈದಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗಿತ್ತು ಎಂಬುದು ವಿನಯ್ ಕುಮಾರ್ ವರದಿಯಲ್ಲಿ ಬಹಿರಂಗವಾಗಿದೆ. ಇದೀಗ ಯಾಕೆ ವಿಶೇಷ ಸಲತ್ತುಗಳನ್ನು ನೀಡಲಾಗಿತ್ತು ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ ಮತ್ತು ಈ ಕುರಿತು ಎಸಿಬಿ ತನಿಖೆ ನಡೆಯಬೇಕು. ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಮತ್ತು ಈ ಪ್ರಕರಣದಲ್ಲಿ ಎಸಿಬಿ ತನಿಖೆ ನಡೆಯಬೇಕು ಎಂದು ಆಗ್ರಹಿಸುತ್ತೇನೆ," ಎಂದು ಅವರು ಹೇಳಿದ್ದಾರೆ.
ಜೈಲಿನ ಅಧಿಕಾರಿಗಳಿಗೆ ಲಂಚ ನೀಡಲಾಗಿತ್ತು ಎಂದು ಹೇಳಿಕೆ ನೀಡಿದ್ದ ರೂಪಾ ವಿರುದ್ಧ ಸತ್ಯನಾರಾಯಣ ರಾವ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಇದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸುವುದಾಗಿ ರೂಪಾ ಈಗಾಗಲೇ ಹೇಳಿದ್ದಾರೆ.
ಜೈಲಿನಲ್ಲಿ ಅಕ್ರಮಗಳ ವಾಸನೆ ಹೊರ ಬಂದ ನಂತರ ಸತ್ಯನಾರಾಯಣ ರಾವ್ ನಿವೃತ್ತರಾಗಿದ್ದರು. ಈ ಕುರಿತು ತನಿಖೆ ನಡೆಸಲು ಸರಕಾರ ನೇಮಿಸಿದ್ದ ತನಿಖಾ ಸಮಿತಿ ವರದಿ ನೀಡಿದ್ದು ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಬೆಟ್ಟು ಮಾಡಿದೆ ಆದರೆ ಭ್ರಷ್ಟಾಚಾರ ಆರೋಪಗಳನ್ನು ವರದಿಯಿಂದ ಕೈ ಬಿಟ್ಟಿದೆ.












Click it and Unblock the Notifications